* ಅವಿನಾಶ್ ಆರ್ ಭೀಮಸಂದ್ರ
ನವದೆಹಲಿ: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಕನ್ನಡ ನಟರಾದ ದರ್ಶನ್, ಪವಿತ್ರಾ ಗೌಡ ಮತ್ತು ನಾಗರಾಜು ಆರ್., ಅನು ಕುಮಾರ್ @ ಅನು, ಲಕ್ಷ್ಮಣ್ ಎಂ, ಜಗದೀಶ್ @ ಜಗ್ಗ ಮತ್ತು ಪ್ರದೂಷ್ ಎಸ್ ರಾವ್ @ ಪ್ರದೂಷ್ ಆರೋಪಿಗಳಿಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ಇಂದು (ಆಗಸ್ಟ್ 13) ರದ್ದುಗೊಳಿಸಿದೆ.
ನಟ ದರ್ಶನ್ ಜಾಮೀನು ರದ್ದು ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ `ಇದ್ರೆ ಜೈಲಲ್ಲಿ ನೆಮ್ದಿಯಾಗ್ ಇರಬೇಕು’ ಎನ್ನುವ ಪೋಸ್ಟರ್ ವೊಂದು ವೈರಲ್ ಆಗಿದೆ.
ಹೌದು, ನಟ ದರ್ಶನ್ ನಟನೆಯ ಬಹುನಿರೀಕ್ಷಿತ ಡೆವಿಲ್ ಚಿತ್ರದ ಮೊದಲ ಹಾಡು `ಇದ್ರೆ ನೆಮ್ದಿಯಾಗ್ ಇರಬೇಕು’ ಎಂಬ ಹಾಡು ನಾಳೆ ಬಿಡುಗಡೆಯಾಗಲಿದೆ. ಈ ನಡುವೆ ಇಂದು ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ನಟ ದರ್ಶನ್ & ಗ್ಯಾಂಗ್ ನ ಜಾಮೀನು ರದ್ದು ಮಾಡಿದ್ದು, ಕೂಡಲೇ ಅರೆಸ್ಟ್ ಮಾಡುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ. ಈ ನಡುವೆ ನಟ ಜಾಮೀನು ರದ್ದು ಬೆನ್ನಲ್ಲೇ ಇದ್ರೆ ಜೈಲಲ್ಲಿ ನೆಮ್ದಿಯಾಗ್ ಇರಬೇಕು ಎಂಬ ಪೋಸ್ಟರ್ ವೈರಲ್ ಆಗುತ್ತಿದೆ
ಡಿಸೆಂಬರ್ 2024 ರಲ್ಲಿ ಹೈಕೋರ್ಟ್ ನೀಡಿದ ಜಾಮೀನು ಆದೇಶವನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿ, ನ್ಯಾಯಮೂರ್ತಿ ಜೆ ಬಿ ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್ ಮಹಾದೇವನ್ ಅವರನ್ನೊಳಗೊಂಡ ಪೀಠವು ಎಲ್ಲಾ ಏಳು ಆರೋಪಿಗಳಿಗೆ ನೀಡಿದ್ದ ಜಾಮೀನು ರದ್ದು ಮಾಡಿದೆ.
ಜೂನ್ 2024 ರಲ್ಲಿ ಚಿತ್ರದುರ್ಗದಿಂದ ಮೃತ ವ್ಯಕ್ತಿಯನ್ನು ಅಪಹರಿಸಿ ಬೆಂಗಳೂರಿನ ಶೆಡ್ನಲ್ಲಿ ಮೂರು ದಿನಗಳ ಕಾಲ ಚಿತ್ರಹಿಂಸೆ ನೀಡಿದ್ದರು ಎಂದು ದರ್ಶನ್ ವಿರುದ್ದ ಆರೋಪ ಕೇಳಿ ಬಂದಿದೆ. ದೌರ್ಜನ್ಯಕ್ಕೆ ಒಳಗಾಗಿ ಸಾವನ್ನಪ್ಪಿದ್ದು, ಪೊಲೀಸರ ವರದಿಯ ಪ್ರಕಾರ ಮೃತದೇಹವನ್ನು ಚರಂಡಿಗೆ ಎಸೆಯಲಾಗಿದೆ. ಸೆಷನ್ಸ್ ನ್ಯಾಯಾಲಯ ಜಾಮೀನು ತಿರಸ್ಕರಿಸಿದ ನಂತರ ಆರೋಪಿಗಳಾದ ದರ್ಶನ್, ಪವಿತ್ರ, ಅನು ಕುಮಾರ್, ಲಕ್ಷ್ಮಣ್ ಎಂ, ವಿ ವಿನಯ್, ಜಗದೀಶ್, ಪ್ರದೂಷ್ ಎಸ್ ರಾವ್ ಮತ್ತು ನಾಗರಾಜು ಆರ್ ಜಾಮೀನು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದರು.