ಮಂಡ್ಯ : ಜೀತ ಪದ್ಧತಿಗೆ ಬಡತನವೇ ಮುಖ್ಯ ಕಾರಣವಾಗಿದ್ದು, ಜೀತ ಕಾರ್ಮಿಕರನ್ನು ಮುಖ್ಯ ವಾಹಿನಿಗೆ ತರುವ ಹೊಣೆಗಾರಿಕೆ ನಮ್ಮೇಲ್ಲರ ಕರ್ತವ್ಯವಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೋಮವಾರ ಹೇಳಿದರು.
ಮದ್ದೂರು ಪಟ್ಟಣದ ತಾಲೂಕು ಪಂಚಾಯಿತಿ ಕಛೇರಿ ಸಭಾಂಗಣದಲ್ಲಿ ಜೀತಮುಕ್ತರಿಗೆ ಉಚಿತ ಆರೋಗ್ಯ ಶಿಬಿರ ಹಾಗೂ ಸರ್ಕಾರದಿಂದ ವಿವಿಧ ಸೌಲಭ್ಯಗಳ ನೋಂದಣಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳು ಕಳೆದರೂ ಜೀತ ಪದ್ಧತಿ ಇನ್ನೂ ಜೀವಂತವಾಗಿರುವುದು ಶೋಚನೀಯ ಸಂಗತಿ. ಜೀತ ಪದ್ಧತಿ ಕಾನೂನು ಬಾಹಿರ ಎಂದು ತಿಳಿದಿದ್ದರೂ ಕೆಲವರು ಬಡತನದಿಂದ ಜೀತದಾಳಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ಒಟ್ಟು 86 ಮಂದಿ ಇದ್ದು, ಅವರಲ್ಲಿ 4 ಹೆಣ್ಣು, 82 ಗಂಡು ಜನರನ್ನು ಜೀತ ವಿಮುಕ್ತರನ್ನಾಗಿ ಮಾಡಿ ಸಮಾಜದ ಮುಖ್ಯವಾಹಿನಿಗೆ ತರಲು ಜೀತವಿಮುಕ್ತರು ಹಾಗೂ ಅವರ ಅವಲಂಬಿತರ ಬಳಿ ಸರ್ಕಾರಿ ದಾಖಲೆಗಳಿಲ್ಲದಿರುವುದು ತಿಳಿದು ಬಂತು. ಎಲ್ಲಾ ಇಲಾಖೆಗಳ ಸೌಲಭ್ಯ ಪಡೆಯಲು ಕೆಲವು ದಾಖಲೆಗಳು ಅಗತ್ಯವಾಗಿ ಬೇಕಿರುವುದರಿಂದ ಮೊದಲಿಗೆ ಜಿಲ್ಲೆಯ ಎಲ್ಲಾ ಜೀತ ವಿಮುಕ್ತರಿಗೂ ಸರ್ಕಾರದ 13 ದಾಖಲೆಗಳನ್ನು ನೀಡಲಾಗುತ್ತಿದೆ ಇದರೊಂದಿಗೆ ಅವರ ಆರೋಗ್ಯ ತಪಾಸಣೆ ಸಹ ನಡೆಸಲಾಗುತ್ತಿದೆ ಎಂದರು.
ಆಧಾರ್ ಕಾಡ್೯ ಸೇರಿದಂತೆ ವಿವಿಧ ಗುರುತಿನ ಚೀಟಿಯನ್ನು ನೀಡಲಾಗುತ್ತಿದ್ದು, ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಪಡೆದು ಇನ್ನೂ ಮುಂದೆ ಸ್ವಾವಲಂಭಿಗಳಾಗಿ ಘನತೆಯುಕ್ತ ಜೀವನ ನಡೆಸಬಹುದು ಎಂದು ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಜೀತ ಪದ್ಧತಿಗೆ ಬಡತನವೇ ಮುಖ್ಯ ಕಾರಣ. ಜೀತ ವಿಮುಕ್ತರಿಗೆ ಕಾಯ್ದೆಗಳ ಮೂಲಕ ಭದ್ರತೆ ಒದಗಿಸಿ ಪುನರ್ವಸತಿ ಕಲ್ಪಿಸಿ ಜೀತ ಕಾರ್ಮಿಕರನ್ನು ಮುಖ್ಯ ವಾಹಿನಿಗೆ ತರುವ ಹೊಣೆಗಾರಿಕೆ ಎಲ್ಲ ಅಧಿಕಾರಿಗಳ ಮೇಲಿದೆ.
ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸುವುದು ಅತ್ಯವಶ್ಯವಾಗಿದೆ. ಸರ್ಕಾರ ಜನ ಕಲ್ಯಾಣಕ್ಕೆ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದು, ಅವುಗಳ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಆರ್ಥಿಕವಾಗಿ ಸಬಲರಾಗುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.
ಇ-ಸ್ವತ್ತು ಅಭಿಯಾನ- ನನ್ನ ಗುರುತು ಅಭಿಯಾನದಲ್ಲಿ ಮತ್ತೊಂದು ಮೈಲಿಗಲ್ಲು ಜೀತವಿಮುಕ್ತರ ಸ್ವಂತ ಸೂರಿಗೆ ದಾಖಲೆ ಒದಗಿಸುವ ಕಾರ್ಯ ಈಗಾಗಲೇ ನಡೆದಿದ್ದು, 49ಕ್ಕೂ ಹೆಚ್ಚು ಇ-ಸ್ವತ್ತುಗಳು, ಅರ್ಹ ವಯಸ್ಸಿನ ಜೀತವಿಮುಕ್ತರ ಕುಟುಂಬದವರಿಗೆ 172 – ಇ-ಶ್ರಮ್ ಕಾರ್ಡ್ಗಳು, 180 ಕ್ಕೂ ಹೆಚ್ಚು ಸ್ವ-ಸಹಾಯ ನೋಂದಣಿ, 10 ಜಾತಿ ಆದಾಯ ಪ್ರಮಾಣ ಪತ್ರ, 180ಕ್ಕೂ ಹೆಚ್ಚು PMJJBY/PMSBY, UDID ಗುರುತಿನ ಚೀಟಿ, ನರೇಗಾ ಇತ್ಯಾದಿ ಸವಲತ್ತುಗಳನ್ನು ಒದಗಿಸಿ, ಜೀತ ವಿಮುಕ್ತರ ಸ್ವಾಭಿಮಾನದ ಬದುಕಿನ ಚುಕ್ಕಾಣಿ ಹಿಡಿಯಲು ಜಿಲ್ಲಾ ಪಂಚಾಯಿತ್ ನೆರವಾಗಿದೆ ಎಂದು ಸಿಇಓ ನಂದಿನಿ ಹೇಳಿದರು.
ಕಾರ್ಯಕ್ರಮದಲ್ಲಿ ಮದ್ದೂರು ತಾಲ್ಲೂಕು ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ, ಕಾರ್ಯನಿರ್ವಾಹಕ ಅಧಿಕಾರಿ ರಾಮಲಿಂಗಯ್ಯ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್, ನರೇಗಾ ಸಹಾಯಕ ನಿರ್ದೇಶಕ ಮಂಜುನಾಥ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ