ಬೆಂಗಳೂರು: ನಗರದ ಹೆಸರಘಟ್ಟದಲ್ಲಿ ಅಪರೂಪದ ಹುಲ್ಲುಗಾವಲಿದೆ. ಇದು ನೂರಾರು ಪ್ರಭೇದದ ಪಕ್ಷಿಗಳ ಸಂತಾನೋತ್ಪತ್ತಿಯ ತಾಣವಾಗದ್ದು, ಇಷ್ಟು ಸುಂದರ ಪರಿಸರ ಉಳಿಸಲು ದಶಕಗಳಿಂದ ಹೋರಾಟ ನಡೆದಿತ್ತು. ತಾವು ಸಚಿವನಾದ ಬಳಿಕ, ಹಲವು ಒತ್ತಡದ ನಡುವೆಯೂ ಹೆಸರುಘಟ್ಟ ಕೆರೆ ಸುತ್ತಮುತ್ತಲ್ಲಿರುವ ಅಪರೂಪದ ಹುಲ್ಲುಗಾವಲು ರಕ್ಷಣೆಗಾಗಿ 5678 ಎಕರೆ ಪ್ರದೇಶವನ್ನು ಗ್ರೇಟರ್ ಹೆಸರುಘಟ್ಟ ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸಿದ್ದಾಗಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.
6251.31 ಎಕರೆ ಅರಣ್ಯ ತೆರವು
ಕಳೆದ 2 ವರ್ಷಗಳಲ್ಲಿ 1205 ಒತ್ತುವರಿ ಪ್ರಕರಣಗಳಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ 6251.31 ಎಕರೆ ಅರಣ್ಯ ತೆರವು ಮಾಡಿಸಲಾಗಿದೆ. ಒತ್ತುವರಿ ತೆರವು ನಿರಂತರ ಪ್ರಕ್ರಿಯೆಯಾಗಿದೆ ಎಂದು ಹೇಳಿದರು.
ಚಿರತೆ ಸಫಾರಿಗೆ ಉತ್ತಮ ಸ್ಪಂದನೆ
ಬೆಂಗಳೂರಿಗೆ ಸಮೀಪದಲ್ಲೇ ಇರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆ ಸಫಾರಿ ಆರಂಭಿಸಬೇಕೆಂಬ ಬೇಡಿಕೆ ಇತ್ತು, ತಾವು ಸಚಿವನಾದ ತರುವಾಯ ಇದಕ್ಕೆ ಚಾಲನೆ ನೀಡಿದ್ದು, ಇದು ಜನಾಕರ್ಷಣೆಯ ಕೇಂದ್ರವಾಗಿದೆ. ಉದ್ಯಾನಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದರು.
ಡೀಮ್ಡ್ ಅರಣ್ಯ ಗೊಂದಲ ನಿವಾರಣೆಗೆ ಕ್ರಮ
ನಿರ್ದಿಷ್ಟ ಕ್ಷೇತ್ರೀಯ ಮಾನದಂಡಗಳ ರೀತ್ಯ ಜಿಲ್ಲಾಮಟ್ಟದ ಸಮಿತಿಗಳ ಶಿಫಾರಸಿನಂತೆ 3,30,186.93 ಹೆಕ್ಟೇರ್ ಪ್ರದೇಶವನ್ನು ಪರಿಭಾವಿತ ಅರಣ್ಯ ಅಥವಾ ಡೀಮ್ಡ್ ಫಾರೆಸ್ಟ್ ಎಂದು ಅಧಿಸೂಚಿಸಲಾಗಿದೆ. ಹೀಗೆ ಗುರುತಿಸಿರುವ ಭೂಮಿಯಲ್ಲಿ ಸರ್ಕಾರಿ ಕಚೇರಿ, ಆಸ್ಪತ್ರೆ, ಪಟ್ಟಾ ಜಮೀನು ಇರುವ ಕಾರಣ ಸುಪ್ರೀಂಕೋರ್ಟ್ ಗೆ ಮನವಿ ಮಾಡಲಾಗಿದ್ದು, ಸಮಿತಿ ರಚಿಸಿ ಪರಿಷ್ಕರಣೆ ಮಾಡಿ ಸಲ್ಲಿಸಲು ಸೂಚಿಸಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ಈಗ ಕೊನೆಯ ಅವಕಾಶ ಇದ್ದು, ಪರಿಭಾವಿತ ಅರಣ್ಯ ಎಂದು ಈಗಾಗಲೇ ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ಪ್ರದೇಶದ ಪೈಕಿ ಕೈಬಿಡುವ ಪ್ರದೇಶಕ್ಕೆ ಪರ್ಯಾಯವಾಗಿ ಬೇರೆ ಜಮೀನು ನೀಡಿ ಪರಿಭಾವಿತ ಪ್ರದೇಶದ ವ್ಯಾಪ್ತಿಯನ್ನು 3,30,186.93 ಹೆಕ್ಟೇರ್ ಉಳಿಸಿಕೊಂಡು, ಪರಿಹಾರ ಒದಗಿಸಲು ತೀರ್ಮಾನಿಸಲಾಗಿದೆ. ಈ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅರಣ್ಯ ಇಲಾಖೆ ರಾಯಭಾರಿಯಾಗಿ ನಾಮ ನಿರ್ದೇಶನ: ಯಾವುದೇ ಸಂಭಾವನೆ ಇಲ್ಲ