ಬೆಂಗಳೂರು: ಕರ್ನಾಟಕ ಮಾಹಿತಿ ಆಯೋಗದಿಂದ 1 ವರ್ಷದಲ್ಲಿ 36474 ಮೇಲ್ಮನವಿಗಳ ವಿಲೇವಾರಿ ಮಾಡಲಾಗಿದೆ. ಮಾಹಿತಿ ನೀಡದ 245 ಅಧಿಕಾರಿಗಳಿಗೆ 45.29 ಲಕ್ಷ ದಂಡಾಸ್ತ್ರವನ್ನು ಪ್ರಯೋಗಿಸಲಾಗಿದೆ.
ಈ ಕುರಿತು ಕರ್ನಾಟಕ ಮಾಹಿತಿ ಆಯೋಗ ಪತ್ರಿಕಾ ಪ್ರಕಟಣೆಯಲ್ಲು ಮಾಹಿತಿ ಬಿಡುಗಡೆ ಮಾಡಿದ್ದು, ಮಾಹಿತಿ ಆಯೋಗವು ಇಡೀ ದೇಶದಲ್ಲಿಯೇ ಅತ್ಯಂತ ವೇಗವಾಗಿ ದ್ವಿತೀಯ ಮೇಲ್ಮನವಿ ಅರ್ಜಿಗಳನ್ನು ವಿಲೇವಾರಿ ಮಾಡುತ್ತಿದ್ದು, ಕಳೆದ ಒಂದು ವರ್ಷದ ಅವಧಿಯಲ್ಲಿ ಮಾಹಿತಿ ನೀಡದ ಅಧಿಕಾರಿಗಳಿಗೆ ದಂಡ, ಶಿಸ್ತುಕ್ರಮಕ್ಕೆ ಶಿಫಾರಸುಗಳ ಜತೆಗೆ 36474 ಮೇಲ್ಮನವಿಗಳನ್ನು ವಿಲೇವಾರಿ ಮಾಡಿದೆ ಎಂದಿದೆ.
ಕರ್ನಾಟಕ ಮಾಹಿತಿ ಆಯೋಗಕ್ಕೆ 2005ರ ಫೆಬ್ರವರಿ 4 ರಂದು ಎಂಟು ಜನ ಮಾಹಿತಿ ಆಯುಕ್ತರನ್ನು ನೇಮಕ ಮಾಡಿತ್ತು. ಡಿಸೆಂಬರ್ನಲ್ಲಿ ಮೂರು ಜನ ಮಾಹಿತಿ ಆಯುಕ್ತರ ನೇಮಕವಾಗಿದೆ. 2023 ರಿಂದ 2025ರ ಫೆಬ್ರವರಿ ತನಕ ಕೇವಲ ಮೂರು ಜನ ಮಾತ್ರ ಆಯುಕ್ತರು ಕಾರ್ಯ ನಿರ್ವಹಿಸುತ್ತಿದ್ದರು. ಆದ್ದರಿಂದ ಅರ್ಜಿಗಳ ವಿಲೇವಾರಿ ಕುಂಠಿತವಾಗಿತ್ತು. ಆದರೆ ಒಂದು ವರ್ಷದ ಅವಧಿಯಲ್ಲಿ ದ್ವಿತೀಯ ಮೇಲ್ಮನವಿ ಅರ್ಜಿಗಳ ವಿಲೇವಾರಿಗೆ ವೇಗ ಸಿಕ್ಕಿದೆ.
ಫೆಬ್ರವರಿ 2025ರಲ್ಲಿ ವಿಚಾರಣೆಗೆ ಬಾಕಿ ಇದ್ದ ಹಾಗೂ ಹೊಸದಾಗಿ ಸಲ್ಲಿಕೆಯಾದ ಅರ್ಜಿಗಳು ಸೇರಿ ವಿಚಾರಣೆಗೆ 69471 ಅರ್ಜಿಗಳು ಬಾಕಿ ಇದ್ದವು. ಒಂದು ವರ್ಷದ ಅವಧಿಯಲ್ಲಿ 36474 ಅರ್ಜಿಗಳನ್ನು ಆಯುಕ್ತರು ವಿಲೇವಾರಿ ಮಾಡಿದ್ದಾರೆ. ಮೇಲ್ಮನವಿದಾರರಿಗೆ ಸೂಕ್ತ ಮಾಹಿತಿ ಅಥವಾ ಹಿಂಬರಹವನ್ನು ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. 32997 ದ್ವಿತೀಯ ಮೇಲ್ಮನವಿ ಅರ್ಜಿಗಳು ಮಾತ್ರ ವಿಲೇವಾರಿಗೆ ಬಾಕಿ ಉಳಿದಿವೆ.
ಜಿಲ್ಲಾ ಮಟ್ಟದಲ್ಲಿ ಕಾರ್ಯಾಗಾರ
ಅರ್ಜಿಗಳ ಶೀಘ್ರ ವಿಲೇವಾರಿಗೆ ಕಾರಣವಾಗಿದ್ದು ರಾಜ್ಯ ಮಾಹಿತಿ ಆಯುಕ್ತರು ಜಿಲ್ಲಾ ಮಟ್ಟದಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಹಾಗೂ ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳಿಗೆ ನಡೆಸಿದ ಮಾಹಿತಿ ಹಕ್ಕು ಅಧಿನಿಯಮ ಕುರಿತ ತರಬೇತಿ ಕಾರ್ಯಾಗಾರ. ಇಂತಹ ಕಾರ್ಯಾಗಾರಗಳು ಇದುವರೆವಿಗೆ 23 ಜಿಲ್ಲೆಗಳಲ್ಲಿ ನಡೆದಿವೆ. ಅದರಿಂದ ಮಾಹಿತಿ ನೀಡುವ ಹಾಗೂ ಮಾಹಿತಿ ಆಯೋಗದ ವಿಚಾರಣೆಗೆ ಹಾಜರಾಗುವ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಸಂಖ್ಯೆ ವೃದ್ಧಿಸಿದೆ. ಮಾಹಿತಿ ನೀಡುವ ಪ್ರಮಾಣ ಶೇ.85 ರಿಂದ 90 ರಷ್ಟು ಇದೆ. ಇಂತಹ ಕಾರ್ಯಾಗಾರಗಳನ್ನು ಆಯೋಗ ನಿರಂತರವಾಗಿ ನಡೆಸುವ ಉದ್ದೇಶವನ್ನು ಹೊಂದಿದೆ.
ರಾಷ್ಟ್ರೀಯ ಸಮಾವೇಶ
ಮಾಹಿತಿ ಹಕ್ಕು ಅಧಿನಿಯಮ ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನವಾಗುವ ವಿಚಾರಗಳ ಬಗ್ಗೆ ಚರ್ಚೆ ಮಾಡುವ ಸಲುವಾಗಿ ರಾಷ್ಟ್ರೀಯ ಸಮಾವೇಶ ನಡೆಸುವ ಉದ್ದೇಶ ಆಯೋಗ ಹೊಂದಿದೆ. ಈ ಬಗ್ಗೆ ಆಯೋಗ ಮುಖ್ಯಮಂತ್ರಿ ಅವರೊಂದಿಗೆ ಸಮಾಲೋಚನೆ ನಡೆಸಿ ನಿರ್ಧಾರ ಮಾಡಲಿದೆ. ಮಾಹಿತಿ ಹಕ್ಕು ಅಧಿನಿಯಮವನ್ನು ಜಾರಿಗೆ ತಂದ ಹಾಗೂ ಆಯೋಗಕ್ಕೆ ಹೆಚ್ಚಿನ ಬಲ ತುಂಬಿದ್ದು ಕರ್ನಾಟಕ ಸರ್ಕಾರ ಎಂಬುದು ಇಲ್ಲಿ ಗಮನಾರ್ಹ.
ಸಾರ್ವಜನಿಕ ಪ್ರಾಧಿಕಾರ
ಇದುವರೆಗೆ ಮಾಹಿತಿ ನೀಡದೆ ಇದ್ದ ಕರ್ನಾಟಕ ಹಾಲು ಮಹಾಮಂಡಲ ಹಾಗೂ ಎಲೆಕ್ಟಾçನಿಕ್ ಸಿಟಿ ಇಂಡಸ್ಟಿçಯಲ್ ಟೌನ್ ಶಿಫ್ ಅಥಾರಿಟಿಗಳನ್ನು ಸಾರ್ವಜನಿಕ ಪ್ರಾಧಿಕಾರಗಳೆಂದು ಘೋಷಣೆ ಮಾಡುವ ಮೂಲಕ ಸಾರ್ವಜನಿಕರಿಗೆ ಮಾಹಿತಿ ಕೊಡಿಸುವಂತೆ ಆಯೋಗ ಮಾಡಿದೆ.
ಶಿಫಾರಸುಗಳು
ಸರ್ಕಾರದ ಹಂತದಲ್ಲಿ ನಡೆಯುವ ನೇಮಕಾತಿಗಳು, ಅಧಿಕಾರಿ ಮತ್ತು ನೌಕರರ ಬಡ್ತಿಗೆ ಸಂಬAಧಿಸಿದ ಪರೀಕ್ಷೆಗಳು ಹಾಗೂ ಶಾಲಾ ಮತ್ತು ಪದವಿ ಪಠ್ಯ ಪುಸ್ತಕದಲ್ಲಿ ಮಾಹಿತಿ ಹಕ್ಕು ಸಹ ಒಂದು ವಿಷಯವನ್ನಾಗಿ ಪರಿಗಣಿಸುವಂತೆ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಅಲ್ಲದೇ ಜಿಲ್ಲಾ ಹಾಗೂ ತಾಲೂಕು ಮಟ್ಟದ ಕೆಡಿಪಿ ಸಭೆಗಳಲ್ಲಿಯೂ ಮಾಹಿತಿ ಹಕ್ಕು ಅರ್ಜಿಗಳ ವಿಲೇವಾರಿಯನ್ನು ಒಂದು ವಿಷಯವನ್ನಾಗಿ ಚರ್ಚೆ ಮಾಡುವಂತೆಯೂ ಸಲಹೆ ನೀಡಿದೆ.
ದಂಡಾಸ್ತ್ರ ಪ್ರಯೋಗ
ನಿಗದಿತ ಅವಧಿಯಲ್ಲಿ ಮಾಹಿತಿ ನೀಡದ ಹಾಗೂ ಆಯೋಗದ ವಿಚಾರಣೆಗೆ ಗೈರು ಹಾಜರಾಗುವ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ದಂಡವನ್ನು ವಿಧಿಸಲಾಗುತ್ತಿದೆ. ಗರಿಷ್ಠ 25 ಸಾವಿರ ರೂ. ದಂಡ ವಿಧಿಸುವುದರೊಂದಿಗೆ ಅರ್ಜಿದಾರರಿಗೆ ಪರಿಹಾರ ಕೊಡಿಸುವುದಕ್ಕೂ ಕಾನೂನಿನಲ್ಲಿ ಅವಕಾಶವಿದೆ. ಒಂದು ವರ್ಷದ ಅವಧಿಯಲ್ಲಿ 245 ಅಧಿಕಾರಿಗಳಿಗೆ 45.29 ಲಕ್ಷ ರೂ.ಗಳ ದಂಡವನ್ನು ಆಯೋಗ ವಿಧಿಸಿದೆ. ದಂಡ ಪಾವತಿಸದಿದ್ದಲ್ಲಿ ನಿವೃತ್ತಿ ಸೌಲಭ್ಯಗಳನ್ನು ಪಡೆಯುವುದು ಕಷ್ಟವಾಗುತ್ತದೆ.
ಪೀಠವಾರು ಅರ್ಜಿಗಳ ವಿಲೇವಾರಿ
01-02-2025 ರಿಂದ 28-02-2026ರ ವರೆಗೆ ಪೀಠವಾರು ಅರ್ಜಿಗಳ ವಿಲೇವಾರಿ ಇಂತಿದೆ.
ಪೀಠ ಸಂಖ್ಯೆ ಹಂಚಿಕೆಯಾದ ಅರ್ಜಿಗಳು ವಿಲೇವಾರಿಯಾದ ಅರ್ಜಿಗಳು
ಪೀಠ-1 7267 4731
ಪೀಠ-2 5792 4310
ಪೀಠ-3 5034 1866
ಪೀಠ-4 6319 5193
ಪೀಠ-5 5206 3187
ಪೀಠ-6 5488 4136
ಪೀಠ-7 4881 3612
ಪೀಠ-8 987 113
ಪೀಠ-9 953 266
ಬೆಳಗಾವಿ ಪೀಠ 11367 812
ಕಲಬುರಗಿ ಪೀಠ 14232 8248
ಅತಿ ಹೆಚ್ಚಿನ ದ್ವಿತೀಯ ಮೇಲ್ಮನವಿ ಬಾಕಿ ಇರುವ ಪ್ರಮುಖ ಇಲಾಖೆಗಳು
* ಗ್ರಾಮೀಣಾಭಿವೃದ್ಧಿ -11195
* ಕಂದಾಯ -5384
* ನಗರಾಭಿವೃದ್ಧಿ -4336
* ಶಿಕ್ಷಣ -1537
* ಸಮಾಜ ಕಲ್ಯಾಣ -1328
* ಲೋಕೋಪಯೋಗಿ -1280
* ಜಲ ಸಂಪನ್ಮೂಲ -1047
* ಆರೋಗ್ಯ -959
* ಕೈಗಾರಿಕೆ -803
* ಅರಣ್ಯ -555
* ಕೃಷಿ -531
ಹೆಚ್ಚಿನ ದ್ವಿತೀಯ ಮೇಲ್ಮನವಿ ಬಾಕಿ ಇರುವ ಜಿಲ್ಲೆ
ಬೆಂಗಳೂರು ನಗರ- 6361
ಬೆಳಗಾವಿ – 3388
ರಾಯಚೂರು – 2123
ಬಾಗಲಕೋಟೆ – 1999
ವಿಜಯಪುರ – 1951
ಕೋಲಾರ – 1605
ಧಾರವಾಡ – 1483
ಕಲಬುರಗಿ – 1337
ಹಾವೇರಿ – 1033
ತುಮಕೂರು – 961








