ಚಿತ್ರದುರ್ಗ : ಕುರಿ ಕಾಯುತ್ತಿದ್ದ ನನ್ನನ್ನು ರಾಜಪ್ಪ ಮೇಸ್ಟ್ರು ಶಾಲೆಗೆ ಸೇರಿಸಿದ್ದಕ್ಕೆ ನಾನು ಇಂದು ಮುಖ್ಯಮಂತ್ರಿ ಆಗಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಚಿತ್ರದುರ್ಗದಲ್ಲಿ ಆಯೋಜಿಸಿದ್ದ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವೇಳೆ ಶೇ.98 ರಷ್ಟು ಅಂಕ ಪಡೆದು ರಾಜ್ಯಕ್ಕೆ 8ನೇ ರ್ಯಾಂಕ್ ಗಳಿಸಿದ ಪಿಯುಸಿ ವಿದ್ಯಾರ್ಥಿನಿಯೊಬ್ಬರಿಗೆ ಐ.ಎ.ಎಸ್ ಮಾಡುವಂತೆ ಸಲಹೆ ನೀಡಿ, ಆಕೆಯ ಐಎಎಸ್ ಪರೀಕ್ಷಾ ಸಿದ್ಧತೆಗೆ ಬೇಕಾದ ಎಲ್ಲಾ ಸಹಾಯವನ್ನು ನಾನು ಮಾಡುತ್ತೇನೆಂದು ಮಾತು ಕೊಟ್ಟಿದ್ದೇನೆ ಎಂದರು.
ಶೋಷಿತ ಸಮುದಾಯದ ಮಕ್ಕಳು ಬದುಕಿನ ಸವಾಲುಗಳನ್ನು ಮೆಟ್ಟಿನಿಂತು ಶೈಕ್ಷಣಿಕ ಸಾಧನೆ ಮಾಡುವುದನ್ನು ಕಂಡಾಗ ನನ್ನ ಬಾಲ್ಯದ ದಿನಗಳು ನೆನಪಾಗುತ್ತದೆ. ಕುರಿ ಕಾಯುತ್ತಿದ್ದ ನನ್ನನ್ನು ಶಾಲೆಗೆ ಸೇರಿಸಿಕೊಂಡಿದ್ದರಿಂದ ಇಲ್ಲಿಗೆ ಬಂದು ಮುಟ್ಟಿದ್ದೇನೆ. ಇಂದು ನಾನು ರಾಜಪ್ಪ ಮೇಸ್ಟ್ರನ್ನು ನೆನೆದಂತೆ ಈ ಹೆಣ್ಣುಮಗು ಐಎಎಸ್ ಪಾಸಾಗಿ ಉನ್ನತ ಹುದ್ದೆಗೇರಿದರೆ ನನ್ನನ್ನು ನೆನೆದು, ಆಕೆಯೂ ನಾಲ್ಕಾರು ಮಕ್ಕಳಿಗೆ ನೆರವಾಗಬಹುದು. ನಾನು ರಾಜಪ್ಪ ಮೇಸ್ಟ್ರ ಹಾಗೆ ಪಾಠ ಮಾಡುವ ಗುರುವಾಗಲಿಲ್ಲ, ಆದರೆ ಬದುಕಿನ ದಾರಿ ತೋರುವ ಗುರುವಾಗುವ ಪ್ರಯತ್ನವಿದು ಎಂದು ಹೇಳಿದ್ದಾರೆ.