ಬೆಂಗಳೂರು: ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿದ್ದ ರಾಜ್ಯದ ಲಕ್ಷಾಂತರ ನಿರುದ್ಯೋಗಿ ಯುವಜನತೆಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ. ಬಹುದಿನಗಳಿಂದ ನಾನಾ ಕಾರಣಗಳಿಂದ, ವಿಶೇಷವಾಗಿ ಮೀಸಲಾತಿ ಗೊಂದಲಗಳಿಂದ ನೆನೆಗುದಿಗೆ ಬಿದ್ದಿದ್ದ ಬರೋಬ್ಬರಿ 56,432 ನೇರ ನೇಮಕಾತಿ ಹುದ್ದೆಗಳನ್ನು ತುಂಬಲು ಸರ್ಕಾರ ಅಧಿಕೃತವಾಗಿ ಹಸಿರು ನಿಶಾನೆ ತೋರಿದೆ. ಮುಂದಿನ 30 ದಿನಗಳ ಒಳಗಾಗಿ ನೇಮಕಾತಿ ಪ್ರಕ್ರಿಯೆಗಳನ್ನು ಆರಂಭಿಸುವಂತೆ ಎಲ್ಲಾ ಇಲಾಖೆಗಳು ಹಾಗೂ ನೇಮಕಾತಿ ಪ್ರಾಧಿಕಾರಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡಗಳ (ST) ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ 2022ರಲ್ಲಿ ತರಲಾಗಿದ್ದ ಕಾಯ್ದೆಯನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ನವೆಂಬರ್ 27, 2025 ರಂದು ಮಧ್ಯಂತರ ಆದೇಶ ನೀಡಿದ್ದ ಮಾನ್ಯ ಉಚ್ಚ ನ್ಯಾಯಾಲಯವು, ಹೆಚ್ಚಿಸಿದ ಮೀಸಲಾತಿ ಆಧಾರದ ಮೇಲೆ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸದಂತೆ ತಡೆ ನೀಡಿತ್ತು. ಇದರಿಂದಾಗಿ ರಾಜ್ಯದಲ್ಲಿ ನೇಮಕಾತಿ ಪ್ರಕ್ರಿಯೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದವು. ಇದೀಗ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR) ಫೆಬ್ರವರಿ 27, 2026 ರಂದು ಹೊಸ ಆದೇಶ (ಸಂಖ್ಯೆ: ಸಿಆಸುಇ 01 ಸೇಹಿಮ 2026) ಹೊರಡಿಸುವ ಮೂಲಕ ಈ ಕಾನೂನು ತೊಡಕಿಗೆ ತಾತ್ಕಾಲಿಕ ಪರಿಹಾರ ಕಂಡುಕೊಂಡಿದೆ.

ಹೊಸ ಆದೇಶದಲ್ಲಿ ಏನಿದೆ? ನೇಮಕಾತಿ ಹೇಗೆ ನಡೆಯಲಿದೆ?
ನಿರುದ್ಯೋಗಿ ಅಭ್ಯರ್ಥಿಗಳ ಹಿತದೃಷ್ಟಿ ಹಾಗೂ ಆಡಳಿತಾತ್ಮಕ ವ್ಯವಸ್ಥೆಯ ಮೇಲಾಗುತ್ತಿರುವ ಪರಿಣಾಮವನ್ನು ಅರಿತ ಸರ್ಕಾರ, ನೇಮಕಾತಿ ಪ್ರಕ್ರಿಯೆಯನ್ನು ತುರ್ತಾಗಿ ಮುಂದುವರೆಸಲು ಈ ಕೆಳಗಿನ ಸ್ಪಷ್ಟ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ:
1. ಹಳೆಯ ಮೀಸಲಾತಿ ಪದ್ಧತಿಯಂತೆ ಹೊಸ ಅಧಿಸೂಚನೆ: ಹೈಕೋರ್ಟ್ನ ಅಂತಿಮ ತೀರ್ಪಿಗೆ ಒಳಪಟ್ಟು, 27.11.2025ರ ನಂತರ ಹೊರಡಿಸುವ ಯಾವುದೇ ಹೊಸ ನೇರ ನೇಮಕಾತಿ ಅಧಿಸೂಚನೆಗಳಿಗೆ 2022ರ ಕಾಯ್ದೆಗೂ ಮುನ್ನ ಜಾರಿಯಲ್ಲಿದ್ದ (ಶೇ. 50ರ ಮಿತಿಯೊಳಗಿನ) ಮೀಸಲಾತಿ ಆದೇಶ ಹಾಗೂ ರೋಸ್ಟರ್ ಬಿಂದುಗಳನ್ನು ಅನ್ವಯಿಸಿ ಪ್ರಕ್ರಿಯೆ ನಡೆಸಲು ಸೂಚಿಸಲಾಗಿದೆ. ಅಂದರೆ ಹಳೆಯ ರೋಸ್ಟರ್ ಎಲ್ಲಿಗೆ ನಿಂತಿತ್ತೋ, ಅಲ್ಲಿಂದಲೇ ಮುಂದಿನ ಬಿಂದುವಿನಿಂದ ಆಯ್ಕೆ ಮಾಡಬೇಕು.

2. ಹಳೆಯ ನೇಮಕಾತಿಗಳು ಯಥಾಸ್ಥಿತಿ ಮುಂದುವರಿಕೆ:
ಹೈಕೋರ್ಟ್ ಆದೇಶಕ್ಕೂ ಮುನ್ನ (27.11.2025 ಕ್ಕಿಂತ ಹಿಂದೆ) ಅಧಿಸೂಚನೆ ಹೊರಡಿಸಲಾಗಿರುವ ಪ್ರಕ್ರಿಯೆಗಳು ಯಾವುದೇ ಅಡೆತಡೆಯಿಲ್ಲದೆ ಯಥಾಪ್ರಕಾರ ಮುಂದುವರಿಯಲಿವೆ. ಆದರೆ, ಈ ಹುದ್ದೆಗಳಿಗೆ ನೀಡುವ ನೇಮಕಾತಿ ಆದೇಶದಲ್ಲಿ “ಈ ನೇಮಕಾತಿಯು ಮಾನ್ಯ ಉಚ್ಚ ನ್ಯಾಯಾಲಯದ ಅಂತಿಮ ಆದೇಶಕ್ಕೊಳಪಟ್ಟಿರುತ್ತದೆ” ಎಂದು ಸ್ಪಷ್ಟವಾಗಿ ನಮೂದಿಸುವುದು ಕಡ್ಡಾಯವಾಗಿದೆ.
3. ಶೇಕಡಾ 6ರಷ್ಟು ಹುದ್ದೆಗಳ ಕಾಯ್ದಿರಿಸುವಿಕೆ:
ಎಸ್ಸಿ/ಎಸ್ಟಿ ಮೀಸಲಾತಿ ಹೆಚ್ಚಳದ ಪ್ರಕರಣವು ನ್ಯಾಯಾಲಯದಲ್ಲಿರುವುದರಿಂದ, ಆಯ್ಕೆ ಇಲಾಖೆಗಳು ಭವಿಷ್ಯದ ನೇಮಕಾತಿಗಳಲ್ಲಿ ಶೇ. 6ರಷ್ಟು ಹುದ್ದೆಗಳನ್ನು ಕಾಯ್ದಿರಿಸಬೇಕು (ಪರಿಶಿಷ್ಟ ಜಾತಿಗೆ ಶೇ. 2 ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ. 4) ಎಂದು ಸರ್ಕಾರ ಆದೇಶಿಸಿದೆ. ನ್ಯಾಯಾಲಯದ ಅಂತಿಮ ತೀರ್ಪಿನ ಆಧಾರದ ಮೇಲೆ ಈ ಕಾಯ್ದಿರಿಸಿದ ಹುದ್ದೆಗಳ ಭವಿಷ್ಯ ನಿರ್ಧಾರವಾಗಲಿದೆ.

30 ದಿನಗಳ ಗಡುವು: ಅಭ್ಯರ್ಥಿಗಳಿಗೆ ಸುವರ್ಣಾವಕಾಶ
ಆದೇಶದ ಅತ್ಯಂತ ಪ್ರಮುಖ ಅಂಶವೆಂದರೆ 6ನೇ ಕಂಡಿಕೆ. ಇದರಲ್ಲಿ “ಖಾಲಿಯಿರುವ ನೇರ ನೇಮಕಾತಿ ಹುದ್ದೆಗಳಲ್ಲಿ ಸುಮಾರು 56,432 ಹುದ್ದೆಗಳನ್ನು ತುಂಬುವ ಪ್ರಕ್ರಿಯೆಯನ್ನು ಮುಂದಿನ 30 ದಿನಗಳಲ್ಲಿ ಪ್ರಾರಂಭಿಸುವಂತೆ ಎಲ್ಲಾ ಇಲಾಖೆಗಳಿಗೆ/ನೇಮಕಾತಿ ಪ್ರಾಧಿಕಾರಗಳಿಗೆ ತಿಳಿಸಿದೆ” ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಈ ಆದೇಶಗಳು ಸರ್ಕಾರದ ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತವೆ.
ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳೇ ಗಮನಿಸಿ:
ಕೆಪಿಎಸ್ಸಿ (KPSC), ಪೊಲೀಸ್ ಇಲಾಖೆ (KSP), ಶಿಕ್ಷಣ ಇಲಾಖೆ, ಕೆಇಎ (KEA) ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇವೆ. ಇದೀಗ ಮೀಸಲಾತಿ ಗೊಂದಲಕ್ಕೆ ತಾತ್ಕಾಲಿಕ ತೆರೆ ಬಿದ್ದಿರುವುದರಿಂದ, ಸತತವಾಗಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು ತಮ್ಮ ಓದಿನ ವೇಗವನ್ನು ಹೆಚ್ಚಿಸುವ ಸಮಯ ಬಂದಿದೆ. ಮುಂದಿನ ಒಂದು ತಿಂಗಳೊಳಗೆ ಸಾಲು ಸಾಲು ನೇಮಕಾತಿ ಅಧಿಸೂಚನೆಗಳು ಪ್ರಕಟವಾಗುವ ನಿರೀಕ್ಷೆ ದಟ್ಟವಾಗಿದೆ.











