ಬೆಂಗಳೂರು: ಯುವ ಜನತಾದಳ ಕಾರ್ಯಕರ್ತರು ಪಕ್ಷ ಸಂಘಟನೆಯ ಜತೆಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮಾಡಬೇಕು ಹಾಗೂ ಜನಪರ ಹೋರಾಟಗಳನ್ನು ನಡೆಸಬೇಕೆಂದು ಜೆಡಿಎಸ್ ನಗರ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಹೆಚ್.ಎಂ. ರಮೇಶ್ ಗೌಡ ಹೇಳಿದರು.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಕರೆಯಲಾಗಿದ್ದ ಬೆಂಗಳೂರು ನಗರದ ಯುವ ಘಟಕದ ಪದಾಧಿಕಾರಿಗಳು, ವಿಧಾನಸಭಾ ಕ್ಷೇತ್ರ ಅಧ್ಯಕ್ಷರು ಹಾಗೂ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು ಅವರು.
ರಾಜ್ಯ ಸರ್ಕಾರ ಅಕ್ರಮಗಳಲ್ಲಿ ನಿರತವಾಗಿದ್ದು, ಜನದ್ರೋಹಿ ಆಡಳಿತ ನಡೆಸುತ್ತಿದೆ. ದಿನನಿತ್ಯವೂ ಜನರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಯುವ ಜನತಾದಳ ಕಾರ್ಯಕರ್ತರು ಕೆಚ್ಚೆದೆಯಿಂದ ಹೋರಾಟ ನಡೆಸಬೇಕು ಎಂದು ಅವರು ಹೇಳಿದರು.
ತನ್ನ ವಿರುದ್ಧ ಹೋರಾಟ ನಡೆಸುವವರ ವಿರುದ್ಧ ಸರ್ಕಾರ ಕೇಸುಗಳನ್ನು ಹಾಕಿ ಹೆದರಿಸುವ ಕೆಲಸ ಮಾಡುತ್ತಿದೆ. ಹೆದರಿಸಿ ಬೆದರಿಸುವುದನ್ನು ಮಾಡುತ್ತಿದೆ. ನನ್ನ ವಿರುದ್ಧವೂ ಸರ್ಕಾರ ಕೇಸು ಹಾಕುವ ರಾಜಕೀಯ ಮಾಡುತ್ತಿದೆ. ಇದಕ್ಕೆಲ್ಲ ಹೆದರಿ ಕೂತರೆ ಉಪಯೋಗವಿಲ್ಲ. ಈ ಸರ್ಕಾರಕ್ಕೆ ತಿರುಗೇಟು ಕೊಡಬೇಕು ಎಂದು ರಮೇಶ್ ಗೌಡ ಹೇಳಿದರು.
ಈ ಸಭೆಯಲ್ಲಿ ಮಾಜಿ ಶಾಸಕರಾದ ಕೆ.ಎ.ತಿಪ್ಪೇಸ್ವಾಮಿ, ಬೆಂಗಳೂರು ನಗರ ಜಿಲ್ಲಾ ಮಹಿಳಾ ವಿಭಾಗದ ಅಧ್ಯಕ್ಷೆ ಶೈಲಾ ಸಂತೋಜಿ ರಾವ್, ಬೆಂಗಳೂರು ನಗರದ ಕಾರ್ಯಾಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಧ್ಯಕ್ಷ ಪ್ರವೀಣ್ ಕುಮಾರ್, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಧ್ಯಕ್ಷ ವಿ. ನಾಗೇಶ್ವರರಾವ್, ಯುವ ಘಟಕದ ಕಾರ್ಯಾಧ್ಯಕ್ಷ ಸುಗಮ್ ಗೌಡ, ಬೆಂಗಳೂರು ನಗರ ವಿಭಾಗಗಳ ಅಧ್ಯಕ್ಷರುಗಳಾದ ಅಫ್ರೋಜ್ ಬೇಗ್ ಫಣಿರಾಜ್ ಹಿರಿಯಣ್ಣ ಗೌಡ, ಎಂ.ಗೋಪಾಲ, ಜಿ.ವೇಲು, ಪಿ.ಮಹೇಶ್, ವಿಧಾನಸಭಾ ಕ್ಷೇತ್ರ ಅಧ್ಯಕ್ಷರುಗಳಾದ ಎಂ.ವೆಂಕಟಸ್ವಾಮಿ, ಬಿ.ಆರ್. ಪ್ರಕಾಶ, ವೇಣುಗೋಪಾಲ್, ಆರ್.ಕುಮಾರ್, ಗಣೇಶ್, ಟಿ.ಶಿವಕುಮಾರ್ ಹಾಗೂ ಯುವ ಘಟಕದ ಮುಖಂಡರು, ವಿಧಾನಸಭಾ ಕ್ಷೇತ್ರ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.