ಬೆಂಗಳೂರು: ನಗರದ ಫ್ರೀಂಡಂ ಪಾರ್ಕ್ ನಲ್ಲಿ “ಮತಗಳ್ಳತನ”ದ ವಿರುದ್ದ ನಡೆದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಲೋಕಸಭಾ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರ ಮಾತಿನ ಹೈಲೈಟ್ಸ್ ಮುಂದೆ ಓದಿ.
ಪವಿತ್ರವಾದ ಗ್ರಂಥ ಸಂವಿಧಾನದಲ್ಲಿ ಭಾರತದ ಸಾವಿರಾರು ವರ್ಷಗಳ ಇತಿಹಾಸ ಅಡಗಿದೆ. ಇದರಲ್ಲಿ ಮಹಾತ್ಮ ಗಾಂಧಿ, ಅಂಬೇಡ್ಕರ್, ನೆಹರು, ಸರ್ದಾರ್ ಪಟೇಲ್ ಅವರ ಧ್ವನಿ ಇದರಲ್ಲಿದೆ. ಸಂವಿಧಾನದಲ್ಲಿ ಬಸವಣ್ಣ, ನಾರಾಯಣಗುರುಗಳ, ಜ್ಯೋತಿಬಾ ಫುಲೆ ಅವರ ದನಿ ಇದರಿಂದ ಕೇಳಿಬರುತ್ತದೆ.
ಸಂವಿಧಾನದ ಮೂಲ ಅಡಿಪಾಯ ಎಂದರೆ ಒಬ್ಬ ವ್ಯಕ್ತಿ, ಒಂದು ಮತ ಎಂಬುದು. ಈ ಪವಿತ್ರ ಗ್ರಂಥದ ಮುಖಾಂತರ ಒಂದು ಮತದ ಹಕ್ಕನ್ನು ನೀಡಲಾಗಿದೆ. ಕಳೆದ ಚುನಾವಣೆ ವೇಳ ಬಿಜೆಪಿಯ ಮುಖಂಡರು, ನರೇಂದ್ರ ಮೋದಿ ಅವರು, ಕಾರ್ಯಕರ್ತರು ಪವಿತ್ರ ಸಂವಿಧಾನದ ಮೇಲೆ ದಾಳಿ ಮಾಡಿದರು. ಭಾರತದ ಅಸ್ಮಿತೆಯನ್ನೇ ನಾಶ ಮಾಡಲು ಹೊರಟರು. ಲೋಕಸಭಾ ಚುನಾವಣೆ ನಂತರ ಹಾಗೂ ಮಹಾರಾಷ್ಟ್ರ ಚುನಾವಣೆ ನಂತರ ನಮ್ಮ ಮುಂದೆ ಒಂದು ಪ್ರಶ್ನೆ ಉದ್ಬವಿಸಿತು. ಲೋಕಸಭೆ ಚುನಾವಣೆಯಲ್ಲಿ ನಮ್ಮ ಮೈತ್ರಿಯು ಅಭುತಪೂರ್ವ ಯಶಸ್ಸು ಗಳಿಸಿತ್ತು. ಇದಾಗಿ ನಾಲ್ಕು ತಿಂಗಳ ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿತು. ಇದರಿಂದ ನಮಗೆ ಆಶ್ಚರ್ಯ ಉಂಟಾಯಿತು. ಈ ವೇಳೆ ನಾವು ಅಕ್ರಮವನ್ನು ಪತ್ತೆ ಹಚ್ಚಿದೆವು. ಸುಮಾರು 1 ಕೋಟಿಗೂ ಅಧಿಕ ಮತದಾರರು ಹೊಸದಾಗಿ ಮತ ಹಾಕಿದ್ದರು. ಇವರುಗಳು ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿರಲಿಲ್ಲ.
ನಮ್ಮ ಮೈತ್ರಿಯ ಮತಗಳು ಒಂದುಚೂರು ಕಡಿಮೆಯಾಗಿರಲಿಲ್ಲ. ಲೋಕಸಭಾ ಚುನಾವಣೆಯಲ್ಲಿ ನಾವು ಎಷ್ಟು ಮತ ಪಡೆದಿದ್ದೆವೋ ವಿಧಾನಸಭೆಯಲ್ಲೂ ಅಷ್ಟೇ ಮತಗಳನ್ನು ಪಡೆದಿದ್ದೆವು. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಹೊಸದಾಗಿ ಮತದಾರರ ಪಟ್ಟಿಗೆ ಸೇರಿದ ಮತಗಳೆಲ್ಲವೂ ಬಿಜೆಪಿ ತೆಕ್ಕೆ ಸೇರಿದ್ದವು.
ಇಲ್ಲಿ ಏನೋ ಗೋಲ್ ಮಾಲ್ ನಡೆಯುತ್ತಿದೆ ಇದನ್ನು ಹೊರಗೆಡವಬೇಕು ಎಂದು ಅಂದು ನಾವು ತೀರ್ಮಾನ ಮಾಡಿದೆವು. ಕರ್ನಾಟಕದಲ್ಲಿ ನಾವು ನಡೆಸಿದ ಆಂತರಿಕ ಸಮೀಕ್ಷೆ ವೇಳೆ 15-16 ಲೋಕಸಭಾ ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಅಂದಾಜಿಸಿದ್ದೆವು. ನಮ್ಮ ಸಮೀಕ್ಷೆ ಸ್ಪಷ್ಟವಾಗಿತ್ತು. ಆದರೆ ಫಲಿತಾಂಶ ಹೊರ ಬಂದಾಗ ನಾವು ಗೆದ್ದಿದ್ದು ಕೇವಲ 9 ಸ್ಥಾನಗಳು ಮಾತ್ರ. ಆಗ ಗೊತ್ತಾಯಿತು ನಾವು ಸೋಲಲು ಇಂತಹ ಅಕ್ರಮಗಳೇ ಕಾರಣ ಎಂದು.
ಚುನಾವಣಾ ಆಯೋಗದ ಬಳಿ ಮತದಾರರ ಪಟ್ಟಿಯನ್ನು ಡಿಜಿಟಲ್ ರೂಪದಲ್ಲಿ ನೀಡಿ ಎಂದು ಚುನಾವಣಾ ಆಯೋಗದ ಬಳಿ ಪದೇ, ಪದೇ ಮನವಿ ಮಾಡುತ್ತಿದ್ದೆವು. ಕೊನೆಗೆ ಕಾನೂನನ್ನೇ ಬದಲಾವಣೆ ಮಾಡಿಬಿಟ್ಟರು. ಮತಗಟ್ಟೆಯಲ್ಲಿ ಮಾಡಿದ್ದ ಚಿತ್ರೀಕರಣದ ವಿಡಿಯೋಗಳನ್ನು 45 ದಿನಗಳಲ್ಲಿ ಅಳಿಸುವ ಕೆಲಸ ಮಾಡಿದೆ ಚುನಾವಣಾ ಆಯೋಗ.
ಈ ಎಲ್ಲಾ ಬೆಳವಣಿಗೆಗಳು ಆದ ನಂತರ ನಾವು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರವನ್ನು ಪರಾಮರ್ಶನೆ ಮಾಡಲು ತೊಡಗಿದೆವು. ಈ ಕ್ಷೇತ್ರ ವ್ಯಾಪ್ತಿಗೆ ಬರುವ ಮಹದೇವಪುರ ವಿಧಾನಸಭಾ ಕ್ಷೇತ್ರದ ಫಲಿತಾಂಶವನ್ನು ಸಮೀಕ್ಷೆ ಮಾಡಿ ನೋಡಿದಾಗ ಅಲ್ಲಿ ನಡೆದಿರುವ ಅಕ್ರಮಗಳನ್ನು ನಿಮ್ಮ ಮುಂದೆ ಗುರುವಾದಂದು ಇಟ್ಟಿದ್ದೇನೆ. ಇಲ್ಲಿ ಶೇ.100 ರಷ್ಟು ಅಕ್ರಮ ನಡೆದಿದೆ ಎಂದು ವಿಶ್ವಾಸದಿಂದ ಹೇಳುತ್ತೇನೆ. ಚುನಾವಣಾ ಆಯೋಗ ಬಿಜೆಪಿಯ ಜೊತೆ ಸೇರಿ ಅಕ್ರಮವಾಗಿ ಗೆದ್ದಿದೆ.
ಮಹದೇವಪುರದಲ್ಲಿ ಸುಮಾರು 6.5 ಲಕ್ಷ ಮತಗಳಿವೆ. ಇದರಲ್ಲಿ 1,00,250 ಮತಗಳನ್ನು ಕಳ್ಳತನ ಮಾಡಲಾಗಿದೆ. ಅಂದರೆ ಆರು ಮತಗಳಲ್ಲಿ ಒಂದು ಮತಗಳನ್ನು ಕದ್ದಿದ್ದಾರೆ. ಐದು ವಿಧಾನದಲ್ಲಿ ಮತಗಳ್ಳತನ ನಡೆದಿದೆ. ಒಬ್ಬ ಮತದಾರ 4 ಮತಗಟ್ಟೆಗಳಲ್ಲಿ ಮತ ಚಲಾಯಿಸಿದ್ದಾನೆ. ಈ ರೀತಿ ಸುಮಾರು 12 ಸಾವಿರ ಮತಗಳಿವೆ. ನಕಲಿ ವಿಳಾಸ ಹೊಂದಿರುವ ಮತದಾರರು 40,009 ಇದ್ದರೆ, ಒಂದೇ ವಿಳಾಸ ಹೊಂದಿರುವ 10,452 ಇದ್ದಾರೆ, ಗುರುತು ಹಿಡಿಯಲು ಸಾಧ್ಯವೇ ಇಲ್ಲದಂತ ಫೋಟೊಗಳನ್ನು ಹೊಂದಿರುವವರು 4,132 ಇದ್ದಾರೆ. ಸಣ್ಣ, ಸಣ್ಣ ಪೋಟೋಗಳನ್ನು ಹಾಕಿದ್ದಾರೆ. ಈ ಪೋಟೋಗಳು ಕಣ್ಣಿಗೆ ಕಾಣದಷ್ಟು ಚಿಕ್ಕದಾಗಿವೆ. ಒಂದು ಬೆಡ್ ರೂಮ್ ಇರುವ ಮನೆಯಲ್ಲಿ 50- 60 ಜನ ವಾಸ ಇದ್ದಾರೆ ಎಂದು ಹೇಳಲಾಗಿದೆ. ಆ ವಿಳಾಸಕ್ಕೆ ನಾವು ಹೋದಾಗ ಆ ಮನೆಯಲ್ಲಿ ಯಾರೋಬ್ಬರೂ ಇರಲಿಲ್ಲ. ಆ ಮನೆ ಯಾರದ್ದು ಎಂದು ಹುಡುಕಿದರೆ ಅದು ಬಿಜೆಪಿ ಮುಖಂಡನಿಗೆ ಸೇರಿದ ಮನೆಯಾಗಿತ್ತು. ನಕಲಿ ಮತದಾರದ ಚೀಟಿ ಹೊಂದಿರುವ ಮತದಾರ ಕರ್ನಾಟಕದಲ್ಲಿಯೂ ಮತ ಹಾಕಿ ನಂತರ ಉತ್ತರಪ್ರದೇಶ, ಮಹಾರಾಷ್ಟ್ರದಲ್ಲಿ ಮತ ಹಾಕಿದ್ದಾನೆ. ಬೆಂಗಳೂರು, ವಾರಣಾಸಿ, ಲಕ್ನೋ ಸೇರಿದಂತೆ ದೇಶದ ವಿವಿಧ ಭಾಗದಲ್ಲಿ ಮತ ಚಲಾಯಿಸುವ ಹಕ್ಕನ್ನು ನೀಡಿದ್ದಾರೆ.
ಚುನಾವಣಾ ಆಯೋಗ ನನ್ನ ಬಳಿಯಿಂದ ಈ ಎಲ್ಲಾ ಆರೋಪಗಳಿಗೆ ಪ್ರಮಾಣಪತ್ರ ಕೇಳುತ್ತಿದೆ. ನಾನು ಈ ಸಂವಿಧಾನ ಮೇಲೆ ನಮ್ಮ ಸಂಸತ್ತಿನಲ್ಲಿ ಪ್ರಮಾಣ ಮಾಡಿದ್ದೇನೆ ನಾನು ನುಡಿಯುವುದೆಲ್ಲವೂ ಸತ್ಯ ಎಂದು.
ನಾವು ಚುನಾವಣಾ ಆಯೋಗದ ಅಕ್ರಮಗಳನ್ನು ಹೊರಗರ ಹಾಕಿದ ನಂತರ ಈ ದೇಶದ ಜನರು ಆಯೋಗಕ್ಕೆ ವೆಬ್ ಸೈಟ್ ಮೂಲಕ ಪ್ರಶ್ನೆ ಮಾಡತೊಡಗಿದರು. ಆದರೆ ಈ ಆಯೋಗ ತನ್ನ ವೆಬ್ ಸೈಟನ್ನೇ ಬಂದ್ ಮಾಡಿಕೊಂಡು ಕುಳಿತಿದೆ. ಬೇರೆ, ಬೇರೆ ರಾಜ್ಯ ಸೇರಿದಂತೆ ಬಿಹಾರದ ಚುನಾವಣಾ ಆಯೋಗದ ವೆಬ್ ಸೈಟನ್ನೇ ಬಂದ್ ಮಾಡಲಾಗಿದೆ. ಚುನಾವಣಾ ಆಯೋಗದ ನಾಟಕ ಹೊರಗೆ ಬರುತ್ತದೆ, ಜನ ಪ್ರಶ್ನೆ ಮಾಡಲು ತೊಡಗುತ್ತಾರೆ ಎಂದು ಅವರಿಗೆ ಭಯ ಆವರಿಸಿದೆ.
ದೇಶದ ಪ್ರತಿಯೊಂದು ಮತದಾರರ ಪಟ್ಟಿಯನ್ನು ಡಿಜಿಟಲ್ ರೂಪದಲ್ಲಿ ನೀಡಬೇಕು, ವಿಡಿಯೋಗ್ರಫಿಗಳನ್ನು ನೀಡಿ ಎಂದು ಈ ವೇದಿಕೆಯ ಮುಖಾಂತರ ಚುನಾವಣಾ ಆಯೋಗಕ್ಕೆ ನಾನು ಆಗ್ರಹ ಮಾಡುತ್ತಿದ್ದೇನೆ. ಈ ರೀತಿ ನಮಗೆ ಮಾಹಿತಿ ನೀಡಿದರೆ ಒಂದೇ ಒಂದು ಸ್ಥಾನವಲ್ಲ ದೇಶದ ಎಲ್ಲೆಲ್ಲಿ ಮತಗಳ್ಳತನ ನಡೆದಿದೆ ಎಂದು ನಾವು ಸಾಬೀತು ಮಾಡುತ್ತೇವೆ. ನಾವು ಕರ್ನಾಟಕದಲ್ಲಿ ಒಂದೇ ಒಂದು ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ ಎಂದು ಸಾಭೀತು ಮಾಡಿದ್ದೇವೆ. ನಮಗೆ ಸೂಕ್ತ ದಾಖಲೆಗಳು ಸಿಕ್ಕರೆ ಇಡೀ ಕರ್ನಾಟಕದಾದ್ಯಂತ ನಡೆದಿರುವ ಮತಗಳ್ಳತನವನ್ನು ಹೊರ ಹಾಕುತ್ತೇವೆ.
ಚುನಾವಣಾ ಆಯೋಗ ಬಿಜೆಪಿಗಾಗಿ ಕೆಲಸ ಮಾಡಲು ಇರುವುದಲ್ಲ. ಸಂವಿಧಾನದ ಪರವಾಗಿ ಕೆಲಸ ಮಾಡಲು ಇರುವ ಸಂಸ್ಥೆ. ಒಬ್ಬ ವ್ಯಕ್ತಿ ಒಂದು ಮತ ಎಂಬುದು ಸಂವಿಧಾನದ ಮೂಲ ಧ್ಯೇಯ. ಆದರೆ ಚುನಾವಣಾ ಆಯೋಗದ ಅಧಿಕಾರಿಗಳು, ಸಿಬ್ಬಂದಿಗಳು ಸೇರಿಕೊಂಡು ಸಾಮೂಹಿಕವಾಗಿ ಸಂವಿಧಾನದ ಮೇಲೆ ದಾಳಿ ಮಾಡುತ್ತಿದ್ದಾರೆ. ಭಾರತ ದೇಶದ ಬಡ ಜನತೆಯೆ ಮೇಲೆ ಆಕ್ರಮ ಮಾಡುತ್ತಿದ್ದಾರೆ.
ನಾನು ಚುನಾವಣಾ ಆಯೋಗಕ್ಕೆ ಸ್ಪಷ್ಟವಾದ ಸಂದೇಶ ನೀಡುತ್ತಿದ್ದೇನೆ. ನೀವೆಲ್ಲರೂ ಸಂವಿಧಾನದ ಮೇಲೆ ಪ್ರಹಾರ ನಡೆಸಿ ಯಶಸ್ವಿಯಾಗುತ್ತೀರಾ ಎಂದಾದರೆ ಮತ್ತೊಮ್ಮೆ ಆಲೋಚನೆ ಮಾಡಿ ಎಂದು ಎಚ್ಚರಿಕೆ ನೀಡುತ್ತಿದ್ದೇನೆ. ನಿಮ್ಮನ್ನೆಲ್ಲಾ ಹಿಡಿದು ಹಾಕುವ ಸಮಯ ಬಂದೇ ಬರುತ್ತದೆ. ಒಬ್ಬೊಬ್ಬರನ್ನು ಹುಡುಕಿ ನಾವು ಪಾಠ ಕಲಿಸುತ್ತೇವೆ. ನೀವು ಈ ಪವಿತ್ರವಾದ ಸಂವಿಧಾನದ ಮೇಲೆ ಹಲ್ಲೆ ಮಾಡಿದರೆ ನಾವು ನಿಮ್ಮನ್ನು ಗುರಿ ಮಾಡುತ್ತೇವೆ. ಸಂವಿಧಾನ ದೇಶದ ದನಿ.
ನರೇಂದ್ರ ಮೋದಿ ಅವರು ಕೇವಲ 25 ಸ್ಥಾನಗಳಿಂದ ಪ್ರಧಾನಿಯಾಗಿದ್ದಾರೆ. ಈಗಾಗಲೇ ಒಂದು ಸ್ಥಾನದ ಅಕ್ರಮಗಳನ್ನು ಹೊರಗೆ ಹಾಕಿದ್ದೇವೆ. ಈ 24 ಸ್ಥಾನಗಳನ್ನು ಕೇವಲ 34 ಸಾವಿರಕ್ಕೂ ಕಡಿಮೆ ಅಂತರದಲ್ಲಿ ಗೆದ್ದಿದ್ದೀರಿ. ನಮಗೆ ಡಿಜಿಟಲ್ ರೂಪದಲ್ಲಿ ಮತದಾರರ ಪಟ್ಟಿ ಸಿಕ್ಕರೆ ಈ ದೇಶದ ಪ್ರಧಾನಿ ಸಕ್ರಮ ಮತಗಳಿಂದ ಗೆದ್ದು ಪ್ರಧಾನಿಯಗಿಲ್ಲ, ಕಳ್ಳಮತಗಳಿಂದ ಪ್ರಧಾನಿಯಾಗಿದ್ದಾರೆ ಎಂದು ಸಾಭೀತು ಮಾಡುತ್ತೇವೆ.
ಇಡೀ ದೇಶ ಒಕ್ಕೊರಲಿನಿಂದ ಚುನಾವಣಾ ಆಯೋಗಕ್ಕೆ ಪ್ರಶ್ನೆ ಮಾಡುತ್ತಿದೆ. ಡಿಜಿಟಲ್ ರೂಪದಲ್ಲಿ ಮತದಾರರ ಪಟ್ಟಿ ಹಾಗೂ ವಿಡಿಯೋಗ್ರಫಿಗಳನ್ನು ಏಕೆ ನೀಡುತ್ತಿಲ್ಲ ಎಂದು. ನಾನು ವಿರೋಧ ಪಕ್ಷದ ನಾಯಕನಾಗಿ ಒಬ್ಬಂಟಿಯಾಗಿ ಮಾತನಾಡುತ್ತಿಲ್ಲ. ದೇಶದ ಎಲ್ಲಾ ರಾಜಕೀಯ ಪಕ್ಷಗಳು ಒಗ್ಗಟ್ಟಾಗಿ ಈ ಪ್ರಶ್ನೆ ಕೇಳುತ್ತಿವೆ. ಎಲ್ಲಾ ಮಾಹಿತಿಗಳನ್ನು ನೀವು ಹೊರಗೆ ಹಾಕಬೇಕು.
ಕರ್ನಾಟಕದಲ್ಲಿ ನಾವು ಹೊರಗೆ ಹಾಕಿರುವ ಚುನಾವಣಾ ಅಕ್ರಮ ಮಾಹಿತಿಗಳು ಅಪರಾಧ ನಡೆದಿದೆ ಎನ್ನುವುದಕ್ಕೆ ಸಾಕ್ಷಿಗಳು. ಸುಮಾರು 6 ತಿಂಗಳ ಕಾಲ ಈ ಮಾಹಿತಿಗಳನ್ನು ನಾವು ಹುಡುಕಿದ್ದೇವೆ. ಚುನವಣಾ ಆಯೋಗ ನಮಗೆ ಮುದ್ರಣ ರೂಪದಲ್ಲಿ ನೀಡಿದ್ದ ಮಾಹಿತಿಯನ್ನು ಜೋಡಿಸಿದರೆ ಸುಮಾರು 7 ಅಡಿಗಳ ಎತ್ತರವಿತ್ತು. ಒಂದು ಭಾವಚಿತ್ರವನ್ನು ಲಕ್ಷಾಂತರ ಭಾವಚಿತ್ರಗಳ ಜೊತೆ ಹೋಲಿಕೆ ಮಾಡಿದ್ದೇವೆ. ಪ್ರತಿಯೊಂದು ಹೆಸರನ್ನು ನಾವು ಪರಿಶೀಲಿಸಿದ್ದೇವೆ. ನಾವು ಪ್ರಶ್ನೆ ಮಾಡಿದ ತಕ್ಷಣ ಎಲ್ಲಾ ಸಾಕ್ಷಿಗಳನ್ನು ನಾಶ ಮಾಡಲು ತೊಡಗುತ್ತಾರೆ. ನಾವು ಒಂದು ಕ್ಷೇತ್ರದ ಅಕ್ರಮಗಳನ್ನು ಹೊರ ಹಾಕಲು 6 ತಿಂಗಳ ಕಾಲ ವ್ಯಯ ಮಾಡಬೇಕಾಯಿತು. ನೀವು ಮಾಹಿತಿ ನೀಡಲಿ ನೀಡದೆ ಹೋಗಲಿ ಎಲ್ಲಾ ಕ್ಷೇತ್ರಗಳ ಅಕ್ರಮಗಳನ್ನು ಹೊರಗೆಡವುತ್ತೇವೆ. ಚುನಾವಣಾ ಆಯೋಗ ನೀವು ಈ ವಿಚಾರವಾಗಿ ಸುಮ್ಮನೆ ಕುಳಿತುಕೊಳ್ಳಲು ನಾವು ಬಿಡುವುದಿಲ್ಲ. ಒಂದಲ್ಲ ಒಂದು ದಿನ ವಿರೋಧ ಪಕ್ಷದ ಮುಂದ ಬರಲೇ ಬೇಕು. ಆಯೋಗದ ಪ್ರತಿಯೊಬ್ಬ ಅಧಿಕಾರಿ, ಮುಖ್ಯ ಆಯುಕ್ತರು ಈ ವಿಚಾರ ಮನವರಿಕೆಯಾಗಬೇಕು ಎಂದು ಈ ಮೂಲಕ ತಿಳಿಸುತ್ತೇವೆ.
ಕರ್ನಾಟಕದ ಒಂದು ಕ್ಷೇತ್ರದಲ್ಲಿ ನಡೆದಿರುವ ಅಕ್ರಮ ಕ್ರಿಮಿನಲ್ ಅಪರಾಧ. ಕರ್ನಾಟಕ ಸರ್ಕಾರ ಈ ಅಪರಾಧದ ವಿರುದ್ದ ತನಿಖೆ ನಡೆಸಬೇಕು ಎಲ್ಲವನ್ನು ಹೊರಗೆಡವಬೇಕು, ಜನರಿಗೆ ನ್ಯಾಯ ಕೊಡಿಸಬೇಕು ಎಂದು ನಾನು ಮನವಿ ಮಾಡುತ್ತೇನೆ. ಮತದಾರರ ಪಟ್ಟಿಗೆ 20 ಸಾವಿರದಷ್ಟು ಮತದಾರರನ್ನು ಅಕ್ರಮವಾಗಿ ಸೇರಿಸಿದವರನ್ನು ನಾವು ಪ್ರಶ್ನೆ ಮಾಡಬೇಕಿದೆ. ಮಹದೇವಪುರ ಚುನಾವಣೆಯಲ್ಲಿ ನಡೆದ ಅಕ್ರಮಗಳನ್ನು ನಾವು ಜನರ ಮುಂದೆ ಇಡಬೇಕು. ಈ ಹಿಂದೆಯೂ ಬಿಜೆಪಿ ಸರ್ಕಾರ ಕರ್ನಾಟಕದಲ್ಲಿ ಮತಗಳ್ಳತನ ನಡೆಸಿತ್ತು.
ಕಾಂಗ್ರೆಸ್ ಪಕ್ಷದವರಾದ ನಮ್ಮ ದೇಹದಲ್ಲಿ ಸಂವಿಧಾನದ ಡಿಎನ್ ಎ ಹರಿಯುತ್ತಿದೆ. ಈ ಬಿಜೆಪಿಯವರ ತತ್ವಗಳು ಎಂದಿಗೂ ಸಂವಿಧಾನದ ವಿರುದ್ದವಾಗಿ ಇರುತ್ತವೆ. ಪವಿತ್ರ ಸಂವಿಧಾನ ದೇಶದ ಬಡವರ, ಕೂಲಿ ಕಾರ್ಮಿಕರ, ಕೃಷಿಕರ, ಮಹಿಳೆಯರ ರಕ್ಷಣೆಗೆ ಇರುವ ಗ್ರಂಥ. ಕಾಂಗ್ರೆಸ್ ನ ಪ್ರತಿಯೊಬ್ಬರು ಇದರ ರಕ್ಷಣೆಗೆ ಪಣತೊಟ್ಟು ನಿಲ್ಲಬೇಕು.