ಬೆಂಗಳೂರು: ಗುಂಡಿಗಳನ್ನು ಮುಚ್ಚಿ ರಸ್ತೆಗಳನ್ನು ದುರಸ್ಥಿ ಮಾಡುವ ಬದಲು ಉದ್ಯಮಿ ಕಿರಣ್ ಮುಜುಂದಾರ್ ಶಾ ಅವರನ್ನು ಟೀಕೆ ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ಮೇಲೆ ಚಾಟಿ ಬೀಸಿದರು.
ಬೆಂಗಳೂರಿನ ಯಲಹಂಕದಲ್ಲಿರುವ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೋ (ICAR) 33ನೇ ಸಂಸ್ಥಾಪನಾ ದಿನಾಚರಣೆ ಹಾಗೂ 3ನೇ ಕೃಷಿ ಕೀಟ ಜೈವಿಕ ನಿಯಂತ್ರಣ ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.
ಶಾ ಅವರು ಹೇಳಿದ್ದು ಒಂದೆಡೆ ಇರಲಿ, ದಿನನಿತ್ಯವೂ ಮಾಧ್ಯಮಗಳು ತೋರಿಸುತ್ತಿರುವುದು ಸುಳ್ಳೇ? ವಾಸ್ತವಾಂಶವನ್ನು ಮಾಧ್ಯಮಗಳೇ ತೋರಿಸುತ್ತಿವೆ. ಗುಂಡಿಗಳನ್ನು ಮುಚ್ಚಿ ಸಮಸ್ಯೆ ಬಗೆಹರಿಸುವುದು ಬಿಟ್ಟು ಶಾ ಅವರನ್ನು ಟೀಕಿಸುವುದರಲ್ಲಿ ಈ ಸರ್ಕಾರ ಮತ್ತು ಕಾಂಗ್ರೆಸ್ ನಾಯಕರು ಮಗ್ನರಾಗಿರುವುದು ಸರಿಯಲ್ಲ ಎಂದು ಕುಮಾರಸ್ವಾಮಿ ಅವರು ಕಟುವಾಟಿ ಟೀಕಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರವು ಜನರ ಕೆಲಸ ಮಾಡುವುದು ಬಿಟ್ಟು ಕ್ಷುಲ್ಲಕ ವಿಚಾರಗಳ ಮೇಲೆ ಗಮನವಿಟ್ಟು ಸಮಯ ಪೋಲು ಮಾಡುತ್ತಿದೆ. ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಸರ್ಕಾರವನ್ನು ಎಚ್ಚರಿಸಿದ ಉದ್ಯಮಿ ಕಿರಣ್ ಮುಜುಂದಾರ್ ಶಾ ಅವರ ಟ್ವೀಟ್ ಗೆ ಈ ಸರ್ಕಾರ ಪ್ರತಿ ಟೀಕೆ ಮಾಡುತ್ತಿರುವುದು ಸರಿಯಲ್ಲ. ಒಂದು ಸರ್ಕಾರದ ವರ್ತನೆ ಇರಬೇಕಾದದ್ದು ಹೀಗಲ್ಲ ಎಂದು ಸಚಿವರು ಹೇಳಿದರು.
ರಸ್ತೆಗುಂಡಿಗಳಿಂದಾಗಿ ಸಾಕಷ್ಟು ಬೆಂಗಳೂರಿನಲ್ಲಿ ಜನರಿಗೆ ಬಹಳ ತೊಂದರೆ ಆಗಿದೆ. ನಾನು ಸಿಎಂ ಆಗಿದ್ದಾಗ ನನ್ನ ಕಾಲದ ಎರಡೂ ಅವಧಿಯಲ್ಲೂ ಗುಂಡಿಗಳ ಬಗ್ಗೆ ಯಾವ ಉದ್ಯಮಿಗಳೂ ಟೀಕೆ ಮಾಡಲಿಲ್ಲ. 2006-07ರಲ್ಲಿ 59 ರಸ್ತೆಗಳ ಅಗಲೀಕರಣಕ್ಕೆ ಮಂಜೂರಾತಿ ನೀಡಿ ಐದಾರು ತಿಂಗಳಲ್ಲೇ ಮುಗಿಸಲಾಗಿತ್ತು. ಇವರಿಗೆ ಕೆಲಸ ಮಾಡಲು ಏನು ಅಡ್ಡಿ ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಈಗಲೂ ಇವರು ಮಾಡುತ್ತಿರುವ ಕೆಲಸಗಳು ನನ್ನ ಅವಧಿಯಲ್ಲಿ ನಾನು ಮಂಜೂರಾತಿ ನೀಡಿದ್ದು. ಈ ಸರ್ಕಾರಕ್ಕೆ ಜನರ ಕೆಲಸ ಮಾಡುವುದು ಬಿಟ್ಟು ವಿನಾಕಾರಣ ಕಾಲಹರಣ ಮಾಡುತ್ತಿದೆ. ಬೇರೆ ರಾಜ್ಯಗಳಲ್ಲಿ ಉದ್ಯಮಿಗಳಿಗೆ ಕೊಡುವ ಸವಲತ್ತು, ರಿಯಾಯ್ತಿಗಳ ಬಗ್ಗೆ ಹೇಳಿದರೆ ಅಲ್ಲಿಗೇ ಹೋಗಲಿ, ಇಲ್ಲಿಗ್ಯಾಕೆ ಬಂದ್ರು ಅಂತಾರೆ. ಹೀಗೆ ಹೇಳಿದರೆ ಯಾವ ಉದ್ಯಮ ರಾಜ್ಯಕ್ಕೆ ಬರುತ್ತದೆ ಎಂದು ಅವರು ಕಿಡಿಕಾರಿದರು.
ಈಗ ದಿನವೂ ಆರ್ಎಸ್ಎಸ್.. ಆರ್ಎಸ್ಎಸ್.. ಎಂದು ಜಪ ಮಾಡುತ್ತಿದೆ ಕಾಂಗ್ರೆಸ್ ಸರ್ಕಾರ. ಇದು ಆರ್ಎಸ್ಎಸ್ ಬಗ್ಗೆ ಚರ್ಚೆ ಮಾಡುವ ಸಂದರ್ಭವೇ? ರಾಜ್ಯದಲ್ಲಿ ಎಷ್ಟೊಂದು ಸಮಸ್ಯೆಗಳಿವೆ, ಅವುಗಳನು ನಿವಾರಿಸುವುದು ಬಿಟ್ಟು ಒಂದು ಸಂಘಟನೆ ವಿರುದ್ಧ ಚರ್ಚಿಸುತ್ತಿದ್ದರೆ ಉಪಯೋಗ ಏನು? ಇಂದು ಸಚಿವರು ಕೇಳಿದರು.
ಚನ್ನಪಟ್ಟಣದಲ್ಲಿ ಖವ್ವಾಲಿ ಕಾರ್ಯಕ್ರನದಲ್ಲಿ ಪೊಲೀಸರ ಮೇಲೆ ಹಣ ಎರಚಿದ ಘಟನೆ ನಡೆದಿದೆ. ಚನ್ನಪಟ್ಟಣದಲ್ಲಿ ಪೊಲೀಸರ ಮುಂದೆ ಡಾನ್ಸ್ ಮಾಡ್ತಾರೆ, ಪೊಲೀಸರ ಮೇಲೆ ಹಣ ಎರಚ್ತಾರೆ. ಹಣ ಎರಚಕೊಂಡವರ, ಎರಚಿದವರ ಮೇಲೆ ಕ್ರಮ ಇಲ್ಲ. ಆದರೆ ಆರ್ಎಸ್ಎಸ್ ಪಥ ಸಂಚಲನದಲ್ಲಿ ಗಣವೇಷಧಾರಿ ಆಗಿದ್ದ ಪಿಡಿಓ ಮೇಲೆ ಕ್ರಮ ಕೈಗೊಳ್ಳುತ್ತಾರೆ. ಕಲಬುರಗಿಯಲ್ಲಿ ಕ್ರಮ ವಹಿಸಿದ ಮೇಲೆ ಚನ್ನಪಟ್ಟಣದಲ್ಲಿ ಕ್ರಮ ಯಾಕಿಲ್ಲ? ಎಂದು ಸರ್ಕಾರದ ಮೇಲೆ ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.
ಶಿಷ್ಟಾಚಾರ ಲೋಪ; ತಲೆಕೆಡಿಸಿಕೊಳ್ಳಲ್ಲ ಎಂದ ಸಚಿವರು:
ಹಾಸನಾಂಬೆ ದರ್ಶನ ವೇಳೆ ಜಿಲ್ಲಾಡಳಿತದಿನ ಶಿಷ್ಟಾಚಾರ ಪಾಲನೆ ಮಾಡದೆ ನಿಮಗೆ ಅಪಮಾನ ಮಾಡಲಾಗಿದೆ ಎಂಬ ಬಗ್ಗೆ ಮಾಧ್ಯಮಗಳು ಗಮನ ಸೆಳೆದಾಗ ಸಚಿವರು ಹೇಳಿದ್ದಿಷ್ಟು; ನಾನು ಶಿಸ್ತಾಚಾರಕ್ಕೆ ಆದ್ಯತೆ ಕೊಡಲ್ಲ, ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅಧಿಕಾರಿಗಳಿಗೇಕೆ ತೊಂದರೆ ಕೊಡಬೇಕು? ದೇವಿಯ ದರ್ಶನ ಮುಖ್ಯ, ನನಗೆ ದರ್ಶನ ಆಗಿದೆ. ಸಾರ್ವಜನಿಕರು ಕೂಡ ಯಾವುದೇ ತೊಂದರೆಗೆ ಒಳಗಾಗದೆ ನೆಮ್ಮದಿಯಾಗಿ ತಾಯಿಯ ದರ್ಶನ ಮಾಡುತ್ತಿದ್ದಾರೆ. ಉತ್ತಮವಾಗಿ ವ್ಯವಸ್ಥೆ ಮಾಡಲಾಗಿದೆ. ಅದು ಮುಖ್ಯವೇ ಹೊರತು ಶಿಷ್ಟಾಚಾರವಲ್ಲ ಎಂದರು ಕೇಂದ್ರ ಸಚಿವರು.
ನಾನು ಸಿಎಂ ಆಗಿದ್ದ ಸಂದರ್ಭದಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾಗ ಅಧಿಕಾರಿಗಳು ಹೊರಗೆ ಮಲಗುತ್ತಿದ್ದರು. ನನ್ನಿಂದ ಅವರಿಗೆ ತೊಂದರೆ ಆಗಿದೆ. ಹೀಗಾಗಿ ನಾನು ಶಿಷ್ಟಾಚಾರದ ಬಗ್ಗೆ ತಲೆಕೆಡಿಸಿಕೊಳ್ಳಲಾರೆ ಎಂದು ಅವರು ಹೇಳಿದರು.
ಪಕ್ಷದ ಕೋರ್ ಕಮಿಟಿಯನ್ನು ಪುನಾರಚನೆ ಮಾಡಲಾಗುತ್ತಿದ್ದು, ಎರಡು ಮೂರು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ರಾಜ್ಯದ ‘ಗ್ರಾಮ ಪಂಚಾಯ್ತಿ ಸಿಬ್ಬಂದಿ’ಗಳಿಗೆ ಗುಡ್ ನ್ಯೂಸ್: ಪ್ರತಿ ತಿಂಗಳು ‘ವೇತನ ಪಾವತಿ’ಗೆ ಸರ್ಕಾರ ಖಡಕ್ ಆದೇಶ
BREAKING: ಮಂಡ್ಯದಲ್ಲಿ ‘KSRTC ಬಸ್ಸು’ಗಳ ನಡುವೆ ಭೀಕರ ಅಪಘಾತ: 30ಕ್ಕೂ ಹೆಚ್ಚು ಜನರಿಗೆ ಗಾಯ