ಶಿವಮೊಗ್ಗ: ಸಿಎಂ ಸಿದ್ದರಾಮಯ್ಯ ವಿರುದ್ಧದ ಮೂಡಾ ಪ್ರಕರಣದಲ್ಲಿ 14 ನಿವೇಶನಗಳನ್ನು ಹಿಂತಿರುಗಿಸುವಂತಾಗಿದ್ದು ಬಿಜೆಪಿಯ ಹೋರಾಟದ ಫಲ. ವಾಲ್ಮೀಕಿ ನಿಗರಮದ ಹಗರಣದಲ್ಲಿ ಸಚಿವರು ರಾಜೀನಾಮೆ ಕೊಡುವಂತಾಗಿದ್ದು ನನ್ನ ಅಧ್ಯಕ್ಷತೆಯಲ್ಲಿ ಬಿಜೆಪಿ ನಡೆಸಿದ ತಾರ್ಕೀಕ ಅಂತ್ಯದ ಹೋರಾಟವೇ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.
ಇಂದು ಶಿವಮೊಗ್ಗದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು ಉತ್ತರ ಕನ್ನಡ ಜಿಲ್ಲೆಯ ಬಿಜೆಪಿ ಪ್ರಮುಖರ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ ಅವರು, ಬಿಜೆಪಿಯ ಕಾರ್ಯಕರ್ತರಿಗೆ ಸ್ಪಷ್ಟವಾದ ಉದ್ದೇಶ, ಗುರಿ ಇದೆ. ಪಕ್ಷದ ಅನೇಕ ಹಿರಿಯರು, ಸಾವಿರಾರು ಕಾರ್ಯಕರ್ತರು ಬದ್ದತೆಯಿಂದ ಪಕ್ಷಕ್ಕಾಗಿ ದುಡಿದಿದ್ದಾರೆ. ಇದರ ಫಲವಾಗಿ ದೇಶದಲ್ಲಿ ಮತ್ತು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿದು ಜನರ ಸೇವೆಯನ್ನು ಮಾಡುತ್ತಿದೆ. ಆದರೆ ಕಾಂಗ್ರೇಸ್ ಪಕ್ಷ ಅನುಕಂಪ ಮತ್ತು ಇತರೆ ಕಾರಣಗಳಿಂದ 67 ವರ್ಷ ದೇಶವನ್ನು ಆಳಿದೆ. ಇತರೆ ರಾಷ್ಟ್ರೀಯ ಪಕ್ಷಕ್ಕೂ ಬಿಜೆಪಿಗೂ ಇರುವ ವ್ಯತ್ಯಾಸವೆಂದರೆ ಬಿಜೆಪಿ ಕಾರ್ಯಕರ್ತರಿಗೆ ರಾಷ್ಟ್ರೀಯತೆ ಮತ್ತು ರಾಷ್ಡ್ರೀಯ ವಿಷಯದ ಬಗ್ಗೆ ಬದ್ಧತೆಯಿದೆ ಇತರೆ ಪಕ್ಷಗಳಿಗೆ ಅಂತಹ ಯಾವ ಬದ್ದತೆ, ಗುರಿ ಇಲ್ಲ ಎಂದರು.
ರಾಜ್ಯದಲ್ಲಿ ಅಭಿವೃದ್ದಿ ಕೆಲಸಗಳು ನಡೆಯುತ್ತಿಲ್ಲ. ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜರಾಯರೆಡ್ಡಿ ಅವರೇ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕೆಂಬ ಹೇಳಿಕೆ ಇದಕ್ಕೆ ಸಾಕ್ಷಿ. ಅಭಿವೃದ್ದಿ, ಅನುದಾನಗಳ ಕುರಿತು ಕಾಂಗ್ರೆಸ್ ನ ಶಾಸಕರುಗಳ ಹೇಳಿಕೆಗಳೇ ಸರ್ಕಾರ ದುಃಸ್ಥಿತಿಯನ್ನು ಸಾರುತ್ತಿವೆ. ಸಿದ್ದರಾಮಯ್ಯ ಅವರು ಲಾಟರಿ ಮುಖ್ಯಮಂತ್ರಿಯಾಗಿದ್ದಾರೆ ಎಂದು ಮತ್ತೋರ್ವ ಶಾಸಕರು ಹೇಳುತ್ತಾರೆ ಎಂದು ಲೇವಡಿ ಮಾಡಿದ ವಿಜಯೇಂದ್ರ ರಾಜ್ಯದ ಜನರಿಗೆ ಗ್ಯಾರೆಂಟಿ ಎಂದು ಮಂಕುಬೂದಿ ಎರಚಲಾಗಿದೆ. ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯುತ್ತಾರೋ ಇಲ್ಲವೋ ಗೊತ್ತಿಲ್ಲ ಆದರೆ ನಮ್ಮ ಜಿಲ್ಲೆಯ ಸಚಿವರಿಗೂ ಭಯವಿದೆ. ಅವರು ಮತ್ತೊಂದು ಕ್ಯಾಬಿನೆಟ್ನಲ್ಲಿ ಸಚಿವರಾಗಿ ಮುಂದುವರೆಯುವ ಬಗ್ಗೆ ಅನುಮಾನವಾಗಿದೆ ಎಂದು ಜಿಲ್ಲಾ ಸಚಿವ ಮಧುಬಂಗಾರಪ್ಪ ಅವರನ್ನು ಪರೋಕ್ಷವಾಗಿ ಟೀಕಿಸಿದರು.
ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇದರ ಬಂಡವಾಳ ಬಯಲು ಮಾಡಬೇಕು. ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ಸರ್ಕಾರ ಸಕಾರಾತ್ಮಕ ಅಂಶಗಳು, ಅಭಿವೃದ್ದಿಯ ಆಧಾರದ ಮೇಲೆ ಅಧಿಕಾರಕ್ಕೆ ಬಂದಿದೆ. ಮೋದಿ ಅವರ ಯೋಜನೆಗಳನ್ನು ಮನೆ ಮನೆಗೆ ತಲುಪಿಸಬೇಕು. ಪ್ರತಿಯೊಬ್ಬ ಕಾರ್ಯಕರ್ತರೂ ಮೋದಿ ಅವರ ರಾಯಭಾರಿಯಂತೆ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಈ ಸಭೆಯಲ್ಲಿ ಸಂಸದ ಬಿ.ವೈ ರಾಘವೇಂದ್ರ, ಶಾಸಕ ಚನ್ನಬಸಪ್ಪ, ಮಾಜಿ ಸಚಿವ ಹರತಾಳು ಹಾಲಪ್ಪ, ವಿಧಾನಪರಿಷತ್ ಸದಸ್ಯರಾದ ಡಾ ಧನಂಜಯ ಸರ್ಜಿ, ಮಾಜಿ ಎಂ.ಎಲ್ ಸಿ ಎಸ್ ರುದ್ರೇಗೌಡ, ಡಿ.ಟಿ ಮೇಘರಾಜ್ ಸೇರಿದಂತೆ ವಿವಿಧ ಜಿಲ್ಲೆಗಳ ಬಿಜೆಪಿ ಪ್ರಮುಖರು ಭಾಗವಹಿಸಿದ್ದರು.