ಬೆಂಗಳೂರು : ದೇಶದ ಕ್ವಾಂಟಮ್ ಕ್ಷೇತ್ರದ ಬೆಳವಣಿಗೆಯಲ್ಲಿ ಐಐಎಸ್ಸ್ಸಿ ಕ್ವಾಂಟಮ್ ರಿಸರ್ಚ್ ಪಾರ್ಕ್ ಮುಂದಾಳತ್ವವನ್ನು ವಹಿಸುವ ಸಾಮರ್ಥ್ಯ ಹೊಂದಿದೆ. ಇದರ ಅಭಿವೃದ್ದಿಗಾಗಿ ರಾಜ್ಯ ಸರಕಾರ 48 ಕೋಟಿ ರೂಪಾಯಿಗಳನ್ನು ನೀಡಿದ್ದು, ಅಗತ್ಯ ಸಹಕಾರ ನೀಡಲು ಸಿದ್ದವಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು ತಿಳಿಸಿದರು.
ಇಂದು ಐಐಎಸ್ಸಿ ಆವರಣದಲ್ಲಿರುವ ಕ್ವಾಂಟಮ್ ರಿಸರ್ಚ್ ಪಾರ್ಕ್ ಗೆ ಭೇಟಿ ನೀಡಿ ಕ್ವಾಂಟಮ್ ಕ್ಷೇತ್ರದ ಅಭಿವೃದ್ದಿಗೆ ಅಗತ್ಯವಿರುವ ರೋಡ್ ಮ್ಯಾಪ್ ಬಗ್ಗೆ ತಜ್ಞರೊಂದಿಗೆ ಸಮಾಲೋಚನೆ ನಡೆಸಿದರು.
ಕ್ವಾಂಟಮ್ ರಿಸರ್ಚ್ ಪಾರ್ಕ್ನ ಮುಖ್ಯಸ್ಥರಾದ ಪ್ರೊ. ಅರಿಂದಮ್ ಘೋಷ್ ಮಾತನಾಡಿ, ಬೆಂಗಳೂರು ನಗರದಲ್ಲಿರುವ ವಿಶ್ವದ ಪ್ರತಿಷ್ಠಿತ ವಿಜ್ಞಾನ ಸಂಸ್ಥೆಯಾಗಿರುವ ಐಐಎಸ್ಸ್ಸಿ ಯಲ್ಲಿ ಸ್ಥಾಪಿಸಲಾಗಿರುವ ಕ್ವಾಂಟಮ್ ರಿಸರ್ಚ್ ಪಾರ್ಕ ದೇಶದಲ್ಲಿ ಕ್ವಾಂಟಮ್ ಕ್ಷೇತ್ರದ ಸರ್ವತೋಮುಖ ಮುಂದಾಳತ್ವವನ್ನು ವಹಿಸುವ ಸಾಮರ್ಥ್ಯ ಹೊಂದಿದೆ. ಕರ್ನಾಟಕ ರಾಜ್ಯ ಅದರಲ್ಲೂ ಬೆಂಗಳೂರು ನಗರ ಕ್ವಾಂಟಮ್ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿರುವಂತಹ ವಾತಾವರಣ ಹೊಂದಿದೆ. ನಗರದಲ್ಲಿರುವ ಶೈಕ್ಷಣಿಕ ಹಾಗೂ ಸಂಶೋಧನಾ ಸಂಸ್ಥೆಗಳ, ಕೈಗಾರಿಕೆಗಳನ್ನು ಸರಿಯಾದ ರೀತಿಯಲ್ಲಿ ತೊಡಗಿಸಿಕೊಳ್ಳುವುದರಿಂದ 2035 ರ ಒಳಗಾಗಿ “ಕ್ವಾಂಟಮ್ ಅಡ್ವಾಂಟೇಜ್ ಡ್ರಿವನ್ ಎಕಾನಮಿ ಇನ್ ಕರ್ನಾಟಕ” ರಚಿಸಬಹುದಾಗಿದೆ. ಈ ನಿಟ್ಟಿನಲ್ಲಿ ಅಂತರಾಷ್ಟ್ರೀಯ ತಜ್ಞರನ್ನು ಒಳಗೊಂಡಿರುವ ಸಲಹಾ ಸಮಿತಿಯನ್ನು ರಚಿಸುವ ಅಗತ್ಯವಿದೆ ಎಂದರು.
ಸಚಿವ ಎನ್ ಎಸ್ ಭೋಸರಾಜು ಮಾತನಾಡಿ, ಕರ್ನಾಟಕ ಸರ್ಕಾರ, ರಾಜ್ಯವನ್ನು ಕ್ವಾಂಟಮ್ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಅಗತ್ಯ ಸಹಕಾರ ನೀಡುತ್ತಿದೆ. ಈಗಾಗಲೇ ವಿಶ್ವದ ಪ್ರತಿಷ್ಠಿತ ವಿಜ್ಞಾನ ಸಂಶೋಧನಾ ಸಂಸ್ಥೆಯಾಗಿರುವ ಐಐಎಸ್ಸಿಯಲ್ಲಿ ಕ್ವಾಂಟಮ್ ರಿಸರ್ಚ್ ಪಾರ್ಕ್ ಸ್ಥಾಪಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ನಮ್ಮ ಕಾಂಗ್ರೆಸ್ ಸರ್ಕಾರವು ಕ್ವಾಂಟಮ್ ಪ್ರೋತ್ಸಾಹಕ್ಕೆ ಕಟಿಬದ್ದವಾಗಿದೆ. ಬೆಂಗಳೂರು ನಗರವನ್ನು ದೇಶದ ಕ್ವಾಂಟಮ್ ಹಬ್ ಮಾಡುವ ನಿಟ್ಟಿನಲ್ಲಿ ದೇಶದಲ್ಲೇ ಮೊದಲ ಬಾರಿಗೆ ಜುಲೈ 31 ಹಾಗೂ ಆಗಸ್ಟ್ 1 ರಂದು “ಕ್ವಾಂಟಮ್ ಇಂಡಿಯಾ ಬೆಂಗಳೂರು ಸಮಾವೇಶ” ಆಯೋಜಿಸಲಾಗಿದೆ ಎಂದರು.
ಐಐಎಸ್ಸಿ ಕ್ವಾಂಟಮ್ ಪಾರ್ಕ್ನಲ್ಲಿ ವಿಶ್ವದರ್ಜೆಯ ಅತ್ಯಾಧುನಿಕ ಸಂಶೋಧನಾ ಸಲಕರಣೆಗಳು, ಪ್ರಯೋಗಾಲಯಗಳು, ಇನ್ ಕ್ಯುಬಿರೇಟರ್ ನಂಥ ಸಕಲ ಸೌಲಭಗಳನ್ನು ಒದಗಿಸುವ ದೃಷ್ಟಿಯಿಂದ 48 ಕೋಟಿ ರೂಪಾಯಿಗಳ ಅನುದಾನ ನೀಡಲಾಗಿದೆ. ಈ ಸಂಸ್ಥೆ ದೇಶದ ಕ್ವಾಂಟಮ್ ಕ್ಷೇತ್ರದ ಬೆಳವಣಿಗೆಯ ನಾಯಕತ್ವವಹಿಸುವಂತಹ ಎಲ್ಲಾ ಅರ್ಹತೆಗಳನ್ನು ಹೊಂದಿದೆ. ಈ ಸಂಸ್ಥೆಯ ಅಭಿವೃದ್ದಿಗೆ ರಾಜ್ಯ ಸರ್ಕಾರ ಅಗತ್ಯ ಸಹಾಯ ಸಹಕಾರ ನೀಡಲು ಸಿದ್ದವಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.
ರಾಯಚೂರ ಸಂಸದರಾದ ಜಿ ಕುಮಾರ ನಾಯ್ಕ್, ಕೆಸ್ಟೆಪ್ಸ್ ನಿರ್ದೇಶಕರಾದ ಸದಾಶಿವ ಪ್ರಭು, ಐಐಎಸ್ ಸಿ ನಿರ್ದೇಶಕರಾದ ರಂಗರಾಜನ್, ಪ್ರೊ. ಅಕ್ಷಯ ನಾಯಕ್ ಹಾಗೂ ಐಐಎಸ್ ಸಿ ಸಿಬ್ಬಂದಿವರ್ಗ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.