ಬೆಂಗಳೂರು: ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಚಾಲಕ ಕಂ ನಿರ್ವಾಹಕರ ಪುತ್ರ IFS ಪಾಸ್ ಮಾಡಿ, ಭಾರತದ ಅರಣ್ಯ ಸೇವೆಗೆ ಆಯ್ಕೆಯಾಗಿದ್ದರು. ಈ ವಿಷಯ ತಿಳಿದು ಬೆಂಗಳೂರಿನ ಕೇಂದ್ರ ಕಚೇರಿಗೆ ಸಾರಿಗೆ ನೌಕರ ಹಾಗೂ ಪುತ್ರನನ್ನು ಕರೆಸಿದಂತ ಸಚಿವ ರಾಮಲಿಂಗಾರೆಡ್ಡಿ ಸನ್ಮಾನಿಸಿ, ಗೌರವಿಸಿದರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ರಾಯಚೂರು ವಿಭಾಗದ ಲಿಂಗಸುಗೂರು ಘಟಕದ ಚಾಲಕ ಕಂ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬಸಪ್ಪ, ಸಂಖ್ಯೆ 189 ಮತ್ತು ತಾಯಿ ನಾಗರತ್ನ ಅವರ ಮಗನಾದ ಆನಂದಕುಮಾರ ಅವರು ಭಾರತ ಸರ್ಕಾರದ ಕೇಂದ್ರ ಲೋಕಸೇವಾ ಆಯೋಗದ ಭಾರತೀಯ ಅರಣ್ಯ ಸೇವೆ (ಐ.ಎಫ್.ಎಸ್.,) ಪರೀಕ್ಷೆಯಲ್ಲಿ 41 ನೇ ರ್ಯಾಂಕ್ ಪಡೆದು ಭಾರತದ ಅರಣ್ಯ ಸೇವೆಗೆ ಆಯ್ಕೆಯಾಗಿರುತ್ತಾರೆ. ಅವರ ಈ ಸಾಧನೆಯು ಕುಟುಂಬಕ್ಕೂ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೂ ಕೀರ್ತಿ ತಂದಿದ್ದರು.
ಈ ವಿಷಯ ತಿಳಿದಂತ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಅಧ್ಯಕ್ಷರು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಕಲಬುರಗಿ ಅವರು ಬೆಂಗಳೂರಿಗೆ ಕೆ ಎಸ್ ಆ ಟಿ ಸಿ ಕೇಂದ್ರ ಕಚೇರಿಗೆ ಕರೆಸಿ, ಆನಂದಕುಮಾರ ಅವರನ್ನು ಸನ್ಮಾನಿಸಿ ಗೌರವಿಸಿದರು. ಅಲ್ಲದೇ 1 ಲಕ್ಷ ಪ್ರೋತ್ಸಾಹ ಧನದೊಂದಿಗೆ ಅಭಿನಂದನಾ ಪತ್ರ ನೀಡಿ ಪ್ರೋತ್ಸಾಹಿಸಿದರು.
ಈ ವೇಳೆ ಮಾತನಾಡಿದಂತ ಸಚಿವರು, ನಮ್ಮ ಸಾರಿಗೆ ಸಿಬ್ಬಂದಿಗಳ ಮಕ್ಕಳು ವೈದ್ಯಕೀಯ, ಇಂಜಿನಿಯರಿಂಗ್, ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದು, ಅವರ ಮಕ್ಕಳಿಗಾಗಿ ಸಾರಿಗೆ ವಿದ್ಯಾ ಚೇತನ ಯೋಜನೆಯಡಿ ವಿದ್ಯಾರ್ಥಿ ವೇತನವನ್ನು ಐದರಿಂದ ಹತ್ತು ಪಟ್ಟು ಹೆಚ್ಚಳ ಮಾಡಿ ಪ್ರೋತ್ಸಾಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಯಶಸ್ಸು ಸಾಧಿಸುವಂತಾಗಲಿ ಎಂದು ತಿಳಿಸಿದರು.
ಮುಂದುವರೆಸಿದ ಆನಂದ್ ಕುಮಾರ್ ಅವರು ಭಾರತೀಯ ಆಡಳಿತ ಸೇವೆ(IAS) ಅಥವಾ ಭಾರತೀಯ ವಿದೇಶಾಂಗ ಸೇವೆ ( IFS) ಗೆ ತಯಾರಿ ನಡೆಸಲು ತಿಳಿಸಿದರು. ದೇಶಕ್ಕಾಗಿ ಒಳ್ಳೆಯ ಕೆಲಸವನ್ನು ಮಾಡಿ ರಾಜ್ಯಕ್ಕೆ, ಸಂಸ್ಥೆಗೆ ಕೀರ್ತಿ ತರಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಎಂ. ರಾಚಪ್ಪ,ಕ ಆ ಸೇ( ಹಿರಿಯ ಅಯ್ಕೆ ಶ್ರೇಣಿ), ರಾಯಚೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ, ಚಂದ್ರಶೇಖರ ಎಂ. ಎಸ್., ಆನಂದ್ ಕುಮಾರ್ ಅವರ ಕುಟುಂಬದವರು ಹಾಗೂ ಇನ್ನಿತರೆ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.
ಆನಂದ ಕುಮಾರ ಬಗ್ಗೆ ಮಾಹಿತಿ..
ಆನಂದ ಕುಮಾರ್ ಪದವಿಯನ್ನು ಬಿ.ಎಸ್ಸಿ (ಅಗ್ರಿ) – ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಪೂರ್ಣಗೊಳಿಸಿ, ಯು.ಪಿ.ಎಸ್.ಸಿ – ಐ.ಎಫ್.ಎಸ್. ನಲ್ಲಿ 41ನೇ ರ್ಯಾಂಕ್ ನೊಂದಿಗೆ ತಮ್ಮ 3ನೇ ಪ್ರಯತ್ನದಲ್ಲಿ ಯಶಸ್ಸು ಪಡೆದಿದ್ದಾರೆ. ಈ ಮೂಲಕ ಭಾರತೀಯ ಅರಣ್ಯ ಸೇವೆಗೆ ಆಯ್ಕೆಯಾಗಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ