ಬೆಂಗಳೂರು : ಮರು ಪರೀಕ್ಷೆ ನಡೆದಿದ್ದ 545 ಪಿಎಸ್ಐ ಹುದ್ದೆಗಳ ನೇಮಕಾತಿ ಕುರಿತಂತೆ ಇದೀಗ ಮತ್ತೊಂದು ವಿಗ್ನ ಎದುರಾಗಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾರ್ಚ್ 28ರಂದು ಪ್ರಕಟಿಸಿದ್ದ ಪರೀಕ್ಷೆಯ ಅಂತಿಮ ಅಂಕಪಟ್ಟಿ ಪ್ರಕಟಣೆಗೆ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ(KAT) ತಡೆಯಾಜ್ಞೆ ನೀಡಿದೆ.
ಜನವರಿ 23ರಂದು ನಡೆದಿದ್ದ ಮರು ಪರೀಕ್ಷೆಯಲ್ಲಿ ಪತ್ರಿಕೆ -1ರ ಮೌಲ್ಯಮಾಪನ ಅಧಿಸೂಚನೆಯ ಮಾನದಂಡಗಳ ಅನುಸಾರ ನಡೆದಿಲ್ಲ ಎಂದು ವಿಜಯಪುರ ಜಿಲ್ಲೆಯ ರವಿಕುಮಾರ್ ಸೇರಿದಂತೆ ಮೂವರು ಅಭ್ಯರ್ಥಿಗಳು ಕೋರ್ಟ್ ಮೊರೆ ಹೋಗಿದ್ದರು. ಅಭ್ಯರ್ಥಿಗಳ ಅರ್ಜಿಯನ್ನು ಪರಿಗಣಿಸಿರುವ ಕೆಎಟಿಯು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದ್ದ ಅಂತಿಮ ಅಂಕಪಟ್ಟಿ ಆದೇಶಕ್ಕೆ ಮುಂದಿನ ಆದೇಶದವರೆಗೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರವು ಪಿಎಸ್ ಐ ನೇಮಕಾತಿಗೆ ಸಂಬಂಧ ಮರು ಪರೀಕ್ಷೆಯನ್ನು ಕೆಇಎಗೆ ವಹಿಸಿತ್ತು. ಪಿಎಸ್ಐ ನೇಮಕಾತಿ ಪಟ್ಟಿ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳಿಗೆ ಕೆಎಟಿ ಆದೇಶದಿಂದ ಮತ್ತೊಮ್ಮೆ ನಿರಾಸೆ ಮೂಡಿಸಿದೆ.