ಬೆಂಗಳೂರು: ಮಂಗಳೂರಿನ ಉಳ್ಳಾಲದ ತಲಕವಾಡಿಯ ಟೋಲ್ ಗೇಟ್ ಬಳಿಯಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ಡಿಕ್ಕಿಯಾಗಿ ಆರು ಮಂದಿ ದುರ್ಮರಣ ಹೊಂದಿದ್ದಾರೆ. ಈ ಘಟನೆಯ ಕುರಿತಂತೆ ಕೆ ಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕರಾದಂತ ಅಕ್ರಂ ಪಾಷ ಅವರು ಈ ಕೆಳಕಂಡ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ದಿನಾಂಕ : 28.08.2025 ರಂದು ವಿಭಾಗದ ಮಂಗಳೂರು-1ನೇ ಘಟಕದ ವಾಹನಸಂಖ್ಯೆ : KA19F3407 ಮಾರ್ಗಸಂಖ್ಯೆ : 129/130 ಕಾಸರಗೋಡು – ಮಂಗಳೂರು ಮಾರ್ಗದಲ್ಲಿ ಚಾಲಕರಾಗಿ ಶ್ರೀ ನಿಜಲಿಂಗಪ್ಪ ಚಲವಾದಿ ಬಿ.ಸಂ: 309 ರವರು ಕರ್ತವ್ಯ ನಿರ್ವಹಿಸುವಾಗ ಸಮಯ ಸುಮಾರು 1230 – 1235 ರ ಸಮಯದಲ್ಲಿ ಕಾಸರಗೋಡು ನಿಂದ ನಿರ್ಗಮಿಸಿ ಸಮಯ 13:45 ಕ್ಕೆ ತಲಪಾಡಿ ಟೋಲ್ ಗಿಂತ 150 ಮೀಟರ್ ಹಿಂದಕ್ಕೆ ನಿಗಮದ ಚಾಲಕರು ತಮ್ಮ ವಾಹನವನ್ನು ಅತೀವೇಗವಾಗಿ ಚಾಲನೆ ಮಾಡಿಕೊಂಡು ಬರುವ ಸಮಯದಲ್ಲಿ ಏಕಾಏಕಿ ರಸ್ತೆಗೆ ಅಡ್ಡ ಬಂದ ಆಟೋಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ವಾಹನದ ಬ್ರೇಕ್ ಹಾಕಿದ್ದು, ಅಷ್ಟರಲ್ಲಿ ನಿಗಮದ ವಾಹನ ಆಟೋಗೆ ಮಾರಣಾಂತಿಕ ಡಿಕ್ಕಿಯಾಗಿದ್ದು, ಆ ಸಂದರ್ಭದಲ್ಲಿ ನಿಗಮದ ವಾಹನವು ಡಿಕ್ಕಿಯಾಗಿ ಹಠಾತ್ತನೆ ಸ್ಪೀಡ್ ಆಗಿ ತಿರುಗಿ ನಿಂತಿದ್ದು, ಚಾಲಕರು ಚಾಲನಾ ಸೀಟಿನಿಂದ ಓಡಿ ಹೋಗಿದ್ದು, ವಾಹನವು ಇಳಿಜಾರು ರಸ್ತೆಯಲ್ಲಿ ಹಿಮ್ಮುಖವಾಗಿ ಚಲಿಸಿ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಅಟೋ ಮತ್ತು ಬಸ್ಸಿಗೆ ಕಾಯುತ್ತಿದ್ದ ಪ್ರಯಾಣಿಕರಿಗೆ ಡಿಕ್ಕಿಯಾಗಿ ನಿಂತಿರುತ್ತದೆ ಎಂದಿದ್ದಾರೆ.
ಸದರಿ ಅಪಘಾತದಲ್ಲಿ ಮುಂದಿನಿಂದ ಡಿಕ್ಕಿಹೊಡೆದ ಅಟೋದಲ್ಲಿ 2 ಜನ ಪ್ರಯಾಣಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇನ್ನುಳಿದ ಆಟೋ ಚಾಲಕ ಸೇರಿ 4 ಜನ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಹಿಂಬದಿಯಿಂದ ಡಿಕ್ಕಿಯಾಗಿದ್ದ 2 ಜನ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.
ಸದರಿ ವಾಹನವನ್ನು ದಿನಾಂಕ : 27.08.2025 ರಂದು ಮಾರ್ಗಸಂಖ್ಯೆಗೆ ನಿಯೋಜಿಸಿದ್ದು ಅಪಘಾತ ಸಮಯದವರೆಗೆ 10 ಸುತ್ತುವಳಿಯಲ್ಲಿ ಒಟ್ಟಾರೆ 540ಕಿಮೀ ಕ್ರಮಿಸಿರುತ್ತದೆ. ಅಲ್ಲದೇ ಈ ವಾಹನವು ದಿನಾಂಕ: 26.08.2025 ರಂದು FC ನವೀಕರಣ ಆಗಿ ಬಂದಿದ್ದು, ಯಾವುದೇ ತಾಂತ್ರಿಕ ದೋಷದಿಂದ ಸಂಭವಿಸಲು ಸಾಧ್ಯವಿರುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಅಲ್ಲದೇ ಸದರಿ ಚಾಲಕರು ಸುಮಾರು 14 ವರ್ಷಗಳಿಂದ ನಿಗಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಸದರಿ ಮಾರ್ಗದಲ್ಲಿಯೇ ಸುಮಾರು 03 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಚಾಲಕರ ಅತಿಯಾದ ವೇಗ ಮತ್ತು ಅಜಾಗರೂಕತೆ ಈ ಅಪಘಾತಕ್ಕೆ ಕಾರಣವಾಗಿದೆ. ಗಾಯಗೊಂಡ ಇತರೆ ಸಾರ್ವಜನಿಕರ ವೈದ್ಯಕೀಯ ವೆಚ್ಚವನ್ನು ನಿಗಮವು ಭರಿಸಲಿದೆ. ನಿಗಮವು ಈ ಅಪಘಾತಕ್ಕೆ ತೀವ್ರ ವಿಷಾದವನ್ನು ವ್ಯಕ್ತಪಡಿಸಿದ್ದಾರೆ.
ಅಪಘಾತ ತಪ್ಪಿಸಲು ನಿರಂತರ ತರಬೇತಿ, ತಿಳುವಳಿಕೆ ಮತ್ತು ಜಾಗೃತ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾಗ್ಯೂ ಸಹ, ಈ ರೀತಿಯ ಅಪಘಾತಗಳು ಸಂಭವಿಸಿರುವುದು ಅತ್ಯಂತ ದುಃಖಕರ, ಮೃತರ ಆತ್ಮಕ್ಕೆ ಶಾಂತಿ ಕೋರುತ್ತಾ, ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಆ ದೇವರು ಕಲ್ಪಿಸಲಿ ಎಂದು ಕೋರುತ್ತಾ, ತಪ್ಪಿತಸ್ಥ ಚಾಲಕನ ಮೇಲೆ ವಿಚಾರಣೆ ನಡೆಸಿ ಕಠಿಣ ಕ್ರಮ ಜರುಗಿಸಲಾಗುವುದು ಎಂಬುದನ್ನು ತಿಳಿಸಿದ್ದಾರೆ.
ರಾಜ್ಯದಲ್ಲೊಂದು ಶಾಕಿಂಗ್ ಘಟನೆ: ಶಾಲೆಯ ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ 9ನೇ ತರಗತಿ ವಿದ್ಯಾರ್ಥಿನಿ