ಹಾವೇರಿ : ಸಂಘರ್ಷದಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಕೇಂದ್ರ ಸರಕಾರದ ಜತೆ ಸಂಘರ್ಷ ನಡೆಸುವುದರಿಂದ ರಾಜ್ಯದ ಯಾವುದೇ ಸಮಸ್ಯೆ, ವಿವಾದ ಬಗೆಹರಿಯುವುದೂ ಇಲ್ಲ ಎಂದು ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಅಭಿಪ್ರಾಯಪಟ್ಟರು.
ಹಾವೇರಿ ಜಿಲ್ಲೆಯ ರಾಣಿಬೆನ್ನೂರುನಲ್ಲಿ ಕರ್ನಾಟಕ ವೈಭವ ವೈಚಾರಿಕ ಹಬ್ಬದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಭಾಷಣ ಮಾಡಿದರು.
ಕರ್ನಾಟಕದ ಅಭಿವೃದ್ಧಿಗೆ ನರೇಂದ್ರ ಮೋದಿ ಅವರ ಸರಕಾರ ಬದ್ಧವಾಗಿದೆ. ನಾನು ಸೇರಿದಂತೆ ಕೇಂದ್ರದಲ್ಲಿರುವ ರಾಜ್ಯ ಎಲ್ಲಾ ಸಚಿವರು ಕೆಲಸ ಮಾಡಲು ತಯಾರಿದ್ದಾರೆ. ಆದರೆ, ದಿನಕ್ಕೊಂದು ತಂಟೆ ತಕರಾರು ಮಾಡಿಕೊಂಡು ರಾಜ್ಯ ಸರಕಾರ ಅಮೂಲ್ಯ ಅವಕಾಶವನ್ನು ಹಾಳು ಮಾಡಿಕೊಳ್ಳುತ್ತಿದೆ ಎಂದು ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.
ರಾಷ್ಟ್ರಕವಿ ಕುವೆಂಪು ಅವರು ‘ಜಯಭಾರತ ಜನನಿಯ ತನುಜಾತೆ’ ಎಂದು ಬರೆದಿದ್ದಾರೆ. ಕುವೆಂಪು ಅವರು ಭಾರತವನ್ನು ತಾಯಿಯಾಗಿ ಮತ್ತು ಕರ್ನಾಟಕವನ್ನು ಆಕೆಯ ಮಗಳಂತೆ ಭಾವಿಸಿದ್ದಾರೆ. ಇಂತಹ ಮಹೋನ್ನತ ವಿಶಾಲ ದೃಷ್ಟಿಕೋನ ಅವರದ್ದು ಎಂಬುದನ್ನು ಈ ಒಂದು ಸಾಲಿನ ಮೂಲಕ ಅರ್ಥ ಮಾಡಿಕೊಳ್ಳಬಹುದು. ಆದರೆ, ರಾಜ್ಯ ಸರಕಾರ ಯಾವ ದಿಕ್ಕಿನಲ್ಲಿ ಆಲೋಚನೆ ಮಾಡುತ್ತಿದೆ ಎಂಬ ಬಗ್ಗೆ ಅವಲೋಕನ ಮಾಡಿಕೊಳ್ಳುವುದು ಉಚಿತ ಎಂದು ಸಚಿವರು ಅಭಿಪ್ರಾಯಪಟ್ಟರು.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನಕ್ಕೆ ಅತಿ ಹೆಚ್ಚು ಗೌರವ ಸಲ್ಲುತ್ತಿದೆ. ಆದರೆ, ಕೆಲವು ವಿಘಟಕ ಶಕ್ತಿಗಳು ಇಲ್ಲಸಲ್ಲದ ಅಪಪ್ರಚಾರ ನಡೆಸುತ್ತಿವೆ. ರಾಷ್ಟ್ರದ ಹಿತದೃಷ್ಟಿಯಿಂದ ಇದು ಒಳ್ಳೆಯದಲ್ಲ ಎಂದು ಕುಮಾರಸ್ವಾಮಿ ಅವರು ಪ್ರತಿಪಾದಿಸಿದರು.
ನರೇಂದ್ರ ಮೋದಿ ಅವರ ಆಡಳಿತದಲ್ಲಿ ದೇಶದ ಪ್ರತಿಯೊಂದು ರಾಜ್ಯವೂ ಸಮತೋಲಿತವಾಗಿ ಅಭಿವೃದ್ಧಿ ಹೊಂದುತ್ತಿದೆ. ಈಶಾನ್ಯ ರಾಜ್ಯಗಳಲ್ಲಿ ಬಹುದೊಡ್ಡ ಪ್ರಗತಿಯ ಪರ್ವವೇ ಆರಂಭವಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಮೋದಿ ಅವರು ಆ ರಾಜ್ಯಗಳಿಗೆ ಸುಮಾರು ಐದೂವರೆ ಲಕ್ಷ ಕೋಟಿಗೂ ಹೆಚ್ಚು ಅನುದಾನ ನೀಡಿದ್ದಾರೆ ಎಂದು ಕೇಂದ್ರ ಸಚಿವರು ಒತ್ತಿ ಹೇಳಿದರು.
ಭಾರತ ಎಲ್ಲಾ ಕ್ಷೇತ್ರಗಳಲ್ಲಿಯೂ ವೇಗವಾಗಿ ಬೆಳೆಯುತ್ತಿದೆ. ಆದರೆ, ಮನುಷ್ಯ ಸಂಬಂಧಗಳು ಅಳಿಯುತ್ತಿವೆ. ಇದು ನಿಜಕ್ಕೂ ನೋವಿನ ಸಂಗತಿ. ಕರ್ನಾಟಕ ವೈಭವದಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡಲಿ ಎಂದು ಆಶಯ ವ್ಯಕ್ತಪಡಿಸಿದರು.
ಹರಿಹರದ ಶ್ರೀ ಪಂಚಮಸಾಲಿ ಗುರುಪೀಠದ ಶ್ರೀ ವಚನಾನಂದ ಮಹಾಸ್ವಾಮೀಜಿ ಅವರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಖ್ಯಾತ ಹಿಂದೂಸ್ತಾನಿ ವಿದ್ವಾಂಸರಾದ ಸಂಗೀತಾ ಕಟ್ಟಿ ಅವರಿಗೆ ಸರ್ವಜ್ಞ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾತೆ ಮಂಜಮ್ಮ ಜೋಗತಿ, ಪ್ರಜ್ಞಾವಾಹದ ಸಂಯೋಜಕ ರಘುನಂದನ, ಪರಿವರ್ತನ ಸಂಘಟನೆಯ ಡಾ. ನಾರಾಯಣ ಪವಾರ, ಪ್ರಾಧ್ಯಾಪಕಿ ವಿಜಯಲಕ್ಷ್ಮಿ ಗೇಟಿ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.
ರಾಜ್ಯ ಸರಕಾರವು ಬೆಲೆ ಏರಿಕೆ, ದರ ಹೆಚ್ಚಳದ ಅಭಿಯಾನವನ್ನೇ ಕೈಗೊಂಡಿದೆ: MLC ಎನ್.ರವಿಕುಮಾರ್
BREAKING : ಹುಬ್ಬಳ್ಳಿಯಲ್ಲಿ ನಟೋರಿಯಸ್ ರೌಡಿಶೀಟರ್ `ಸೈಂಟಿಸ್ಟ್ ಮಂಜ್ಯಾ’ ಸೇರಿ ಮೂವರು ಅರೆಸ್ಟ್.!