ಬೆಂಗಳೂರು: ನಿಮ್ಮ ಕನ್ನಡ ನ್ಯೂಸ್ ನೌ ನಿನ್ನೆಯಂದು ಪ್ರಯಾಣಿಕರ ಊಟದ ಹೆಸರಿನಲ್ಲಿ ಭ್ರಷ್ಟಾಚಾರ: ಶಕ್ತಿಯಿಂದ KSRTCಗೆ ಭಿಕ್ಷಾಟನೆಯ ಸ್ಥಿತಿಯೇ ಎಂದು ಸಾರಿಗೆ ಮಂತ್ರಿಗೆ ನೆಟ್ಟಿಗರ ತರಾಟೆ ಅಂತ ಸುದ್ದಿ ಪ್ರಕಟಿಸಿತ್ತು. ಈ ಬಗ್ಗೆ ಕೆ ಎಸ್ ಆರ್ ಟಿಸಿ ಸ್ಪಷ್ಟನೆ ನೀಡಿದೆ. ಅದೇನು ಅಂತ ಮುಂದೆ ಓದಿ.
ಈ ಕುರಿತಂತೆ ಇಂದು ಕೆ ಎಸ್ ಆರ್ ಟಿಸಿಯಿಂದ ಸ್ಪಷ್ಟನಾ ಹೇಳಿಕೆ ಬಿಡುಗಡೆ ಮಾಡಿದ್ದು, ಅದರಲ್ಲಿ ನಿಗಮದ ಸಾರಿಗೆಗಳನ್ನು ತಿಂಡಿ, ಊಟೋಪಚಾರ, ಪ್ರಯಾಣಿಕರ ನೈಸರ್ಗಿಕ ಕರೆ ಮತ್ತು ಲಘು ವಿಶ್ರಾಂತಿಗಾಗಿ ಮಾರ್ಗಬದಿಯ ಫಲಹಾರ ಮಂದಿರಗಳ ಬಳಿಯಲ್ಲಿ ನಿಲುಗಡೆ ನೀಡುವ ಪದ್ಧತಿ ಕಳೆದ 20 ವರ್ಷಗಳಿಂದ ಚಾಲ್ತಿಯಲ್ಲಿರುತ್ತದೆ ಎಂಬುದಾಗಿ ತಿಳಿಸಿದೆ.
ಸಾರಿಗೆಗಳನ್ನು ಮಾರ್ಗಬದಿಯ ಫಲಹಾರ ಮಂದಿರಗಳ ಬಳಿಯಲ್ಲಿ ನಿಲುಗಡೆ ನೀಡುವುದಕ್ಕೂ, ಶಕ್ತಿ ಯೋಜನೆಗೂ ಯಾವುದೇ ಸಂಬಂಧವಿರುವುದಿಲ್ಲ. ನಿಗಮದ ನಿಯಮಾವಳಿ ಪ್ರಕಾರ ಮಾರ್ಗಬದಿಯ ಫಲಹಾರ ಮಂದಿರಗಳನ್ನು ಪರಿವೀಕ್ಷಣೆ ನಡೆಸಿ, ಗುರುತಿಸಲು ಹಾಗೂ ಬಸ್ಸುಗಳ ನಿಲುಗಡೆಗಾಗಿ ಕರಾರು ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದೆ.
ನಿಗಮವು ರಾಜ್ಯ / ಅಂತರರಾಜ್ಯ ಮಾರ್ಗಗಳಲ್ಲಿ ವಾಹನಗಳನ್ನು ಕಾರ್ಯಾಚರಣೆ ಮಾಡುತ್ತಿದ್ದು, ನಿಗಮದ ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು, ಮಹಿಳೆ ಪ್ರಯಾಣಿಕರು, ಮಕ್ಕಳು, ವೃದ್ದರನ್ನು ಗಮನದಲ್ಲಿರಿಸಿಕೊಂಡು ಪ್ರತಿ ದೂರ ಪ್ರಯಾಣದ (2 ರಿಂದ 2.5 ಗಂಟೆ ನಂತರ) ನಂತರ ಪ್ರಯಾಣಿಕರ ನೈಸರ್ಗಿಕ ಕರೆ, ಊಟೋಪಚಾರ ಹಾಗೂ ಲಘು ವಿಶ್ರಾಂತಿಗಾಗಿ ಮಾರ್ಗಬದಿಯ ಫಲಹಾರ ಮಂದಿರಗಳಲ್ಲಿ ನಿಲುಗಡೆ ನೀಡಲಾಗುತ್ತಿದೆ ಎಂಬುದಾಗಿ ಸ್ಪಷ್ಟ ಪಡಿಸಿದೆ.
ಬೆಂಗಳೂರು – ಹಾಸನ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಟೆಲ್ ಹರ್ಷ ಗ್ರಾಂಡ್, ಹಾಳಾಲ್ ಗೇಟ್ ಬಳಿ ಬೆಂಗಳೂರು ಕೇಂದ್ರೀಯ ಹಾಗೂ ಮಂಗಳೂರು ವಿಭಾಗದ ಐಷಾರಾಮಿ ವಾಹನಗಳನ್ನು (ಐರಾವತ ಕ್ಲಬ್ ಕ್ಸಾಸ್, ಇವಿ ಪವರ್ ಪ್ಲಸ್) ನಿಲುಗಡೆಗೊಳಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಸದರಿ ಫಲಹಾರ ಮಂದಿರದಲ್ಲಿ ಉತ್ತಮ ದರ್ಜೆಯ ಮೂಲಭೂತ ಸೌಕರ್ಯಗಳು ಲಭ್ಯವಿರುವುದರಿಂದ ಐಷರಾಮಿ ವಾಹನಗಳಲ್ಲಿನ ಪ್ರಯಾಣಿಕರ ಅನುಕೂಲಕ್ಕಾಗಿ, ಸದರಿ ಫಲಹಾರ ಮಂದಿರವನ್ನು ನಿಯಮಾವಳಿಯಂತೆ ಎರಡು ವರುಷಗಳ ಹಿಂದೆ ಆಯ್ಕೆ ಮಾಡಲಾಗಿರುತ್ತದೆ ಎಂದಿದೆ.
ಇಲ್ಲಿಯವರೆಗೂ ಸದರಿ ಹೋಟೆಲ್ ಬಗ್ಗೆ ಯಾವುದೇ ದೂರು ಪ್ರಯಾಣಿಕರಿಂದ ದಾಖಲಾಗಿರುವುದಿಲ್ಲ. ದಿನಾಂಕ 30.05.2024 ರಂದು ಬೆಂಗಳೂರು-ಮಂಗಳೂರು ಮಾರ್ಗದ ಮಲ್ಟಿ ಆಕ್ಸಲ್ ವೋಲ್ವೋ ಬಸ್ಸಿನ ಪ್ರಯಾಣಿಕರು ಟ್ವಿಟ್ಟರ್ ಮೂಲಕ ನೀಡಿರುವ ದೂರಿನ ಸಂಬಂಧ ನಿಯಮಾವಳಿಯಂತೆ ವಿಚಾರಣೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ತಿಳಿಸಿದೆ.
ರಾಜ್ಯದ ‘ಶಾಲಾ-ಕಾಲೇಜು ವಿದ್ಯಾರ್ಥಿ’ಗಳೇ ಗಮನಿಸಿ: KSRTCಯಿಂದ ‘ವಿದ್ಯಾರ್ಥಿ ಬಸ್ ಪಾಸ್’ಗೆ ಅರ್ಜಿ ಆಹ್ವಾನ