ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (PTCL) ಕಾಯ್ದೆಯಡಿ ಮಂಜೂರಾದ ಜಮೀನಿನ ಮೊದಲ ಮಾರಾಟ ಪ್ರಕ್ರಿಯೆ ಕಾನೂನುಬಾಹಿರ ಎಂದು ಘೋಷಣೆಯಾದರೆ, ಅದರ ನಂತರ ನಡೆದ ಎಷ್ಟು ಸುತ್ತಿನ ಮಾರಾಟ ಪ್ರಕ್ರಿಯೆಗಳೂ ತಾನಾಗಿಯೇ ರದ್ದಾಗಲಿವೆ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
“ತಮ್ಮಲ್ಲಿ ಇಲ್ಲದ್ದನ್ನು ಬೇರೆಯವರಿಗೆ ಕೊಡಲಾಗುವುದಿಲ್ಲ” (Nemo dat quod non habet) ಎಂಬ ಪ್ರಸಿದ್ಧ ಕಾನೂನು ತತ್ವವನ್ನು ಉಲ್ಲೇಖಿಸಿರುವ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಏಕಸದಸ್ಯ ಪೀಠವು, ಹಲವು ದಶಕಗಳ ಕಾಲ ನಡೆದ ಭೂ ವಿವಾದದ ಅರ್ಜಿಯನ್ನು ವಜಾಗೊಳಿಸಿ ಈ ಆದೇಶ ಹೊರಡಿಸಿದೆ.
ಪ್ರಕರಣದ ಹಿನ್ನೆಲೆ:
ಬೆಂಗಳೂರು ಪೂರ್ವ ತಾಲೂಕಿನ ಖಾಜಿ ಸೋನ್ನೆನಹಳ್ಳಿ ಗ್ರಾಮದಲ್ಲಿ 1947ರಲ್ಲಿ ಟಿ. ಪೂಜಪ್ಪ ಎಂಬುವರಿಗೆ ಸರ್ಕಾರ 3 ಎಕರೆ 26 ಗುಂಟೆ ಜಮೀನು ಮಂಜೂರು ಮಾಡಿತ್ತು. ಪೂಜಪ್ಪ ಅವರ ನಿಧನದ ನಂತರ 1956ರಲ್ಲಿ ಅವರ ಕುಟುಂಬಸ್ಥರು ಈ ಜಮೀನನ್ನು ಬಸಮ್ಮ ಎಂಬುವರಿಗೆ ಮಾರಾಟ ಮಾಡಿದ್ದರು. ನಂತರ ಈ ಜಮೀನು ಹಲವು ಕೈ ಬದಲಾಗಿ, ಅಂತಿಮವಾಗಿ 1988ರಲ್ಲಿ ಎಸ್.ಕೆ. ಜಯರಾಮ್ ಎಂಬುವರು ಪದ್ಮಾವತಿ ಎಂಬುವವರಿಂದ ಖರೀದಿಸಿದ್ದರು.
ನ್ಯಾಯಾಲಯದ ಪ್ರಮುಖ ಅವಲೋಕನಗಳು:
-
ಮೂಲ ಮಾರಾಟವೇ ಅಮಾನ್ಯ: 1956ರಲ್ಲಿ ಬಸಮ್ಮ ಅವರಿಗೆ ಮಾಡಿದ್ದ ಮೊದಲ ಮಾರಾಟವೇ ಸರ್ಕಾರದ ಷರತ್ತುಗಳ ಉಲ್ಲಂಘನೆಯಾಗಿರುವುದರಿಂದ ಅದು ಅಸಿಂಧು. ಮೂಲ ಮಾರಾಟಗಾರನಿಗೇ ಹಕ್ಕು ಇಲ್ಲದಿದ್ದಾಗ, ಅವರಿಂದ ಜಮೀನು ಕೊಂಡವರು ಮುಂದೆ ಅದನ್ನು ಯಾರಿಗೂ ಕಾನೂನುಬದ್ಧವಾಗಿ ವರ್ಗಾಯಿಸಲು ಸಾಧ್ಯವಿಲ್ಲ.
-
ಸರಣಿ ಮಾರಾಟಗಳಿಗೆ ಬೆಲೆಯಿಲ್ಲ: ಮೊದಲ ವ್ಯವಹಾರವೇ ‘ಶೂನ್ಯ’ (Void) ಎಂದಾದ ಮೇಲೆ, ನಂತರ ನಡೆದ ಎಲ್ಲಾ ಮಾರಾಟಗಳು ಕಾನೂನಿನ ದೃಷ್ಟಿಯಲ್ಲಿ ಅಸ್ತಿತ್ವದಲ್ಲಿರುವುದಿಲ್ಲ. ಆದ್ದರಿಂದ 1988ರಲ್ಲಿ ಜಯರಾಮ್ ಅವರು ಮಾಡಿಕೊಂಡ ಖರೀದಿಯೂ ರದ್ದಾಗುತ್ತದೆ.
-
ಪಿಟಿಸಿಎಲ್ ಕಾಯ್ದೆ ಸೆಕ್ಷನ್ 4(1): ಈ ಕಾಯ್ದೆಯ ಪ್ರಕಾರ ಮಂಜೂರಾದ ಜಮೀನನ್ನು ಷರತ್ತು ಉಲ್ಲಂಘಿಸಿ ಮಾರಾಟ ಮಾಡಿದರೆ, ಅದು ಸ್ವಯಂ ಅಮಾನ್ಯವಾಗುತ್ತದೆ. ಆ ವ್ಯವಹಾರದಿಂದ ಯಾವುದೇ ಕಾನೂನುಬದ್ಧ ಮಾಲೀಕತ್ವ ಸೃಷ್ಟಿಯಾಗುವುದಿಲ್ಲ.
ತೀರ್ಪಿನ ಪರಿಣಾಮ:
ಜಮೀನು ಮಾರಾಟವನ್ನು ರದ್ದುಪಡಿಸಿ ಉಪ ವಿಭಾಗಾಧಿಕಾರಿಗಳು ಈ ಹಿಂದೆ ನೀಡಿದ್ದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಇದರೊಂದಿಗೆ, 1947ರಲ್ಲಿ ಜಮೀನು ಮಂಜೂರು ಪಡೆದಿದ್ದ ಪೂಜಪ್ಪ ಅವರ ಕುಟುಂಬಕ್ಕೆ ಜಮೀನು ಮರಳುವ ಹಾದಿ ಸುಗಮವಾಗಿದೆ. ಈ ತೀರ್ಪು ಪಿಟಿಸಿಎಲ್ ಜಮೀನುಗಳನ್ನು ಖರೀದಿಸಿ ಹಕ್ಕು ಸಾಧಿಸಲು ಹವಣಿಸುವವರಿಗೆ ಮತ್ತು ಹೂಡಿಕೆದಾರರಿಗೆ ದೊಡ್ಡ ಎಚ್ಚರಿಕೆಯ ಸಂದೇಶ ನೀಡಿದೆ.
ಬಾಲ್ಯವಿವಾಹವಾದರೆ ಕೇವಲ ಪೋಷಕರಲ್ಲ, ಪುರೋಹಿತರು ಹಾಗೂ ಛತ್ರದ ಮಾಲೀಕರೂ ಹೊಣೆ: ಹೈಕೋರ್ಟ್ ಎಚ್ಚರಿಕೆ
Health Tips: ಇವು ‘ದ್ರಾಕ್ಷಿ ಸೇವನೆ’ಯ ಅದ್ಭುತ ಆರೋಗ್ಯಕರ ಪ್ರಯೋಜನಗಳು








