ಬೆಂಗಳೂರು: ಯುಜಿಸಿಇಟಿ- 25ರ ಅರ್ಜಿಗಳಲ್ಲಿನ ತಪ್ಪುಗಳನ್ನು ಆನ್ ಲೈನ್ ಮೂಲಕ ಸರಿಪಡಿಸಿಕೊಳ್ಳಲು ಜುಲೈ 1ರಿಂದ 4ರವರೆಗೆ ಅವಕಾಶ ನೀಡಿದ್ದು, ಅಗತ್ಯ ಇರುವವರು ಮಾತ್ರ ತಿದ್ದುಪಡಿ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಮನವಿ ಮಾಡಿದ್ದಾರೆ.
ಆನ್ ಲೈನ್ ತಿದ್ದುಪಡಿಗೆ ಅವಕಾಶ ನೀಡಿರುವ ಕಾರಣ ಜುಲೈ 2ರಿಂದ 4ರವರೆಗೆ ಕೆಇಎ ಕಚೇರಿಯಲ್ಲಿ ನಡೆಸಲು ಉದ್ದೇಶಿಸಿದ್ದ ಆಫ್ ಲೈನ್ ದಾಖಲೆ ಪರಿಶೀಲನೆಯನ್ನು ರದ್ದುಪಡಿಸಲಾಗಿದೆ. ಹೀಗಾಗಿ ಸ್ಲಾಟ್ ಬುಕ್ ಮಾಡಿಕೊಂಡಿರುವವರು ಕೂಡ ಕೆಇಎ ಕಚೇರಿಗೆ ಬರುವ ಅಗತ್ಯ ಇಲ್ಲ. ಅವರು ಕೂಡ ಆನ್ ಲೈನ್ ನಲ್ಲೇ ತಿದ್ದುಪಡಿ ಮಾಡಿಕೊಳ್ಳಬೇಕು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವೆರಿಫಿಕೇಷನ್ ಸ್ಲಿಪ್ ನಲ್ಲಿ ತಮ್ಮ ಕ್ಲೇಮ್ ಗಳು ಸರಿಯಾಗಿದ್ದರೆ ಅಂತಹವರು ಪುನಃ ಲಾಗಿನ್ ಆಗುವ ಅಗತ್ಯ ಇರುವುದಿಲ್ಲ. ಯಾರಿಗೆ ತಿದ್ದುಪಡಿ ಅನಿವಾರ್ಯ ಇದೆಯೊ ಅಂತಹವರು ಮಾತ್ರ ಮಾಡಿಕೊಳ್ಳಬೇಕು. ಒಮ್ಮೆ ನೋಡೋಣ ಎಂದು ತೆರೆದು, ನಂತರ ಎಡವಟ್ಟು ಮಾಡಿಕೊಳ್ಳುವುದು ಬೇಡ ಎಂದು ಅವರು ಸಲಹೆ ನೀಡಿದ್ದಾರೆ.
ತಿದ್ದುಪಡಿ ಮಾಡಿಕೊಂಡವರು ಜುಲೈ 5ರ ನಂತರ ವೆರಿಫಿಕೇಷನ್ ಸ್ಲಿಪ್ ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.
ಏನೆಲ್ಲ ತಿದ್ದುಪಡಿಗೆ ಅವಕಾಶ:
ಪ್ರವರ್ಗ, ಆದಾಯ, 371(ಜೆ) ಪ್ರಮಾಣ ಪತ್ರಗಳ ಸರಿಯಾದ ಆರ್ ಡಿ ಸಂಖ್ಯೆಯನ್ನು ಆನ್ ಲೈನ್ ಮೂಲಕವೇ ದಾಖಲಿಸಿಕೊಳ್ಳಬಹುದು. ವೆರಿಫಿಕೇಷನ್ ಸ್ಲಿಪ್ ಡೌನ್ಲೋಡ್ ಮಾಡಿಕೊಳ್ಳಲು ಸಾಧ್ಯವಾಗದ ಕ್ಲಾಸ್ ‘ಎ’ ಅಭ್ಯರ್ಥಿಗಳು (SATS ನಂಬರ್ ಮೂಲಕ ಆನ್ ಲೈನ್ ವೆರಿಫಿಕೇಷನ್ ಆಗದಿರುವ), ಗ್ರಾಮೀಣ ವ್ಯಾಸಂಗ ಹಾಗೂ ಕನ್ನಡ ಮಾಧ್ಯಮ ವ್ಯಾಸಂಗ ಪರಿಶೀಲನೆಯಾಗದಿರುವ ಅಭ್ಯರ್ಥಿಗಳು ಆಯಾ ಕಾಲೇಜು ಅಥವಾ ಸಮೀಪದ ಸರ್ಕಾರಿ ಪಿಯು ಕಾಲೇಜಿನಲ್ಲಿ ಜುಲೈ 4ರೊಳಗೆ ಪರಿಶೀಲನೆ ಮಾಡಿಸಿಕೊಳ್ಳಬೇಕು ಎಂದು ಅವರು ವಿವರಿಸಿದ್ದಾರೆ.
ಕ್ಲಾಸ್ ‘ಬಿ’ ಯಿಂದ ಕ್ಲಾಸ್ ‘ಓ’ ವರೆಗಿನ ಅಭ್ಯರ್ಥಿಗಳು ದಾಖಲೆ ಪರಿಶೀಲನೆ ಮಾಡಿಸಿಕೊಳ್ಳದೇ ಇದ್ದಲ್ಲಿ ಜು.1ರಿಂದ 4ರವರೆಗೆ ಕೆಇಎ ಕಚೇರಿಗೇ ಬರಬೇಕು ಎಂದು ಅವರು ತಿಳಿಸಿದ್ದಾರೆ.
ತಿದ್ದುಪಡಿಗೆ ಸ್ಲಾಟ್ ಬುಕ್ ಮಾಡಿಕೊಳ್ಳಲು ಅವಕಾಶ ನೀಡಿದಾಗ 10 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಕೋರಿಕೆ ಸಲ್ಲಿಸಿದ್ದು, ಅಷ್ಟು ಮಂದಿಯನ್ನು ರಾಜ್ಯದ ವಿವಿಧೆಡೆಯಿಂದ ಬೆಂಗಳೂರಿಗೆ ಕರೆಸುವುದು ಬೇಡ ಎನ್ನುವ ಕಾರಣಕ್ಕೆ ಆನ್ ಲೈನ್ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಇದರ ಜತೆಗೆ ಜೂ.28ರಂದು ರಾಜ್ಯದ ವಿವಿಧೆಡೆ ನಡೆದ ಸಿಇಟಿ ಸೀಟು ಹಂಚಿಕೆ ಮಂಥನ ಸಂದರ್ಭದಲ್ಲಿ ಕೂಡ ಪೋಷಕರು ಈ ಸಂಬಂಧ ಮನವಿ ಮಾಡಿದ್ದರು ಎಂದು ಅವರು ವಿವರಿಸಿದ್ದಾರೆ.
SSLC ವಿದ್ಯಾರ್ಥಿಗಳೇ ಗಮನಿಸಿ: ಪರೀಕ್ಷೆ-3ಕ್ಕೆ ಉಚಿತವಾಗಿ ಬಿಎಂಟಿಸಿ ಬಸ್ಸಿನಲ್ಲಿ ತೆರಳಲು ಅವಕಾಶ