ಬೆಂಗಳೂರು: ರಾಜ್ಯದ ಸರ್ಕಾರಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಪ್ರಮುಖ ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ‘ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ಅಧಿನಿಯಮ, 2026’ ಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಈ ಹೊಸ ತಿದ್ದುಪಡಿಯು ತಕ್ಷಣದಿಂದಲೇ ಜಾರಿಗೆ ಬರುವಂತೆ ಸರ್ಕಾರ ಆದೇಶ ಹೊರಡಿಸಿದೆ.
1. ನಿರ್ಣಾಯಕ ಹುದ್ದೆಗಳ ವರ್ಗೀಕರಣ:
ವರ್ಗಾವಣೆ ಪ್ರಕ್ರಿಯೆಗಾಗಿ ಬೋಧಕ ಹುದ್ದೆಗಳನ್ನು ಮೂರು ಪ್ರವರ್ಗಗಳಾಗಿ ವಿಂಗಡಿಸಲಾಗಿದೆ:
ಪ್ರವರ್ಗ 1: ಕರ್ನಾಟಕ ಪಬ್ಲಿಕ್ ಶಾಲೆಗಳು, ಆದರ್ಶ ವಿದ್ಯಾಲಯಗಳು ಮತ್ತು ಪಿಎಂ ಶ್ರೀ ಶಾಲೆಗಳು (ಮುಖ್ಯೋಪಾಧ್ಯಾಯರು ಮತ್ತು ಉಪ-ಪ್ರಾಂಶುಪಾಲರನ್ನು ಹೊರತುಪಡಿಸಿ).
ಪ್ರವರ್ಗ 2: 250 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಗಳು ಮತ್ತು ಸರ್ಕಾರಿ ಪದವಿಪೂರ್ವ ಕಾಲೇಜುಗಳು.
ಪ್ರವರ್ಗ 3: ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಅಥವಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು.
2. ಕನಿಷ್ಠ ಮತ್ತು ಗರಿಷ್ಠ ಸೇವಾ ಅವಧಿ:
ಕೌನ್ಸಿಲಿಂಗ್ ಮೂಲಕ ವರ್ಗಾವಣೆ: ನಿಗದಿತ ಹುದ್ದೆಗಳ ವರ್ಗಾವಣೆಯನ್ನು ಕೌನ್ಸಿಲಿಂಗ್ ಮೂಲಕವೇ ನಡೆಸಲಾಗುವುದು. ಇದಕ್ಕೆ ಆಯಾ ಶಾಲೆ ಅಥವಾ ಕಾಲೇಜಿನಲ್ಲಿ ಕನಿಷ್ಠ 12 ವರ್ಷಗಳ ನಿರಂತರ ಸೇವೆಯನ್ನು ಸಲ್ಲಿಸಿರಬೇಕು.
ಅನುಸೂಚಿ-1 ರ ಕ್ರಮ ಸಂಖ್ಯೆ III ರಲ್ಲಿನ ಹುದ್ದೆಗಳಲ್ಲಿ ಗರಿಷ್ಠ ಸೇವಾ ಅವಧಿಯನ್ನು 3 ವರ್ಷಗಳಿಗೆ ಸೀಮಿತಗೊಳಿಸಲಾಗಿದೆ.
3. ಕೋರಿಕೆ ವರ್ಗಾವಣೆಗೆ ಹೊಸ ನಿಯಮ:
ಶಿಕ್ಷಕರು ಅಥವಾ ಉಪನ್ಯಾಸಕರು ಕೋರಿಕೆ ವರ್ಗಾವಣೆ ಪಡೆಯಲು ಆಯಾ ಶಾಲೆಯಲ್ಲಿ ಕನಿಷ್ಠ ಸೇವಾ ಅವಧಿಯನ್ನು ಪೂರೈಸಿರಬೇಕು.
ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ವಿಶೇಷ ಸೂಚನೆ: ಈ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಈ ಪ್ರದೇಶದ ಹೊರಗೆ ವರ್ಗಾವಣೆ ಪಡೆಯಲು ಕನಿಷ್ಠ 10 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿರಬೇಕು.
4. ಮಾನವೀಯ ಆಧಾರದ ವರ್ಗಾವಣೆ:
ಗರ್ಭಿಣಿ ಶಿಕ್ಷಕಿಯರು ಅಥವಾ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವನ್ನು ಹೊಂದಿರುವ ಮಹಿಳಾ ಶಿಕ್ಷಕಿಯರಿಗೆ ವರ್ಗಾವಣೆಯಲ್ಲಿ ಆದ್ಯತೆ ನೀಡಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಈ ಸೌಲಭ್ಯವು ಪ್ರಸೂತಿ ರಜೆಯಿಂದ ಹಿಂದಿರುಗಿದ ನಂತರದ ವರ್ಷದಲ್ಲಿ ಕೈಗೊಳ್ಳುವ ಸಾಮಾನ್ಯ ವರ್ಗಾವಣೆಗೆ ಮಾತ್ರ ಅನ್ವಯಿಸುತ್ತದೆ.
5. ಇಲಾಖಾ ಬದಲಾವಣೆ ನಿರ್ಬಂಧ:
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಬೋಧಕ ಸಿಬ್ಬಂದಿಯನ್ನು ಇತರ ರಾಜ್ಯ ಸಿವಿಲ್ ಸೇವೆಗಳು ಅಥವಾ ಮಂಡಳಿ/ನಿಗಮಗಳಿಗೆ ವರ್ಗಾವಣೆ ಮಾಡುವುದನ್ನು ಈ ತಿದ್ದುಪಡಿಯ ಮೂಲಕ ನಿರ್ಬಂಧಿಸಲಾಗಿದೆ.
ಈ ಹೊಸ ನಿಯಮಗಳು ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಶಿಸ್ತನ್ನು ತರುವ ನಿರೀಕ್ಷೆಯಿದೆ.









