ನವದೆಹಲಿ: ಕಳೆದ ವರ್ಷ ನಡೆದ ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆಯ ವೇಳೆ ಪಾಕಿಸ್ತಾನಕ್ಕೆ ತಾಂತ್ರಿಕ ನೆರವು ನೀಡಿರುವುದನ್ನು ಚೀನಾ ಒಪ್ಪಿಕೊಂಡ ಬೆನ್ನಲ್ಲೇ, ಭಾರತವು ಚೀನಾಕ್ಕೆ ಕಟು ಶಬ್ದಗಳಲ್ಲಿ ಎಚ್ಚರಿಕೆ ನೀಡಿದೆ. “ಭಯೋತ್ಪಾದಕ ಮೂಲಸೌಕರ್ಯಗಳನ್ನು ರಕ್ಷಿಸಲು ಪ್ರಯತ್ನಿಸುವ ರಾಷ್ಟ್ರಗಳು, ಇಂತಹ ಕ್ರಮಗಳು ಜಾಗತಿಕ ಮಟ್ಟದಲ್ಲಿ ತಮ್ಮ ಗೌರವದ ಮೇಲೆ ಎಂತಹ ಪರಿಣಾಮ ಬೀರುತ್ತವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು” ಎಂದು ಭಾರತದ ವಿದೇಶಾಂಗ ಸಚಿವಾಲಯ (MEA) ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.
ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, “ಜವಾಬ್ದಾರಿಯುತ ರಾಷ್ಟ್ರಗಳೆಂದು ಕರೆಸಿಕೊಳ್ಳುವವರು ತಮ್ಮ ನಡೆಗಳಿಂದ ಜಾಗತಿಕ ವರ್ಚಸ್ಸಿಗೆ ಧಕ್ಕೆಯಾಗುತ್ತದೆಯೇ ಎಂದು ಯೋಚಿಸಲಿ. ಪ್ರಮುಖ ಶಕ್ತಿಗಳು ಯಾರ ಪರವಾಗಿ ನಿಲ್ಲುತ್ತಿವೆ ಎಂಬುದನ್ನು ಇಡೀ ವಿಶ್ವವೇ ಗಮನಿಸುತ್ತಿದೆ” ಎಂದು ಚೀನಾಕ್ಕೆ ಚಾಟಿ ಬೀಸಿದ್ದಾರೆ.
ಚೀನಾದ ಸರ್ಕಾರಿ ಮಾಧ್ಯಮಗಳು ಇತ್ತೀಚೆಗೆ ಪ್ರಸಾರ ಮಾಡಿದ ಸಂದರ್ಶನವೊಂದರಲ್ಲಿ, ಚೀನಾ ಮೂಲದ ಏವಿಯೇಷನ್ ಇಂಡಸ್ಟ್ರಿ ಕಾರ್ಪೊರೇಷನ್ ಆಫ್ ಚೀನಾ (AVIC) ಇಂಜಿನಿಯರ್ ಒಬ್ಬರು, 2025ರ ಮೇ ತಿಂಗಳ ಸಂಘರ್ಷದ ವೇಳೆ ಪಾಕಿಸ್ತಾನಕ್ಕೆ ಸ್ಥಳದಲ್ಲೇ ತಾಂತ್ರಿಕ ಬೆಂಬಲ ನೀಡಿದ್ದನ್ನು ಮೊದಲ ಬಾರಿಗೆ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಪಾಕಿಸ್ತಾನ ವಾಯುಸೇನೆಯು ಚೀನಾ ನಿರ್ಮಿತ ‘J-10CE’ ಯುದ್ಧ ವಿಮಾನಗಳನ್ನು ಬಳಸುತ್ತಿದ್ದು, ಇವುಗಳ ನಿರ್ವಹಣೆಯಲ್ಲಿ ಚೀನಾ ನೆರವಾಗಿತ್ತು.
2025ರ ಏಪ್ರಿಲ್ 22ರಂದು ಪಹಲ್ಗಾಮ್ನಲ್ಲಿ ನಡೆದ ಭೀಕರ ಉಗ್ರರ ದಾಳಿಯಲ್ಲಿ 26 ನಾಗರಿಕರು ಬಲಿಯಾಗಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯು ಮೇ 7ರಂದು ಪಾಕಿಸ್ತಾನ ಪ್ರೇರಿತ ಉಗ್ರರ ತಾಣಗಳ ಮೇಲೆ ‘ಆಪರೇಷನ್ ಸಿಂದೂರ್’ ಎಂಬ ನಿಖರವಾದ ಮತ್ತು ಬಹುಆಯಾಮದ ದಾಳಿಯನ್ನು ನಡೆಸಿತ್ತು. ಇದು ಸತತ 88 ಗಂಟೆಗಳ ಕಾಲ ನಡೆದ ಸುದೀರ್ಘ ಕಾರ್ಯಾಚರಣೆಯಾಗಿತ್ತು.
ಭಯೋತ್ಪಾದನೆಯ ವಿರುದ್ಧದ ಹೋರಾಟವು ರಾಷ್ಟ್ರೀಯ ಭದ್ರತೆಯನ್ನು ಕಾಯ್ದುಕೊಳ್ಳಲು ಅನಿವಾರ್ಯವಾದ ಕ್ರಮ ಎಂದು ಭಾರತ ಪ್ರತಿಪಾದಿಸಿದೆ. ಆಪರೇಷನ್ ಸಿಂದೂರ್ನ ಮೊದಲ ವರ್ಷಾಚರಣೆಯ ಸಂದರ್ಭದಲ್ಲೇ ಚೀನಾದ ಈ ‘ಸಹಕಾರ’ದ ಸುದ್ದಿ ಹೊರಬಂದಿರುವುದು ರಾಜತಾಂತ್ರಿಕ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.








