ಬೆಂಗಳೂರು: ರಾಜ್ಯದಲ್ಲಿ ವ್ಯಾಪಾರಕ್ಕೆ ಕುಳಿತ ಕಾಂಗ್ರೆಸ್ ಸರಕಾರದ ಸಂತೆ ನಡೆಯುತ್ತಿದೆ ಎಂದು ರಾಜ್ಯ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದ್ದಾರೆ.
ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದು ಸೇವೆಗಾಗಿ ಬಂದ ಕಾಂಗ್ರೆಸ್ ಅಲ್ಲ; ಇದು ವ್ಯಾಪಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಎಂದು ಟೀಕಿಸಿದರು. ಚುನಾವಣೆ ವೇಳೆ ಪೇ ಸಿ.ಎಂ., ಶೇ 40 ಪರ್ಸೆಂಟ್ ಸರಕಾರ ಎಂದು ನಮ್ಮ ಮೇಲೆ ಆರೋಪ ಮಾಡಿದ್ದರು ಎಂದು ವಿವರಿಸಿದರು.
ಈಗ ನಿಮ್ಮ ಮೇಲೆ ಜನರು ಛೀ ಥೂ ಎಂಬಂತೆ ಆರೋಪ ಮಾಡುತ್ತಿದ್ದಾರೆ. ಸಚಿವರ ಬದಲಾಗಿ ಈ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ರಾಜೀನಾಮೆ ಕೊಟ್ಟು ತೊಲಗಿದರೆ ಬಹುಶಃ ಸ್ವಲ್ಪ ಮಟ್ಟಿನ ಬದಲಾವಣೆಗಳನ್ನು ಕಾಣಬಹುದು ಎಂದು ನುಡಿದರು. ಬಿಹಾರ ಚುನಾವಣೆ ಬೇರೆ ಬರುತ್ತಿದೆ; ಇವರು ಲೂಟಿಗೆ ನಿಂತಿದ್ದಾರೆ ಎಂದು ವಿಶ್ಲೇಷಿಸಿದರು.
ಇದೊಂದು ಭ್ರಷ್ಟ ವ್ಯವಸ್ಥೆ ಎಂದು ಟೀಕಿಸಿದರು. ಪ್ರತಿಯೊಬ್ಬರೂ ಭ್ರಷ್ಟಾಚಾರದಲ್ಲೇ ಮುಳುಗಿದ್ದಾರೆ ಎಂದು ದೂರಿದರು. ಸಿದ್ದರಾಮಯ್ಯನವರೇ, ನೀವು ಅತಿ ದೊಡ್ಡ ಭ್ರಷ್ಟ ಎಂದು ಜನರು ಮಾತನಾಡುತ್ತಿದ್ದಾರೆ. ಆದ್ದರಿಂದ, ನಿಮಗೆ ಉತ್ತಮ ವ್ಯವಸ್ಥೆ ಬಗ್ಗೆ ಗೌರವ ಇದ್ದರೆ ಮತ್ತು ಮಾನ, ಮರ್ಯಾದೆ ಕಿಂಚಿತ್ತಾದರೂ ಉಳಿದಿದ್ದರೆ, ತಕ್ಷಣ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಬಾಯಿ ಮುಚ್ಚಿಸುವ ಕೆಲಸ…
ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ಬಾಯಿ ಬಿಟ್ಟವರ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದರು.
ಜಮೀರ್ ಅಹ್ಮದ್ ರಾಜೀನಾಮೆ ಕೊಡಲಿ ಎಂದು ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ. ಗ್ಯಾರಂಟಿಗಳಿಂದ ಸರ್ವನಾಶ ಆಗುತ್ತಿದೆ ಎಂದು ದೇಶಪಾಂಡೆಯವರು ಹೇಳಿದ್ದಾರೆ. ಇದೊಂದು ಲೂಟಿಕೋರ ಸರಕಾರ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸಿದ್ದರಾಮಯ್ಯನವರ ಸರಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ. ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್ 1 ಎಂದು ಕಾಂಗ್ರೆಸ್ ಶಾಸಕ ಮತ್ತು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ರಾಯರೆಡ್ಡಿಯವರು ಹೇಳಿದ್ದರು. ರಾಜು ಕಾಗೆಯವರು ಸಂಪೂರ್ಣ ಭ್ರಷ್ಟತೆ, ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಇದೆ ಎಂದಿದ್ದಾರೆ. ಬಿಡುಗಡೆ ಮಾಡಿದ ಅನುದಾನ ಬರುತ್ತಿಲ್ಲ ಎಂದಿದ್ದಾರೆ ಎಂದು ಗಮನ ಸೆಳೆದರು.
ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಬಿ.ಆರ್.ಪಾಟೀಲ್ ಅವರು 2 ಸಾವಿರ ಮನೆ ಕೇಳಿದ್ದೆ. ಕೊಟ್ಟ 950 ಮನೆಗಳಲ್ಲಿ ಒಂದನ್ನೂ ನಾನು ಶಿಫಾರಸು ಮಾಡಿದವರಿಗೆ ಕೊಟ್ಟಿಲ್ಲ; ನನ್ನ ಪತ್ರ ಪಡೆದವರು ದುಡ್ಡು ಕೊಟ್ಟು ಮನೆ ಮಂಜೂರು ಮಾಡಿಸಿಕೊಂಡಿದ್ದಾಗಿ ತಿಳಿಸಿದ್ದಾರೆ ಎಂದು ವಿವರಿಸಿದರು. ಅಫಜಲಪುರದಲ್ಲೂ ಇದೇ ಸ್ಥಿತಿ ಇದೆ ಎಂದರು.
ಸರಕಾರದ ಆಯುಸ್ಸು ಕಡಿಮೆ ಆಗುತ್ತಿದೆ…
ರಾಜ್ಯ ಸರಕಾರದ್ದು ಒಂದು ಹಗರಣವಾದರೆ ಅದರ ಅಂತ್ಯ ನೋಡಬಹುದು; ಕಾಂಗ್ರೆಸ್ಸಿನದು ಅತಿ ಭ್ರಷ್ಟ ಸರಕಾರ. ಇವರು ದಿನಕ್ಕೆ ಎರಡು- ಮೂರು ಹಗರಣ ಕೊಡುತ್ತ ಇರುತ್ತಾರೆ. ವಿಪಕ್ಷಗಳು ಹೇಳುವುದರ ಜೊತೆಗೆ ಕಾಂಗ್ರೆಸ್ಸಿನವರೇ ಹಗರಣದ ಕುರಿತು ಹೇಳಲು ಪ್ರಾರಂಭಿಸಿದ್ದಾರೆ. ಈ ಸರಕಾರದ ಆಯುಸ್ಸು ಕಡಿಮೆ ಆಗುತ್ತಿದೆ ಎಂದು ನನಗೆ ಅನಿಸುತ್ತಿದೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.
ನಾವು ಪ್ರತಿನಿತ್ಯ ಉಸಿರುಕಟ್ಟಿ ಹೋರಾಟ ಮಾಡುತ್ತಿದ್ದೇವೆ. ಹಗರಣಗಳು ಬಹಳ ಇವೆ. ಜನರಿಗೂ ಇದು ಅರ್ಥ ಆಗಿದೆ. ಸರಕಾರ ಒಪ್ಪದೇ ಇದ್ದರೂ ನೂರಾರು ಹಗರಣಗಳು ಆಗಿವೆ. ಯಾವುದೇ ಸಂದರ್ಭದಲ್ಲಿ ಜನರು ದಂಗೆ ಏಳುವ ಪರಿಸ್ಥಿತಿ ಇವತ್ತು ಉದ್ಭವ ಆಗುತ್ತಿದೆ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು.
ರಾಜ್ಯದ ಜಿಲ್ಲಾ, ತಾಲ್ಲೂಕು ಆಸ್ಪತ್ರೆಗಳಲ್ಲಿ ‘ಯೋಗ ಮಂದಿರ’ ಸ್ಥಾಪನೆ: ಸಚಿವ ದಿನೇಶ್ ಗುಂಡೂರಾವ್
BREAKING : 2 ದಿನದಲ್ಲಿ ರಾಜೀನಾಮೆ ಕೊಡಬಹುದು: ಶಾಸಕ ರಾಜು ಕಾಗೆ ಎಚ್ಚರಿಕೆಗೆ CM ಸಿದ್ದರಾಮಯ್ಯ ಹೇಳಿದ್ದೇನು?