ಬೆಂಗಳೂರು: ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್ (ಕೆ.ಐ.ಎ.ಸಿ.ಎಲ್) ನಿಬಂಧನೆಗಳನ್ನು ಸಂಪೂರ್ಣವಾಗಿ ಅನುಪಾಲನೆ ಮಾಡಿದಲ್ಲಿ ಸಂಡೂರು, ದೇವದರಿಯಲ್ಲಿ ಗಣಿಗಾರಿಕೆಗೆ ಅನುಮತಿ ನೀಡಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿಂದು ನಿಯಮ 73ರಡಿ ಡಾ. ಭರತ್ ಶೆಟ್ಟಿ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಅವರು, 2022ರ ಡಿಸೆಂಬರ್ 16ರಂದು ಉಪಯೋಗಿ ಸಂಸ್ಥೆ ಉನ್ನತಾಧಿಕಾರ ಸಮಿತಿಯ ಶಿಫಾರಸು ಮತ್ತು ಸೂಚನೆಗಳನ್ನು ಪಾಲನೆ ಮಾಡಬೇಕು ಎಂಬ ಷರತ್ತುಗೊಳಪಟ್ಟು ದೇವದರಿಯಲ್ಲಿ ಗಣಿಗಾರಿಕೆ ನಡೆಸಲು ಅನುಮೋದನೆ ನೀಡಲಾಗಿದೆ.
ಈ ಹಿಂದೆ ಕೆಐಓಸಿಎಲ್ ರಾಜ್ಯದಲ್ಲಿ ಗಣಿಗಾರಿಕೆ ನಡೆಸುವಾಗ ಹಲವು ನಿಯಮಗಳ ಉಲ್ಲಂಘನೆ ಮಾಡಿದ್ದು, ನೋಟಿಸ್ ನೀಡಲಾಗಿದೆ. ಲಕ್ಯಾ ಅಣೆಕಟ್ಟೆ ಎತ್ತರಿಸಿ 340 ಹೆಕ್ಟೇರ್ ಅರಣ್ಯಕ್ಕೆ ಹಾನಿ ಮಾಡಿದ್ದಾರೆ. ಕುದುರೆಮುಖ ರಾಷ್ಟ್ರೀಯ ಉದ್ಯಾನದೊಳಗೆ ಕೊಳವೆ ಮಾರ್ಗ ಅಳವಡಿಸುವುದೂ ಸೇರಿ 465.73ಹೆಕ್ಟೇರ್ ಪ್ರದೇಶದಲ್ಲಿ ಅನುಮತಿ ಇಲ್ಲದೆ ಅರಣ್ಯೇತರ ಉದ್ದೇಶಕ್ಕೆ ಬಳಕೆ ಮಾಡಿದ್ದಾರೆ. ಈ ಪರಿಸರ ಹಾನಿಗೆ 142 ಕೋಟಿ ರೂ. ಕಟ್ಟಬೇಕಿದೆ. ಇದರ ಜೊತೆಗೆ ಎನ್.ಪಿ.ವಿ. ಶುಲ್ಕ 628 ಕೋಟಿ ರೂ. ಹಾಗೂ ಬಡ್ಡಿ ಸೇರಿ ಒಟ್ಟಾರೆ 3000 ಕೋಟಿ ರೂಪಾಯಿಗಳನ್ನು ರಾಜ್ಯ ಸರ್ಕಾರಕ್ಕೆ ಕೊಡಬೇಕಾಗಿದೆ. ಈ ಎಲ್ಲ ನಿಬಂಧನೆಯನ್ನು ಸಂರ್ಪೂಣವಾಗಿ ಅನುಪಾಲನೆ ಮಾಡಿದಲ್ಲಿ, ಸದರಿ ಅರಣ್ಯ ಭೂಮಿಯನ್ನು ಗಣಿಗಾರಿಕೆಗೆ ಹಸ್ತಾಂತರ ಮಾಡುವ ಬಗ್ಗೆ ಅಗತ್ಯ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಮಿಗಿಲಾಗಿ ಸದರಿ ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣ ಉಚ್ಛ ನ್ಯಾಯಾಲಯದಲ್ಲಿದೆ ಎಂದೂ ತಿಳಿಸಿದರು.
Watch Video: ಗುಜರಾತಿನಲ್ಲಿ ಕುಡಿದು ವಾಹನ ಚಲಾಯಿಸಿ ಅಪಘಾತ: ಓರ್ವ ಮಹಿಳೆ ಸಾವು, ಮೂವರಿಗೆ ಗಾಯ
ರನ್ಯಾ ರಾವ್ ಪ್ರಕರಣದಲ್ಲೂ ಇಬ್ಬರ ಸಚಿವರ ಸೆಟಲ್ಮೆಂಟ್ ಆಗಿದೆ: ಶಾಸಕ ಮುನಿರತ್ನ ಹೊಸ ಬಾಂಬ್