ತೆಲ್ ಅವಿವ್: ಇರಾನ್ ಜೊತೆಗಿನ ಸಂಘರ್ಷ ತೀವ್ರಗೊಂಡಿರುವ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇರಾನ್ ವಿರುದ್ಧ ಹರಿಹಾಯ್ದಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಸಾವಿನ ಬಗ್ಗೆ ಹರಡಿದ್ದ ವದಂತಿಗಳಿಗೆ ತೆರೆ ಎಳೆದ ಅವರು, “ನಾನಿನ್ನೂ ಜೀವಂತವಾಗಿದ್ದೇನೆ ಮತ್ತು ಈ ಯುದ್ಧದಲ್ಲಿ ನಾವು ಗೆಲ್ಲುತ್ತಿದ್ದೇವೆ” ಎಂದು ಘೋಷಿಸಿದರು.
ತಮ್ಮ ಭಾಷಣದ ಆರಂಭದಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, “ನನ್ನ ಪ್ರೀತಿಯ ಸಹೋದರ ಸಹೋದರಿಯರೇ, ಇಸ್ರೇಲ್ ನಾಗರಿಕರೇ, ನಿಮ್ಮ ಬಗ್ಗೆ ನನಗೆ ಹೆಮ್ಮೆಯಿದೆ. ಬಂಕರ್ಗಳಲ್ಲಿ ಮತ್ತು ರಕ್ಷಣಾ ಕೊಠಡಿಗಳಲ್ಲಿ ಗಂಟೆಗಟ್ಟಲೆ ಕಳೆಯುವುದು ಎಷ್ಟು ಕಷ್ಟ ಎಂದು ನನಗೆ ತಿಳಿದಿದೆ. ಶಾಲೆಗಳು ಮತ್ತು ಆರ್ಥಿಕತೆಯನ್ನು ನಾವು ಶೀಘ್ರದಲ್ಲೇ ಸಹಜ ಸ್ಥಿತಿಗೆ ತರಲಿದ್ದೇವೆ. ಉದ್ಯಮಿಗಳು ಮತ್ತು ಸೈನಿಕರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲು ಸರ್ಕಾರ ಬದ್ಧವಾಗಿದೆ,” ಎಂದು ಭರವಸೆ ನೀಡಿದರು.
ನೆತನ್ಯಾಹು ಅವರ 3 ಪ್ರಮುಖ ಗುರಿಗಳು:
ಇರಾನ್ ವಿರುದ್ಧದ ಈ ಹೋರಾಟದಲ್ಲಿ ಇಸ್ರೇಲ್ ಮೂರು ಪ್ರಮುಖ ಗುರಿಗಳನ್ನು ಹೊಂದಿದೆ ಎಂದು ಅವರು ತಿಳಿಸಿದರು:
ಇರಾನ್ನ ಪರಮಾಣು ಯೋಜನೆಯನ್ನು ಸಂಪೂರ್ಣವಾಗಿ ನಾಶಪಡಿಸುವುದು.
ಇರಾನ್ನ ಕ್ಷಿಪಣಿ ಯೋಜನೆಯನ್ನು ಧೂಳೀಪಟ ಮಾಡುವುದು.
ಇರಾನ್ನ ಜನತೆ ತಮ್ಮ ಭವಿಷ್ಯವನ್ನು ತಾವೇ ನಿರ್ಧರಿಸುವಂತಹ ಪೂರಕ ಪರಿಸ್ಥಿತಿಯನ್ನು ನಿರ್ಮಿಸುವುದು.
‘ಇರಾನ್ ಅನ್ನು ಮಣ್ಣು ಮುಕ್ಕಿಸುತ್ತೇವೆ’
“ಇರಾನ್ ತನ್ನ ಪರಮಾಣು ಮತ್ತು ಕ್ಷಿಪಣಿ ಯೋಜನೆಗಳನ್ನು ಮರುಸ್ಥಾಪಿಸಲು ಯತ್ನಿಸುತ್ತಿದೆ, ಆದರೆ ನಾವು ಅದನ್ನು ಮತ್ತೆ ಮಣ್ಣು ಮುಕ್ಕಿಸುತ್ತೇವೆ” ಎಂದು ನೆತನ್ಯಾಹು ಗುಡುಗಿದರು. ಅಯತೊಲ್ಲಾ ಖಮೇನಿ ಸೇರಿದಂತೆ ರೆವಲ್ಯೂಷನರಿ ಗಾರ್ಡ್ಸ್ನ ಉನ್ನತ ನಾಯಕರನ್ನು ಈಗಾಗಲೇ ಹತ್ಯೆ ಮಾಡಲಾಗಿದೆ. ಇತ್ತೀಚೆಗಷ್ಟೇ ಕುಖ್ಯಾತ ಹಂತಕ ಅಲಿ ಲಾರಿಜಾನಿ ಮತ್ತು ಅವರ ಗುಪ್ತಚರ ಸಚಿವರನ್ನು ಕೊಂದಿದ್ದೇವೆ ಎಂದು ಅವರು ಮಾಹಿತಿ ನೀಡಿದರು.
ಟ್ರಂಪ್ ಬಗ್ಗೆ ಸ್ಪಷ್ಟನೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಇಸ್ರೇಲ್ ಯುದ್ಧಕ್ಕೆ ಎಳೆತಂದಿದೆ ಎಂಬ ವದಂತಿಗಳನ್ನು ನೆತನ್ಯಾಹು ಅಲ್ಲಗಳೆದರು. “ಟ್ರಂಪ್ ಅವರು ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವ ನಾಯಕ. ಅವರಿಗೆ ಏನು ಮಾಡಬೇಕೆಂದು ಯಾರೂ ಹೇಳಿಕೊಡಬೇಕಿಲ್ಲ. ನಮ್ಮ ಮತ್ತು ಅವರ ನಡುವಿನ ಸಮನ್ವಯ ಅತ್ಯುತ್ತಮವಾಗಿದೆ,” ಎಂದು ಅವರು ಸ್ಪಷ್ಟಪಡಿಸಿದರು.
ಶತ್ರುಗಳ ಕೋಟೆ ಕುಸಿಯುತ್ತಿದೆ
ಯುದ್ಧದ ಆರಂಭದಲ್ಲಿ ಇಸ್ರೇಲ್ನ ನಗರಗಳಾದ ತೆಲ್ ಅವಿವ್ ಮತ್ತು ಹೈಫಾದಲ್ಲಿನ ಗೋಪುರಗಳು ಉರುಳುತ್ತವೆ ಎಂದು ಶತ್ರುಗಳು ಭಾವಿಸಿದ್ದರು. ಆದರೆ ಈಗ ಗೋಪುರಗಳು ಉರುಳುತ್ತಿರುವುದು ಇರಾನ್ ರಾಜಧಾನಿ ಟೆಹ್ರಾನ್ನಲ್ಲಿ ಎಂದು ನೆತನ್ಯಾಹು ಲೇವಡಿ ಮಾಡಿದರು. “ಕೇವಲ 20 ದಿನಗಳ ಯುದ್ಧದಲ್ಲಿ ನಾವು ದೊಡ್ಡ ಮಟ್ಟದ ಯಶಸ್ಸು ಕಂಡಿದ್ದೇವೆ. ಇರಾನ್ ಈಗ ಜಗತ್ತನ್ನು ಬ್ಲ್ಯಾಕ್ಮೇಲ್ ಮಾಡುವ ಸ್ಥಿತಿಯಲ್ಲಿಲ್ಲ,” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.








