ಬೆಂಗಳೂರು: ಮುಂಬರುವ ಯುಗಾದಿ ಮತ್ತು ರಂಜಾನ್ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ಮೈಸೂರು ಮತ್ತು ವಿಜಯಪುರ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲು ಕಾರ್ಯಾಚರಣೆಗೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ವಿಶೇಷ ರೈಲು ಸೇವೆಯ ವಿವರಗಳು ಈ ಕೆಳಗಿನಂತಿವೆ:
ಈ ಬಗ್ಗೆ ಮೈಸೂರು ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ ಅವರು ಮಾಹಿತಿ ನೀಡಿದ್ದು, ರೈಲು ಸಂಖ್ಯೆ 06567 ಮೈಸೂರು-ವಿಜಯಪುರ ವಿಶೇಷ ಎಕ್ಸ್ ಪ್ರೆಸ್ ರೈಲು ಮಾ.28ರಂದು ಸಂಜೆ 7.10ಕ್ಕೆ ಮೈಸೂರಿನಿಂದ ಹೊರಟು, ಮರುದಿನ ಮಧ್ಯಾಹ್ನ 2.05ಕ್ಕೆ ವಿಜಯಪುರ ತಲುಪಲಿದೆ ಎಂದಿದ್ದಾರೆ.
ರೈಲು ಸಂಖ್ಯೆ 06568 ವಿಜಯಪುರ – ಮೈಸೂರು ವಿಶೇಷ ಎಕ್ಸ್ ಪ್ರೆಸ್ ರೈಲು ಮಾ.31ರಂದು ಸಂಜೆ 7.00 ಗಂಟೆಗೆ ವಿಜಯಪುರದಿಂದ ಹೊರಟು, ಮರುದಿನ ಮಧ್ಯಾಹ್ನ 2.20ಗಂಟೆಗೆ ಮೈಸೂರು ನಿಲ್ದಾಣಕ್ಕೆ ಆಗಮಿಸಲಿದೆ ಎಂದು ಹೇಳಿದ್ದಾರೆ.
ಈ ರೈಲು ಎರಡೂ ಮಾರ್ಗಗಳಲ್ಲಿ ಮಂಡ್ಯ, ಕೆಂಗೇರಿ, ಕೆಎಸ್ಆರ್ ಬೆಂಗಳೂರು, ಯಶವಂತಪುರ, ತುಮಕೂರು, ಅರಸೀಕೆರೆ, ಬೀರೂರು, ಚಿಕ್ಕಜಾಜೂರು, ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ ಕಂಟೋನ್ಮೆಂಟ್, ತೋರಣಗಲ್ಲು, ಹೊಸಪೇಟೆ, ಕೊಪ್ಪಳ, ಗದಗ, ಬದಾಮಿ, ಬಾಗಲಕೋಟೆ ಮತ್ತು ಆಲಮಟ್ಟಿ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಈ ರೈಲು 3 ಎಸಿ ಟು ಟೈರ್, 6 ಎಸಿ ತ್ರಿ ಟೈರ್, 10 ಸ್ಲೀಪರ್ ಕ್ಲಾಸ್, 2 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಎಸ್ಎಲ್ಆರ್ / ಡಿ ಬೋಗಿಗಳನ್ನು ಒಳಗೊಂಡಿರುತ್ತದೆ ಎಂದಿದ್ದಾರೆ.
ಕಾಯ್ದಿರಿಸುವಿಕೆ, ಆಗಮನ ಮತ್ತು ನಿರ್ಗಮನ ಸಮಯ ಮತ್ತು ಹೆಚ್ಚಿನ ವಿವರಗಳಿಗಾಗಿ, ಪ್ರಯಾಣಿಕರು ಅಧಿಕೃತ ರೈಲ್ವೆ ವೆಬ್ ಸೈಟ್ ಗೆ ಭೇಟಿ ನೀಡಿ ಅಥವಾ ಹತ್ತಿರದ ರೈಲ್ವೆ ಬುಕಿಂಗ್ ಕೌಂಟರ್ಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂಬುದಾಗಿ ಹೇಳಿದ್ದಾರೆ.