ಬೆಂಗಳೂರು: ಮಳೆ ನೀರಿನಿಂದಾಗುತ್ತಿರುವ ಅನಾಹುತಗಳನ್ನು ತಪ್ಪಿಸಲು ಶಾಶ್ವತ ಪರಿಹಾರ ಕಂಡುಹಿಡಿಯುವುದು ನಮ್ಮ ಜವಾಬ್ದಾರಿ. ನಾವದನ್ನು ಮಾಡುತ್ತೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪುನರುಚ್ಚರಿಸಿದರು.
ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಉತ್ತರಿಸಿದರು.
ಮಳೆ ಪ್ರಮಾಣ ಕಡಿಮೆಯಾಗಿದ್ದು, ಪರಿಹಾರ ಕಾರ್ಯ ಕೈಗೊಳ್ಳುವ ಬಗ್ಗೆ ಕೇಳಿದಾಗ, “ನಾನು ಹೆಚ್ಚು ಮಳೆಯಾಗಬೇಕು ಎಂದು ಬಯಸುವವನು. ಮಳೆ ಹೆಚ್ಚಾಗಿ ಬಂದಷ್ಟು ನಾವು ಏನೆಲ್ಲಾ ಸರಿಪಡಿಸಿಕೊಳ್ಳಬಹುದು ಎಂದು ತಿಳಿಯುತ್ತದೆ. ಇತ್ತೀಚೆಗೆ ಸಿಎಂ ನೇತೃತ್ವದಲ್ಲಿ ಕೆರೆ ಅಭಿವೃದ್ಧಿ ಪ್ರಾಧಿಕಾರದ ಸಭೆ ಮಾಡಿದ್ದು, ಮುಂಜಾಗ್ರತಾ ಸಭೆಯನ್ನು ಮಾಡಿದ್ದೇವೆ. ಬೆಂಗಳೂರಿನಲ್ಲಿ ಮಳೆನೀರುಗಾಲುವೆಗಳ ಅಭಿವೃದ್ಧಿ ಪೂರ್ಣಗೊಳಿಸಲು 2 ಸಾವಿರ ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ. ಮಳೆಯಿಂದಾಗುತ್ತಿರುವ ಸಮಸ್ಯೆಗಳ ಬಗ್ಗೆ ಜನರಿಗೆ ಆಕ್ರೋಶವಿದೆ. ಹೀಗಾಗಿ ತಗ್ಗು ಪ್ರದೇಶಗಳಲ್ಲಿ ಯಾವುದೇ ಕಾರಣಕ್ಕೂ ಬೇಸ್ ಮೆಂಟ್ ಪಾರ್ಕಿಂಗ್ ನಿರ್ಮಾಣ ಮಾಡದಿರುವಂತೆ ನಿಯಮ ರೂಪಿಸಲು ನಗರ ಯೋಜನಾ ಪ್ರಾಧಿಕಾರಕ್ಕೆ ಸೂಚಿಸಿದ್ದೇನೆ” ಎಂದು ತಿಳಿಸಿದರು.
“ಕೆಲವು ಪ್ರದೇಶಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದರೂ ಭೂಮಿಯಿಂದ ಜಲ ಬರುತ್ತಿದೆ. ಇದನ್ನು ತೆಗೆಯುವಾಗ ಇಬ್ಬರು ಮೃತಪಟ್ಟಿದ್ದಾರೆ. ಇಂತಹ ಅನಾಹುತಗಳನ್ನು ತಪ್ಪಿಸಲು ರಾಜಕಾಲುವೆಗಳ ಎರಡೂ ಬದಿಯ ಬಫರ್ ವಲಯದಲ್ಲಿ ರಸ್ತೆ ಮಾಡಲು ತೀರ್ಮಾನಿಸಿದ್ದೇವೆ. ಇದರಿಂದ 50 ಅಡಿಗಳಷ್ಟು ಜಾಗ ಸುರಕ್ಷಿತವಾಗಿರುತ್ತದೆ. ಜತೆಗೆ ರಾಜಕಾಲುವೆಗಳ ಹೂಳೆತ್ತಲು, ಜನರ ಸಂಚಾರಕ್ಕೂ ಅನುಕೂಲವಾಗಲಿದೆ” ಎಂದರು.
ವಿರೋಧ ಪಕ್ಷಗಳಿರುವುದೇ ರಾಜಕೀಯ ಮಾಡಲು
ಬುಧವಾರ ಮಳೆ ಹಾನಿ ಪ್ರದೇಶಗಳ ವೀಕ್ಷಣೆ ವೇಳೆ ಕೆಲವರು ನಿಮ್ಮನ್ನು ಭೇಟಿ ಮಾಡುವುದಕ್ಕೆ ನಿರಾಕರಿಸಿದರು ಎಂಬ ವಿಚಾರವಾಗಿ ಕೇಳಿದಾಗ, “ಅನೇಕರು ನಮ್ಮನ್ನು ಭೇಟಿ ಮಾಡಿದರು, ನಮ್ಮ ಮೇಲೆ ಕೂಗಾಡಿದರು. ನಾನು ಅವರೆಲ್ಲರ ದೂರುಗಳನ್ನು ಆಲಿಸಿದೆ. ಈ ರೀತಿ ಸಮಸ್ಯೆಗೆ ಒಳಗಾದವರು ಕೂಗಾಡುವುದು ಸಹಜ. ನಾವಿರುವುದೇ ಅವರ ಸಮಸ್ಯೆ ಆಲಿಸಲು. ಅವರ ಸಮಸ್ಯೆಗಳನ್ನು ಬಗೆಹರಿಸಲೇ ನಾವಿರುವುದು. ನಾನು ಯಾವಾಗ ಬೇಕಾದರೂ ಅವರನ್ನು ಭೇಟಿ ಮಾಡುತ್ತೇನೆ. ನೂರಾರು ಜನರನ್ನು ಭೇಟಿ ಮಾಡಲಾಗದಿದ್ದರೂ ಅವರ ಪರವಾಗಿ ಬರುವವರನ್ನು ನಾನು ಭೇಟಿ ಮಾಡಿಯೇ ಮಾಡುತ್ತೇನೆ. ಕೆಲವರು ನಮ್ಮ ವಿರುದ್ಧ ಕೂಗಾಡಿದರೆ, ಮತ್ತೆ ಕೆಲವರು ನಮ್ಮ ಕೆಲಸಕ್ಕೆ ಪ್ರಶಂಸೆ ನೀಡುತ್ತಾರೆ. ಬೆಂಗಳೂರು ನಗರದಲ್ಲಿ ಮಳೆಯಿಂದ ಸಮಸ್ಯೆಗೆ ಸಿಲುಕುತ್ತಿದ್ದ ಜಾಗಗಳ ಸಂಖ್ಯೆ 211 ಇತ್ತು. ಈ ಪೈಕಿ 166 ಪ್ರದೇಶಗಳಲ್ಲಿ ಸಮಸ್ಯೆ ಬಗೆಹರಿಸಲಾಗಿದೆ. ಉಳಿದ 44 ಕಡೆ ಕೆಲಸ ಬಾಕಿ ಇದ್ದು, ಇದರಲ್ಲಿ 24 ಕಡೆಗಳಲ್ಲಿ ಕಾರ್ಯ ಪ್ರಗತಿಯಲ್ಲಿದೆ. ವಿರೋಧ ಪಕ್ಷದವರು ಇರುವುದೇ ರಾಜಕೀಯ ಮಾಡಲು, ಮಾಡಲಿ. ನಾವು ಅವರ ಸಲಹೆಗಳನ್ನು ಸ್ವಾಗತಿಸುತ್ತೇವೆ” ಎಂದರು.
ಬಿಜೆಪಿ ಶಾಸಕರ ಕ್ಷೇತ್ರದಲ್ಲೇ ಇಂತಹ ಸಮಸ್ಯೆ
ನಾವು 2 ಸಾವಿರ ಕೋಟಿ ಯೋಜನೆ ಇಟ್ಟಿದ್ದೆವು ಆದರೆ ರಾಜ್ಯ ಸರ್ಕಾರ ಅದನ್ನು ಬಳಸಿಕೊಂಡಿಲ್ಲ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, “ಅವರ ಕಾಲದಲ್ಲಿ ಯಾವುದೇ ಪರಿಹಾರ ಕಾರ್ಯವನ್ನು ಮಾಡಿಲ್ಲ. ನಮ್ಮ ಸರ್ಕಾರ ಮಳೆನೀರು ಗಾಲುವೆ ಯೋಜನೆಯನ್ನು ಏಕಕಾಲಕ್ಕೆ ಪೂರ್ಣಗೊಳಿಸಲು ಮುಂದಾಗಿದ್ದೇವೆ. ಆರ್.ಅಶೋಕ್ ಅವರಿಗೆ ಒಂದು ಮಾತು ಹೇಳಲು ಬಯಸುತ್ತೇನೆ. ಇಂತಹ ಸಮಸ್ಯೆಗಳು ಆಗುತ್ತಿರುವುದು ಕೇವಲ ಬಿಜೆಪಿ ಶಾಸಕರ ಕ್ಷೇತ್ರಗಳಲ್ಲಿ ಮಾತ್ರ. ಅವರು ತಮ್ಮ ಅವಧಿಯಲ್ಲಿ ಸರಿಯಾಗಿ ಕೆಲಸ ಮಾಡದೇ ಇರುವ ಕಾರಣ ಈ ಸಮಸ್ಯೆ ಎದುರಾಗಿದೆ ಎಂದು ತಿಳಿಸಿದರು.
ರಾಮನಗರ ಜಿಲ್ಲೆ ಮರುನಾಮಕರಣ ಕೇವಲ ಆಸ್ತಿ ಮೌಲ್ಯ ಹೆಚ್ಚಿಸಿಕೊಳ್ಳಲು ಎಂಬ ಟೀಕೆ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ಸಚಿವ ಸಂಪುಟದಲ್ಲಿ ಚರ್ಚೆಯಾಗಲಿ. ಆನಂತರ ನಾನು ನಿಮಗೆ ಪ್ರತಿಕ್ರಿಯೆ ನೀಡುತ್ತಾನೆ” ಎಂದರು.
ಉತ್ತರ ಪ್ರದೇಶದಲ್ಲಿ ನಗರಗಳ ಹೆಸರು ಬದಲಾವಣೆ ಮಾಡುವಾಗ ಯಾವುದೇ ತೊಂದರೆ ಇರಲಿಲ್ಲ. ಆದರೆ ಕರ್ನಾಟಕದ ವಿಚಾರದಲ್ಲಿ ಯಾಕೆ ಇಷ್ಟು ಅಡೆತಡೆ ಎಂದು ಕೇಳಿದಾಗ, “ಇದು ಕೇವಲ ರಾಜಕೀಯವಷ್ಟೇ” ಎಂದರು.
SHOCKING : ಹಾಸನದಲ್ಲಿ ಹೃದಯವಿದ್ರಾವಕ ಘಟನೆ : ಬಾತ್ರೂಂನಲ್ಲೆ ಕುಸಿದು ಬಿದ್ದು ಯುವತಿ ಸಾವು!