ಬೆಂಗಳೂರು: ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು ಈ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಆ ಪ್ರಮುಖ ಹೈಲೈಟ್ಸ್ ಮುಂದಿದೆ ಓದಿ.
ನಬಾರ್ಡ್ ಖಾತರಿ ವಿಸ್ತರಣೆ
2025-26ನೇ ಸಾಲಿಗೆ ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿ, ಬೆಂಗಳೂರು ರವರು ನಬಾರ್ಡ್ ಮೂಲಕ ಪುನರ್ಧನ ಪಡೆಯಲು ರೂ.1600 ಕೋಟಿಗಳಿಗೆ (ಒಂದು ಸಾವಿರದ ಆರುನೂರು ಕೋಟಿ ರೂಪಾಯಿಗಳು ಮಾತ್ರ) ಆರ್ಥಿಕ ಇಲಾಖೆಯು ವಿಧಿಸಿದ ಷರತ್ತಿಗೊಳಪಟ್ಟು ದಿನಾಂಕ:01.04.2025 ರಿಂದ ದಿನಾಂಕ: 31.03.2026 ರವರೆಗೆ ರಾಜ್ಯ ಸರ್ಕಾರದ ಖಾತರಿ ನೀಡಲು ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು 1977ರ ಮೊದಲನೇ ಅನುಸೂಚಿಯ ಐಟಂ 9ರನ್ವಯ ಸಚಿವ ಸಂಪುಟ ಅನುಮೋದಿಸಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಎಚ್.ಕೆ ಪಾಟೀಲ ಮಾಧ್ಯವದವರಿಗೆ ವಿವರಿಸಿದರು.
2011ನೇ ಸಾಲಿನ ನೇಮಕಾತಿಗೆ ಸಂಬಂಧಿಸಿದಂತೆ ಅಭಿಯೋಜನೆಗೆ ನಕಾರ
ಈ ಪ್ರಕರಣದಲ್ಲಿ ಮಂಡಿಸಿರುವ ವಿವರವಾದ ಅಂಶಗಳ ಆಧಾರದಲ್ಲಿ ದಿನಾಂಕ: 27.05.2021 ಹಾಗೂ 21.06.2021ರಂದು ನಡೆದ ಸಚಿವ ಸಂಪುಟ ಸಭೆಯ ನಿರ್ಣಯದಂತೆ 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಆಯ್ಕೆ ಪ್ರಕ್ರಿಯೆಯ ಅವ್ಯವಹಾರಗಳಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಕರ್ನಾಟಕ ಲೋಕಸೇವಾ ಆಯೋಗದ ಅಂದಿನ ಈ ಕೆಳಕಂಡ ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ, 1988ರ ಕಲಂ 19ರಡಿ ಅಭಿಯೋಜನೆಗೊಳಿಸಲು ಭಾರತದ ಸಂವಿಧಾನದ ಅನುಚ್ಛೇದ 317(1)ರ ಪ್ರಕಾರ ಅಗತ್ಯ ಕ್ರಮಕ್ಕಾಗಿ ಮಾನ್ಯ ರಾಜ್ಯಪಾಲರ ಅನುಮೋದನೆಯೊಂದಿಗೆ ಘನತೆವೆತ್ತ ಭಾರತದ ರಾಷ್ಟçಪತಿಯವರ ಮಂಜೂರಾತಿಯನ್ನು ಪಡೆಯಲು ತನಿಖಾ ಸಂಸ್ಥೆಯು (ಸಿ.ಐ.ಡಿ) ಮಾಡಿದ ಶಿಫಾರಸ್ಸನ್ನು ಒಪ್ಪದೇ ಅವರ ವಿರುದ್ಧದ ಅಭಿಯೋಜನಾ ಪ್ರಸ್ತಾಪವನ್ನು ಕೈಬಿಡಲು ತೀರ್ಮಾನಿಸಿದೆ.
ಮೀನಾ, ರಾಮಮೂರ್ತಿ ವಿರುದ್ಧ ಕ್ರಮಕ್ಕೆ ನಕಾರ
ಭರತ್ ಲಾಲ್ ಮೀನಾ, ಭಾ.ಆ.ಸೇ. (ನಿವೃತ್ತ) ಅಂದಿನ ಬಿ ರಾಮಮೂರ್ತಿ, ಭಾ.ಆ.ಸೇ (ನಿವೃತ್ತ) ಅಂದಿನ ಅಧ್ಯಕ್ಷರು, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇವರುಗಳ ವಿರುದ್ಧ ಕರ್ನಾಟಕ ಲೋಕಾಯುಕ್ತ ಕಾಯ್ದೆ, 1984ರ ಕಲಂ 12(3)ರಡಿ ಸಲ್ಲಿಸಿರುವ ವರದಿಯಲ್ಲಿ ಮಾಡಿರುವ ಶಿಫಾರಸ್ಸನ್ನು ಕೈಬಿಡುವ ಬಗ್ಗೆ ಸಚಿವ ಸಂಪುಟ ನಿರ್ಣಯಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಬೆಂಗಳೂರು ನಗರ ಯೋಜನಾ ಪ್ರಾಧಿಕಾರವಾಗಿದ್ದು, ಮಹಾಯೋಜನೆ ಮತ್ತು ವಲಯ ನಿಯಮಾವಳಿಗಳನ್ನು ಸಿದ್ದಪಡಿಸಿದ್ದು, ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡುವ ಸಂದರ್ಭದಲ್ಲಿ ಅಧಿಕಾರಿಯವರು ಕಟ್ಟಡದ ಮಾಲಿಕರಿಗೆ ಅನುಕೂಲ ಮಾಡಿ, ತಿರುಚಿ ಅಭಿಪ್ರಾಯ ನೀಡುತ್ತಾರೆಂಬ ಆರೋಪವನ್ನು ತಳ್ಳಿಹಾಕಿ, ಕಟ್ಟಡ ನಕ್ಷೆ ಅನುಮೋದನೆಯು ಚಾಲ್ತಿಯಲ್ಲಿರುವ ಕಟ್ಟಡದ ಬೈಲಾಸ್ ಅನುಸಾರವಾಗಿ ಇರುತ್ತದೆಂದು ತಿಳಿಸಿರುತ್ತಾರೆ.
ಆಡಳಿತ ಇಲಾಖೆಯ ಶಿಫಾರಸ್ಸನ್ನು ಸಚಿವ ಸಂಪುಟದ ಉಪ ಸಮಿತಿಯು ಒಪ್ಪಿ, ಪ್ರಕರಣವನ್ನು ಶಿಸ್ತು ವಿಚಾರಣೆ ನಡೆಸಲು ಮಾನ್ಯ ಲೋಕಾಯುಕ್ತರು ಮಾಡಿರುವ ಶಿಫಾರಸ್ಸನ್ನು ಕೈಬಿಡಲು ತೀರ್ಮಾನಿಸಿದ್ದರಿಂದ ಈ ಪ್ರಸ್ತಾವ ತರಲಾಗಿತ್ತು.
ಗ್ರಾಮ ಪಂಚಾಯಿತಿ ವಿದ್ಯುತ್ ಬಿಲ್ಲಿನ ಬಡ್ಡಿ ಮನ್ನಾ
ವಿದ್ಯುತ್ ಸರಬರಾಜು ಕಂಪನಿಗಳು ಗ್ರಾಮ ಪಂಚಾಯಿತಿ / ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಕುಡಿಯುವ ನೀರು ಮತ್ತು ಬೀದಿ ದೀಪ ಸ್ಥಾವರಗಳಿಗೆ ವಿದ್ಯುತ್ ಸರಬರಾಜು ಮಾಡಿರುತ್ತವೆ. ವಿದ್ಯುತ್ ಶುಲ್ಕಗಳು ಗ್ರಾಮ ಪಂಚಾಯಿತಿಗಳು ಪಾವತಿ ಮಾಡಿರುವುದಿಲ್ಲ. ದಿ:30.03.2024ರ ಅಂತ್ಯಕ್ಕೆ ವಿದ್ಯುತ್ ಶುಲ್ಕ ಬಾಕಿ ರೂ.6,509 ಕೋಟಿ ಇರುತ್ತದೆ. ವಿದ್ಯುತ್ ಸರಬರಾಜು ಕಂಪನಿಗಳಿಗೆ ಪಾವತಿಸಬೇಕಾಗಿರುವ ಕುಡಿಯುವ ನೀರು ಮತ್ತು ಬೀದಿ ದೀಪ ಸ್ಥಾವರಗಳ ಅಸಲು ಮೊತ್ತ ರೂ.5,257.70 ಕೋಟಿಗಳನ್ನು ಖಾತರಿಕರಣ ಮೂಲಕ ತೀರುವಳಿ ಮಾಡಲು ಸರ್ಕಾರವು ವ್ಯವಸ್ಥೆ ಮಾಡಿರುತ್ತದೆ.
ಕರ್ನಾಟಕ ಸರ್ಕಾರದ (ವ್ಯವಹಾರ ನಿರ್ವಹಣೆ) ನಿಯಮಗಳು, 1977ರ ಸೆಕ್ಷನ್ 20(1)(ಬಿ) ರಂತೆ ಗ್ರಾಮ ಪಂಚಾಯಿತಿ/ಗ್ರಾಮೀಣ ಸ್ಥಳೀಯ ಸಂಸ್ಥೆಗಳು ದಿನಾಂಕ: 01.04.2015ರಿಂದ ದಿನಾಂಕ: 31.03.2023ರವರೆಗೆ ವಿದ್ಯುತ್ ಸರಬರಾಜು ಕಂಪನಿಗಳಿಗೆ ಪಾವತಿಸಬೇಕಾಗಿರುವ ಕುಡಿಯುವ ನೀರು ಮತ್ತು ಬೀದಿ ದೀಪ ಸ್ಥಾವರಗಳ ಸಮನ್ವಯಗೊಳಿಸಿಕೊಂಡಿರುವ ಬಾಕಿ ವಿದ್ಯುತ್ ಶುಲ್ಕದ ಅಸಲು ಮೊತ್ತ ರೂ.5,257.70 ಕೋಟಿಗಳನ್ನು ಖಾತರೀಕರಣದ (Securitisation) ಮೂಲಕ ತೀರುವಳಿ ಮಾಡುವ ಸಂಬಂಧ ಆಡಳಿತ ಇಲಾಖೆಯಿಂದ ಹೊರಡಿಸಿರುವ ಸರ್ಕಾರಿ ಆದೇಶ ಸಂಖ್ಯೆ: ಎನರ್ಜಿ/61/ಪಿಎಸ್ಆರ್/2024 ದಿನಾಂಕ:30.03.2024 ಮತ್ತು 14.06.2024ರ ಕ್ರಮಕ್ಕೆ ಸಚಿವ ಸಂಪುಟದ ಘಟನೋತ್ತರ ಅನುಮೋದನೆಗೆ ಸಚಿವ ಸಂಪುಟ ಅನುಮೋದಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು.
ವಲಯ ಅರಣ್ಯಾಧಿಕಾರಿ ವಿರುದ್ಧ ಕ್ರಮಕ್ಕೆ ನಕಾರ
“ಆರ್. ಸುರೇಶ, ಹಿಂದಿನ ವಲಯಾರಣ್ಯಾಧಿಕಾರಿ ಪ್ರಸ್ತುತ ನಿವೃತ್ತ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಸೈಯದ್ ನಿಜಾಮುದ್ದೀನ್, ಹಿಂದಿನ ವಲಯಾರಣ್ಯಾಧಿಕಾರಿ ಪ್ರಸ್ತುತ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಇವರುಗಳ ವಿರುದ್ಧ ಮಾನ್ಯ ಉಪಲೋಕಾಯುಕ್ತರವರಿಂದ 1984ರ ಕರ್ನಾಟಕ ಲೋಕಾಯುಕ್ತ ಕಾಯ್ದೆ ಕಲಂ12(3)ರಡಿಯಲ್ಲಿ ಸಲ್ಲಿಕೆಯಾಗಿರುವ ಶಿಫಾರಸ್ಸುನ್ನು ಕೈಬಿಡುವ ಬಗ್ಗೆ ಸಚಿವ ಸಂಪುಟ ನಿರ್ಣಯಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ಮಾಧ್ಯಮದವರಿಗೆ ತಿಳಿಸಿದರು.
ಸದರಿ ಕಾಮಗಾರಿಗಳನ್ನು 2015-16ನೇ ಸಾಲಿನಲ್ಲಿ ನಿರ್ವಹಿಸಿದ್ದು, ದೂರನ್ನು 2017ನೇ ಸಾಲಿನಲ್ಲಿ ದಾಖಲೆ ಮಾಡಲಾಗಿದೆ. ತನಿಖೆಯನ್ನು 2021ನೇ ಸಾಲಿನಲ್ಲಿ ಮಾಡಲಾಗಿದೆ. ಕಾಮಗಾರಿ ನಿರ್ವಹಿಸಿದ 05 ವರ್ಷಗಳ ನಂತರ ತನಿಖೆ ಮಾಡಿದಾಗ ನೈಸರ್ಗಿಕ ಕಾರಣಗಳಿಂದಾಗಿ ಎಷ್ಟೇ ಪ್ರಮಾಣದಲ್ಲಿ ಮಣ್ಣು ಅಗೆತ ಕಾರ್ಯವನ್ನು ಕೈಗೊಂಡಿದೆ ಎಂದು ನಿಖರವಾಗಿ, ವೈಜ್ಞಾನಿಕವಾಗಿ ಹೇಳಲು ಸಾಧ್ಯವಾಗುವುದಿಲ್ಲ. ಅಪಾದಿತ ಅಧಿಕಾರಿಗಳಿಂದ ಸರ್ಕಾರಕ್ಕೆ ಯಾವುದೇ ಆರ್ಥಿಕ ನಷ್ಟವುಂಟಾಗಿರುವ ಬಗ್ಗೆ ಲೋಕಾಯುಕ್ತ ಸಂಸ್ಥೆಯು ತನಿಖಾ ವರದಿಯಲ್ಲಿ ನಮೂದಿಸಿರುವುದಿಲ್ಲ.
ಮೈಸೂರು – ದಾವಣಗೆರೆ ಜಿಲ್ಲಾ ಆಸ್ಪತ್ರೆಗಳಲ್ಲಿ MRI Scan Machine
“ಮೈಸೂರು ಹಾಗೂ ದಾವಣಗೆರೆ ಈ 2 ಜಿಲ್ಲಾ ಆಸ್ಪತ್ರೆಗಳಲ್ಲಿ ಇನ್-ಹೌಸ ಮಾದರಿಯಲ್ಲಿ 2 MRI Scan Machine ಗಳನ್ನು ರೂ.30.00 ಕೋಟಿಗಳಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಉಚಿತ ರೋಗ ಪತ್ತೆ ಸೇವೆಗಳ ಕಾರ್ಯಕ್ರಮದಡಿ ECRP-II ಅನುದಾನದಲ್ಲಿ ಭರಿಸಿ KTTP ಕಾಯ್ದೆ ಹಾಗೂ ನಿಯಮಗಳನ್ನು ಅನುಸರಿಸಿ ಖರೀದಿಸಿ ಸರಬರಾಜು ಮಾಡಲು ಸಚಿವ ಸಂಪುಟ ಅನುಮೋದಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ವಿವರಿಸಿದರು.
ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಸಿಟಿ ಸ್ಕ್ಯಾನ್ ಮತ್ತು ಎಂಆರ್ಐ ಸೇವೆಗಳನ್ನು ಎಲ್ಲಾ ಫಲನುಭವಿಗಳಿಗೆ ಉಚಿತವಾಗಿ ಒದಗಿಸುವುದು. ರೋಗ ಪತ್ತೆ ಪರೀಕ್ಷೆಗಳಿಗಾಗಿ ಫಲಾನುಭವಿಗಳು ಮಾಡುವ ಹೆಚ್ಚಿನ ಸ್ವಂತ ವೆಚ್ಚವನ್ನು ಕಡಿಮೆ ಮಾಡುವುದು. ನಿಖರವಾದ ರೋಗಪತ್ತೆ ಪರೀಕ್ಷೆಗಳ ಆಧಾರದ ಮೇಲೆ ಸರಿಯಾದ ಚಿಕಿತ್ಸೆಯ ಪ್ರಾರಂಭ ಮತ್ತು ಮುಂದುವರಿಕೆಯನ್ನು ಸಕ್ರಿಯಗೊಳಿಸಬಹುದು. ನಿಖರವಾದ ರೋಗಪತ್ತೆ ಸೇವೆಗಳನ್ನು ಒದಗಿಸುವುದರಿಂದ ದೀರ್ಘಕಾಲದ ಕಾಯಿಲೆಗಳನ್ನು ತಡೆಗಟ್ಟಬಹುದಾಗಿದೆ. ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಸಮಗ್ರ ಆರೋಗ್ಯ ಸೇವೆಯ ಲಭ್ಯತೆಯ ಪರಿಣಾಮವಾಗಿ ಆರೋಗ್ಯ ಸಂಸ್ಥೆಗಳಲ್ಲಿ ಫಲಾನುಭವಿಗಳ ಅನುಭವದ ಒಟ್ಟಾರೆ ಗುಣಮಟ್ಟವನ್ನು ಸುಧಾರಿಸಲು ಪ್ರಸ್ತಾಪಿಸಲಾಗಿತ್ತು.
ವಿಜಯಲಕ್ಷ್ಮೀ ಸಂಗನಾಳ ದೋಷಮುಕ್ತ
ದಿನಾಂಕ: 13.02.2025ರಂದು ನಡೆದ ಸಚಿವ ಸಂಪುಟ ಉಪ ಸಮಿತಿಯಲ್ಲಿ ತೀರ್ಮಾನಿಸಿರುವಂತೆ, ವಿಜಯಲಕ್ಷ್ಮೀ ಸಂಗನಾಳ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಇವರ ವಿರುದ್ಧದ ಆರೋಪವನ್ನು ದೋಷಮುಕ್ತಗೊಳಿಸಿ ಲೋಕಾಯುಕ್ತ ಪ್ರಕರಣವನ್ನು ಮುಕ್ತಾಯಗೊಳಿಸಲು ಸಚಿವ ಸಂಪುಟ ನಿರ್ಣಯಿಸಿದೆ ಎಂದು ತಿಳಿಸಿದರು.
ವಿಜಯಲಕ್ಷ್ಮೀ ಸಂಗನಾಳ ರವರ ವಿರುದ್ಧ ಚಿತ್ರದುರ್ಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ದಾಖಲಾಗಿದ್ದ ವಿಶೇಷ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯವು ತೀರ್ಪು ನೀಡಿ, ಪ್ರಕರಣವನ್ನು ಖುಲಾಸೆಗೊಳಿಸಿರುವುದರಿಂದ ಆರೋಪಿತರನ್ನು ದೋಷಮುಕ್ತಗೊಳಿಸಲು ಪ್ರಸ್ತಾಪಿಸಲಾಗಿದೆ.
ಮಧ್ಯಸ್ಥಿಕೆ ನಿಯಮಗಳಿಗೆ ತಿದ್ದುಪಡಿ
ಮಧ್ಯಸ್ಥಿಕೆ ಮತ್ತು ಸಮನ್ವಯ ಕೇಂದ್ರ (ತಿದ್ದುಪಡಿ) ನಿಯಮಗಳು, 2025ನ್ನು ಹೊರಡಿಸಲು ಸಚಿವ ಸಂಪುಟ ನಿರ್ಣಯಿಸಿದೆ. ಈಗಿರುವ ಮಧ್ಯಸ್ಥಿಕೆದಾರರ ಶುಲ್ಕ ಕನಿಷ್ಠ ರೂ.50 ಸಾವಿರದಿಂದ ವಿವಿಧ ಸ್ಲ ಗಳಿಗೆ ರೂ.15 ಲಕ್ಷದವರೆಗೆ ಮತ್ತು ರೂ.25 ಸಾವಿರದಿಂದ ರೂ.50 ಸಾವಿರದವರೆಗೆ ಹೆಚ್ಚಿಸಲು ಪ್ರಸ್ತಾಪಿಸಲಾಗಿತ್ತು. ಈ ಮೊದಲು ಈ ಶುಲ್ಕಗಳನ್ನು 13 ವರ್ಷಗಳ ಹಿಂದೆ ನಿಗದಿಪಡಿಸಲಾಗಿದೆ.
ರಾಮನಗರ ಮರುನಾಮಕರಣಕ್ಕೆ ದೃಢನಿರ್ಧಾರ
ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯನ್ನಾಗಿ ಮರುನಾಮಕರಣ ಮಾಡಿ ಹಾಗೂ ರಾಮನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಲು ಸಚಿವ ಸಂಪುಟ ಅನುಮೋದಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ವಿವರಿಸಿದರು.
ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯನ್ನಾಗಿ ಮರುನಾಮಕರಣ ಮಾಡಲು ನಿರಕ್ಷೇಪಣಾ ಪತ್ರ ಕೋರಿ, ಭಾರತ ಸರ್ಕಾರದ ಗೃಹ ಮಂತ್ರಾಲಯಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಕೇಂದ್ರ ಗೃಹ ಮಂತ್ರಾಲಯವು ತಿರಸ್ಕರಿಸಿದೆ. ಆದರೆ, ಭಾರತ ಸಂವಿಧಾನದ 7ನೇ ಪರಿಚ್ಛೇದವು ಒಕ್ಕೂಟ ಪಟ್ಟಿಯಲ್ಲಿ ಬರುವ ವಿವಿಧ ವಿಷಯಗಳ ಬಗ್ಗೆ ವಿವರಿಸುತ್ತದೆ. ರಾಜ್ಯಪಟ್ಟಿಯ ಸಂಖ್ಯೆ 18ರಲ್ಲಿ ಬರುವ ಭೂಮಿ ವಿಷಯವು ರಾಜ್ಯ ವಿಷಯವಾಗಿದೆ ಹಾಗೂ ರಾಜ್ಯ ಪಟ್ಟಿಯ ವಿಷಯ ಸಂಖ್ಯೆ 45 ರಲ್ಲಿ ಭೂ ಕಂದಾಯ ವಿಷಯವು ಸಹ ರಾಜ್ಯ ವಿಷಯವಾಗಿರುತ್ತದೆ. ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ (4) ರಲ್ಲಿ ರಾಜ್ಯ ಸರ್ಕಾರಕ್ಕೆ ವಲಯಗಳನ್ನು ತಾಲ್ಲೂಕುಗಳನ್ನು, ಜಿಲ್ಲೆಗಳನ್ನು ರಚಿಸಲು, ಬದಲಾಯಿಸಲು, ರದ್ದುಪಡಿಸಲು ಹಾಗೂ ಹೆಸರನ್ನು ಮರುನಾಮಕರಣ ಮಾಡಲು ಅವಕಾಶ ಕಲ್ಪಿಸಿದೆ. ಆದ್ದರಿಂದ ಈ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಚಾಮರಾಜನಗರ ಕಾಂಗ್ರೆಸ್ ಭವನದ ಟ್ರಸ್ಟ್ಗೆ ಜಾಗ
ಚಾಮರಾಜನಗರ ಜಿಲ್ಲೆಯ ಚಾಮರಾಜನಗರ ಗ್ರಾಮದ ಸ.ನ. 475 ರಲ್ಲಿ 25 ಗುಂಟೆ ಜಮೀನನ್ನು ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಕಚೇರಿ ಕಟ್ಟಡ ನಿರ್ಮಾಣದ ಉದ್ದೇಶಕ್ಕಾಗಿ ಕಾಂಗ್ರೆಸ್ ಭವನ ಟ್ರಸ್ಟ್ ಬೆಂಗಳೂರು ಇವರಿಗೆ ಮಂಜೂರು ಮಾಡಲು ಪ್ರಸ್ತಾಪಿಸಲಾಗಿತ್ತು.
ನಗರ ಪೌರ ಸರಹದ್ದಿನೊಳಗೆ ಯಾವುದೇ ಖಾಸಗಿ ಸಂಘ ಸಂಸ್ಥೆಗಳಿಗೆ ಮಂಜೂರು ಮಾಡಲು ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ 22-ಎ(2)ರನ್ವಯ ಸರ್ಕಾರಿ ಜಮೀನನ್ನು ಯಾವುದೇ ಅವಕಾಶವಿರುವುದಿಲ್ಲ. ಆದುದರಿಂದ ಪ್ರಸ್ತಾವನೆಯನ್ನು ತಿರಸ್ಕರಿಸುವುದು; ಅಥವಾ ಚಾಮರಾಜನಗರ ಜಿಲ್ಲೆಯ ಚಾಮರಾಜನಗರ ತಾಲ್ಲೂಕಿನ ಕಸಬಾ ಹೋಬಳಿಯ ಚಾಮರಾಜನಗರ ಗ್ರಾಮದ ಸ.ನಂ.475ರಲ್ಲಿ 25 ಗುಂಟೆ ಸರ್ಕಾರಿ ಜಮೀನನ್ನು ಕಾಂಗ್ರೆಸ್ ಭವನ ಕಟ್ಟಡ ನಿರ್ಮಾಣದ ಉದ್ದೇಶಕ್ಕಾಗಿ ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 27ರಲ್ಲಿ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಸದರಿ ನಿಯಮದ 22-ಎ(2)ನ್ನು ಸಡಿಲಿಸಿ, ಪ್ರಸ್ತಾಪಿತ ಜಮೀನಿನ ಪ್ರಚಲಿತ ಕೃಷಿಯೇತರ ಮಾರುಕಟ್ಟೆ ಮೌಲ್ಯದ ಶೇಕಡ 100ರಷ್ಟು ಮತ್ತು ಇನ್ನಿತರ ಶಾಸನಬದ್ಧ ಶುಲ್ಕಗಳನ್ನು ವಿಧಿಸಿ, ಕಾಂಗ್ರೆಸ್ ಭವನ ಟ್ರಸ್ಟ್ (ರಿ), ಬೆಂಗಳೂರು ರವರಿಗೆ ಮಂಜೂರು ಮಾಡುವುದು; ಸಚಿವ ಸಂಪುಟ ಅನುಮೋದಿಸಿದೆ.
ಸಾರ್ವಜನಿಕ ನಿವೇಶನದ ಗುತ್ತಿಗೆ ಮೌಲ್ಯ ಪಾವತಿಸಿದ್ದಲ್ಲಿ ಬಡ್ಡಿ ಮನ್ನಾ
ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಾರ್ವಜನಿಕ ಸೌಲಭ್ಯದ ನಿವೇಶನ ಪಡೆದು ಗುತ್ತಿಗೆ ಮೌಲ್ಯದ ಪಾವತಿ ಬಾಕಿಯಿರಿಸಿಕೊಂಡಿರುವ ಎಲ್ಲಾ ಸಂಸ್ಥೆಗಳು ಬಾಕಿ ಉಳಿಸಿಕೊಂಡಿರುವ ನಾಗರೀಕ ಸೌಲಭ್ಯ ನಿವೇಶನದ ಸಂಪೂರ್ಣ ಗುತ್ತಿಗೆ ಮೌಲ್ಯವನ್ನು ಪ್ರಾಧಿಕಾರವು ಪ್ರಕಟಣೆ ನೀಡಿದ 120 ದಿನಗಳೊಳಗಾಗಿ ಪ್ರಾಧಿಕಾರಕ್ಕೆ ಪಾವತಿಸಿದ್ದಲ್ಲಿ ಅನ್ವಯಿಸುವ ಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡಲಾಗುವುದು ಎಂದು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ವಿವರಿಸಿದರು.
ವಿಶೇಷ ಪ್ರಕರಣವೆಂದು ಪರಿಗಣಿಸಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ನಾಗರೀಕ ಸೌಲಭ್ಯ ನಿವೇಶನ ಹಂಚಿಕ) ನಿಯಮಗಳು, 1989ಅನ್ನು ಸಡಿಲಿಸಿ, ಒಂದು ಬಾರಿಯ ಕ್ರಮವಾಗಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಾಗರೀಕ ಸೌಲಭ್ಯ ನಿವೇಶನ ಹಂಚಿಕೆ ಪಡೆದಿರುವ ವಿವಿಧ ಸಂಘ/ಸಂಸ್ಥೆಗಳು ಬಾಕಿ ಉಳಿಸಿಕೊಂಡಿರುವ ಸಂಪೂರ್ಣ ಗುತ್ತಿಗೆ ಮೌಲ್ಯವನ್ನು ಪ್ರಾಧಿಕಾರವು ಪ್ರಕಟಣೆ ನೀಡಿದ 120 ದಿನಗಳೊಳಗಾಗಿ ಪಾವತಿಸಿದಲ್ಲಿ ನಿಯಮಾನುಸಾರ ವಿಧಿಸಲಾಗುವ ಬಡ್ಡಿಯ ಮೊತ್ತವನ್ನು ಸಂಪೂರ್ಣವಾಗಿ ಮನ್ನಾ ಮಾಡಲು; ಸಚಿವ ಸಂಪುಟ ನಿರ್ಣಯಿಸಿದೆ.
ಇಲಾಖಾ ವಿಚಾರಣೆಗೆ ನಕಾರ
ಅನೀಲಕುಮಾರ್ ವೈ.ಡಿ, ಸಹಾಯಕ ಇಂಜಿನಿಯರ್, ಕಾವೇರಿ ನೀರಾವರಿ ನಿಗಮ ನಿಯಮಿತ, ಭಾರತೀನಗರ (ಕೆ.ಎಂ.ದೊಡ್ಡಿ) ಮಂಡ್ಯ ಜಿಲ್ಲೆ ಮತ್ತು ಮಹಾದೇವ ಬಿ.ಕೆ., ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಕಾವೇರಿ ನೀರಾವರಿ ನಿಗಮ ನಿಯಮಿತ, ಭಾರತೀನಗರ (ಕೆ.ಎಂ.ದೊಡ್ಡಿ) ಮಂಡ್ಯ ಜಿಲ್ಲೆ; ಇವರುಗಳ ವಿರುದ್ಧ ಇಲಾಖಾ ವಿಚಾರಣೆಗೆ ವಹಿಸಲು ಮಾಡಿರುವ ಶಿಫಾರಸ್ಸುನ್ನು ಕೈಬಿಡಲು ಸಚಿವ ಸಂಪುಟ ನಿರ್ಣಯಿಸಿದೆ.
ದೂರುದಾರರ ಮನವಿ ಪತ್ರದಲ್ಲಿ ತಿಳಿಸಿರುವಂತೆ ವ್ಯವಸ್ಥಾಪಕ ನಿರ್ದೇಶಕರು, ಕಾವೇರಿ ನೀರಾವರಿ ನಿಗಮ, ಬೆಂಗಳೂರು ರವರ ಅನುಮತಿಯಂತೆ ತಮ್ಮ ಸ್ವಂತ ಖರ್ಚಿನಲ್ಲಿ ಸೇತುವೆ ನಿರ್ಮಿಸಿಕೊಂಡಿದ್ದಾರೆಯೇ ಹೊರತು ದೂರುದಾರರಿಗೆ ಯಾವುದೇ ಆರ್ಥಿಕ ನಷ್ಟ ಉಂಟಾಗಿರುವುದಿಲ್ಲವೆAದು ವರದಿ ಮಾಡಿರುವ ಹಿನ್ನೆಲೆಯಲ್ಲಿ ತನಿಖೆ ಕೈಬಿಡಲು ಪ್ರಸ್ತಾಪಿಸಲಾಗಿತ್ತು.
ಇಲಾಖಾ ವಿಚಾರಣೆಗೆ ನಕಾರ
ವೀರಭದ್ರಸ್ವಾಮಿ, ಕಾರ್ಯನಿರ್ವಾಹಕ ಇಂಜಿನಿಯರ್ (ನಿವೃತ್ತ), ಕರ್ನಾಟಕ ನೀರಾವರಿ ನಿಗಮ ನಿಯಮಿತ, ನಂ.05, ವಿ.ವಿ. ಸಾಗರ ಉಪವಿಭಾಗ, ಹಿರಿಯೂರು ಚಿತ್ರದುರ್ಗ; ಮತ್ತು ಕಲ್ಲಪ್ಪ ಕಾರ್ಯನಿರ್ವಾಹಕ ಇಂಜಿನಿಯರ್ (ನಿವೃತ್ತ), ಕರ್ನಾಟಕ ನೀರಾವರಿ ನಿಗಮ ನಿಯಮಿತ, ವಿ.ವಿ.ಸಾಗರ ಉಪವಿಭಾಗ, ಹಿರಿಯೂರು ಚಿತ್ರದುರ್ಗ; ಇವರುಗಳ ವಿರುದ್ಧ ಇಲಾಖಾ ವಿಚಾರಣೆಗೆ ವಹಿಸಲು ಮಾಡಿರುವ ಶಿಫಾರಸ್ಸುನ್ನು ಕೈಬಿಡಲು ಸಚಿವ ಸಂಪುಟ ಅನುಮೋದಿಸಿದೆ.
ಪ್ರಕರಣವು 2014-15ನೇ ಸಾಲಿನಲ್ಲಿ ನಡೆದಿರುವುದರಿಂದ ಈಗಾಗಲೇ 08 ವರ್ಷಗಳು ಗತಿಸಿ ಹೋಗಿರುವುದರಿಂದ 04 ವರ್ಷ ಮೀರಿರುವ ಪ್ರಕರಣಗಳಿಗೆ ಇಲಾಖಾ ವಿಚಾರಣೆ ನಡೆಸಲು ಅವಕಾಶವಿಲ್ಲದಿರುವುದರಿಂದ ಪ್ರಕರಣವನ್ನು ಕೈಬಿಡಲು ಪ್ರಸ್ತಾಪಿಸಲಾಗಿತ್ತು.