ಬೆಂಗಳೂರು: ಡಿ.ಕೆ.ಶಿವಕುಮಾರ್ ಅವರು ಮಾಡಿದ ಅಪಮಾನವು ಮುನಿರತ್ನ ಅವರಿಗೆ ಮಾಡಿದ ಅಪಮಾನವಲ್ಲ; ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಮಾಡಿದ ಅಪಮಾನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ ಅವರು ವಿಶ್ಲೇಷಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರ ನೀಡಿದರು. ಬರುವಂಥ ದಿನದಲ್ಲಿ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಪಕ್ಷಕ್ಕೆ ಕರಿಟೋಪಿಯ ಬೆಲೆ ಏನೆಂದು ತೋರಿಸುತ್ತೇವೆ. ಒಬ್ಬ ಉಪ ಮುಖ್ಯಮಂತ್ರಿ, ಜವಾಬ್ದಾರಿಯುತ ಸಚಿವರಾಗಿ ಸಾರ್ವಜನಿಕ ಸ್ಥಳದಲ್ಲಿ ಹಾಗೂ ಒಬ್ಬ ಜನಪ್ರತಿನಿಧಿ ಬಗ್ಗೆ ಹೇಗೆ ನಡೆದುಕೊಳ್ಳಬೇಕು ಎಂಬ ಕನಿಷ್ಠ ಸೌಜನ್ಯವೂ ಡಿ.ಕೆ.ಶಿವಕುಮಾರ್ ಅವರಿಗೆ ಇಲ್ಲ ಎಂದು ಆಕ್ಷೇಪಿಸಿದರು.
ಅಧಿಕಾರ ಎಂಬುದು ಶಾಶ್ವತ ಅಲ್ಲ; ಡಿ.ಕೆ.ಶಿವಕುಮಾರ್ ಅವರ ಮಾತಿನ ನಡವಳಿಕೆ, ಮಾತಿನ ಧಾಟಿ, ಒಬ್ಬ ಚುನಾಯಿತ ಪ್ರತಿನಿಧಿಗೆ ಮಾಡಿದ ಅಪಮಾನದ ವಿರುದ್ಧ ಸಾರ್ವಜನಿಕರು ಮಾತನಾಡುತ್ತಿದ್ದಾರೆ ಎಂದು ನುಡಿದರು. ಈಚೆಗೆ ಮೈಸೂರಿನಲ್ಲಿ ಮುಖ್ಯಮಂತ್ರಿಗಳ ಶಕ್ತಿ ಪ್ರದರ್ಶನ ಏರ್ಪಡಿಸಲಾಗಿತ್ತು. ಡಿ.ಕೆ.ಶಿವಕುಮಾರ್ ಅವರು ಹೇಳದೇ ಕೇಳದೇ ಸಿಡಿದು, ದೆಹಲಿಗೆ ದೌಡಾಯಿಸಿದ್ದನ್ನು ತಾವೇ ವರದಿ ಮಾಡಿದ್ದೀರಿ. ಮತ್ತೊಂದು ಕಡೆ ಸಿದ್ದರಾಮಯ್ಯನವರು ಕ್ಯಾಬಿನೆಟ್ ವಿಸ್ತರಣೆಯ ದಾಳ ಬಿಟ್ಟಿದ್ದಾರೆ. ತಾವು ಮುಖ್ಯಮಂತ್ರಿ ಆಗಬೇಕೆಂಬ ಪ್ರಯತ್ನ ಡಿ.ಕೆ.ಶಿವಕುಮಾರ್ ಅವರದು ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.
ಔತಣ ಕೂಟದಲ್ಲಿ ರೈತರ ಸಮಸ್ಯೆ ಚರ್ಚೆ ಮಾಡುತ್ತಾರಾ..
ಮುಖ್ಯಮಂತ್ರಿಗಳು ಔತಣ ಕೂಟ ಕರೆದಿದ್ದಾರೆ. ಔತಣ ಕೂಟದಲ್ಲಿ ರಾಜ್ಯದ ರೈತರ ಸಮಸ್ಯೆ ಬಗ್ಗೆ ಚರ್ಚೆ ಮಾಡುತ್ತಾರಾ ಎಂದು ಎಂದು ವಿಜಯೇಂದ್ರ ಅವರು ಕೇಳಿದರು.
ರೈತರು ತೀವ್ರ ಅತಿವೃಷ್ಟಿಯಿಂದ ಅತ್ಯಂತ ಸಂಕಷ್ಟದಲ್ಲಿದ್ದಾರೆ. ಯಾದಗಿರಿ, ಗುಲ್ಬರ್ಗ ಜಿಲ್ಲೆಗಳ ರೈತರ ತೊಗರಿ ಮತ್ತಿತರ ಬೆಳೆ ಸುಮಾರು ಶೇ 70ರಿಂದ 90ರಷ್ಟು ನಾಶವಾಗಿದೆ. ಮನೆ ಕಳಕೊಂಡವರು ಕಾಳಜಿ ಕೇಂದ್ರದಲ್ಲಿ ಮಕ್ಕಳೊಂದಿಗೆ ಪರದಾಡುತ್ತಿದ್ದಾರೆ. ಅವರಿಗೆ ಶಾಶ್ವತ ನೆಲೆ ಸಿಕ್ಕಿಲ್ಲ; ಬಿಜೆಪಿ ಸರಕಾರದಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ಕೊಪ್ಪಳ, ರಾಯಚೂರು ಮತ್ತಿತರ ಜಿಲ್ಲೆಗಳಲ್ಲಿ ಶಾಶ್ವತವಾಗಿ ಸೂರು ಕಲ್ಪಿಸಿ ಕೊಡುವ ಕೆಲಸ ಆಗಿದೆ. ಸ್ವತಃ ಪ್ರಿಯಾಂಕ್ ಖರ್ಗೆಯವರು ತೆರಳಿದ್ದಾಗ ಆ ಕ್ಷೇತ್ರದ ಮತದಾರರೇ ಶಾಶ್ವತ ಸೂರು ಕೊಡಿ ಎಂದು ಅವರನ್ನು ಕೇಳಿದ್ದಾರೆ. ನಿಮ್ಮ ಕೃಷಿ ಸಚಿವರು, ಕಂದಾಯ ಸಚಿವರು ಬೆಂಗಳೂರಿನಲ್ಲಿ ಮೋಜು ಮಸ್ತಿ ಮಾಡಿಕೊಂಡು ಸಭೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
30 ಲಕ್ಷ ಹೆಕ್ಟೇರಿನಷ್ಟು ಬೆಳೆ ಸಂಪೂರ್ಣ ನಾಶ
ರಾಜ್ಯದಲ್ಲಿ ಸುಮಾರು 10 ಲಕ್ಷ ಹೆಕ್ಟೇರ್ ಬೆಳೆ ಸಂಪೂರ್ಣ ನಾಶವಾಗಿದೆ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ರಾಜ್ಯದಲ್ಲಿ 10 ಲಕ್ಷ ಹೆಕ್ಟೇರ್ ಅಲ್ಲ; ಗುಲ್ಬರ್ಗ ಜಿಲ್ಲೆಯಲ್ಲೇ ಆರರಿಂದ ಆರೂವರೆ ಲಕ್ಷ ಹೆಕ್ಟೇರ್ ನಷ್ಟು ಬೆಳೆ ಸಂಪೂರ್ಣ ನಾಶವಾಗಿದೆ; ತಪ್ಪು ಅಂಕಿಅಂಶ ಹೇಳುತ್ತಿದ್ದೀರಿ. ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದಲ್ಲಿ ಕನಿಷ್ಠ 25- 30 ಲಕ್ಷ ಹೆಕ್ಟೇರಿನಷ್ಟು ರೈತರ ಬೆಳೆ ಸಂಪೂರ್ಣ ನಾಶವಾಗಿದೆ. ಬಡ ರೈತರು ಮನೆ ಕಳಕೊಂಡಿದ್ದಾರೆ ಎಂದು ಗಮನ ಸೆಳೆದರು.
ಮುಖ್ಯಮಂತ್ರಿಗಳು ವೈಮಾನಿಕ ಸಮೀಕ್ಷೆ ಮಾಡಿ ಘೋಷಣೆ ಮಾಡಿದರೆ ರೈತರ ಹೊಟ್ಟೆ ತುಂಬುವುದೇ? ಸರ್ವೇ ಮಾಡುವುದು ಯಾವಾಗ? ಪರಿಹಾರ ಕೊಡುವುದು ಯಾವಾಗ ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿಗಳು ಇಲಾಖಾ ಅಧಿಕಾರಿಗಳನ್ನೂ ಕಳುಹಿಸಿ ಕೊಡುತ್ತಿಲ್ಲ ಎಂದು ಟೀಕಿಸಿದರು.
ಮೊದಲು ಈಗಾಗಲೇ ಘೋಷಿಸಿದ ಪರಿಹಾರ ಕೊಡಿ; ಹಿಂದೆ ಯಡಿಯೂರಪ್ಪ, ಬೊಮ್ಮಾಯಿಯವರ ನೇತೃತ್ವದ ಬಿಜೆಪಿ ಸರಕಾರ ಇದ್ದಾಗ ಯಾವ ರೀತಿ ಪರಿಹಾರ ಕೊಟ್ಟಿದ್ದರು ಎಂದು ತಿಳಿಸಿದ ಅವರು, ಯಡಿಯೂರಪ್ಪನವರು ಸಚಿವ ಸಂಪುಟ ವಿಸ್ತರಣೆ ಆಗದೇ ಏಕಾಂಗಿ ಆಗಿದ್ದರೂ ಬೆಳಗಾವಿ, ರಾಯಚೂರು, ಕೊಪ್ಪಳ- ಎಲ್ಲ ಜಿಲ್ಲೆಗಳಿಗೂ ಹೋಗಿ ರೈತರ ಸಮಸ್ಯೆಗೆ ಸ್ಪಂದಿಸಿದ್ದರು. ಶಾಶ್ವತ ನೆಲೆ ಕಲ್ಪಿಸುವ ಕೆಲಸ ಮಾಡಿದ್ದರು ಎಂದು ವಿವರಿಸಿದರು.
ನಮ್ಮ ಸರಕಾರ ಇದ್ದಾಗ ರೈತ ಗೀತೆ ಘೋಷಿಸಿ ಸರಕಾರಿ ಆದೇಶ ಆಗಿತ್ತು. ಕಾಂಗ್ರೆಸ್ ಸರಕಾರವು ಬೊಮ್ಮಾಯಿಯವರು ನೀಡಿದ ರೈತ ವಿದ್ಯಾನಿಧಿಯನ್ನೂ ನಿಲ್ಲಿಸಿದೆ; ರೈತಗೀತೆಯನ್ನೂ ನಿಲ್ಲಿಸಿದ್ದಾರೆ ಎಂದು ಟೀಕಿಸಿದರು. ಕಾಂಗ್ರೆಸ್ ಸರಕಾರ ಮತ್ತು ಮುಖ್ಯಮಂತ್ರಿಗಳಿಗೆ ರೈತರ ಬಗೆಗಿನ ಬದ್ಧತೆ ಇವತ್ತು ಜಗಜ್ಜಾಹೀರಾಗಿದೆ ಎಂದು ಆರೋಪಿಸಿದರು.
ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟ ಅವರು, ಜಿಬಿಎ ಸಭೆಯ ಕಾರ್ಯಸೂಚಿಯನ್ನೇ ಶಾಸಕರಿಗೆ ಕಳುಹಿಸಿರಲಿಲ್ಲ; ಬೆಂಗಳೂರು ನಗರದಲ್ಲಿ ಏನು ಕಡಿದು ಕಟ್ಟೆ ಹಾಕಿದ್ದಾರೆ? ರಾಜ್ಯದಲ್ಲಿ ಕಳೆದೆರಡು ವರ್ಷದಲ್ಲಿ ಯಾವ ಅಭಿವೃದ್ಧಿ ಯೋಜನೆ ಘೋಷಿಸಿದ್ದಾರೆ ಎಂದು ಕೇಳಿದರು.
BREAKING: ಬೆಂಗಳೂರಲ್ಲಿ ಕ್ರೇನ್ ಟವರ್ ಬಿದ್ದು ಐವರಿಗೆ ಗಾಯ, ಓರ್ವನ ಸ್ಥಿತಿ ಗಂಭೀರ
BIG NEWS: ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರಿಗೆ ‘ಸಚಿವ ಸ್ಥಾನ’ ಫಿಕ್ಸ್!? | Karnataka Cabinet Expansion