ಬೆಂಗಳೂರು: ಕೆಎಸ್ಆರ್ಟಿಸಿ ಕೇಂದ್ರ ಕಚೇರಿಯಲ್ಲಿ ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ನಿಗಮದ ನೂತನ 45 ಕರ್ನಾಟಕ ಸಾರಿಗೆ ಹಾಗೂ 70 ಪಲ್ಲಕ್ಕಿ (ಸ್ಲೀಪರ್) ಬಸ್ಸುಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಮಹಿಳಾ ಸಾಧಕಿಯರಿಗೆ ಗೌರವ:
ಕಾರ್ಯಕ್ರಮದಲ್ಲಿ ಮಾತನಾಡಿದ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು, ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆಯರು ಇಂದು ಮಹತ್ತರ ಸಾಧನೆ ಮಾಡುತ್ತಿದ್ದಾರೆ. ಇಸ್ರೋ ಮತ್ತು ಸಿ.ಎಸ್.ಐ.ಆರ್-ಎನ್ಎಎಲ್ ಸಂಸ್ಥೆಯಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿ, ವಿಮಾನಗಳ ಸುರಕ್ಷಿತ ಲ್ಯಾಂಡಿಂಗ್ಗಾಗಿ ‘ದೃಷ್ಟಿ’ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ಪದ್ಮಶ್ರೀ ಪುರಸ್ಕೃತ ಡಾ. ಶುಭ ವಿ. ಅವರ ಸಾಧನೆಯನ್ನು ಕೊಂಡಾಡಿದರು.

ಸಾರಿಗೆ ನಿಗಮದಲ್ಲಿ ಮಹಿಳಾ ಶಕ್ತಿ:
-
ಉದ್ಯೋಗಾವಕಾಶ: ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆಗಳಲ್ಲಿ ಒಟ್ಟು 1.04 ಲಕ್ಷ ಸಿಬ್ಬಂದಿಗಳಿದ್ದು, ಇವರಲ್ಲಿ 8,956 ಮಹಿಳಾ ಸಿಬ್ಬಂದಿಗಳು ವಿವಿಧ ವಿಭಾಗಗಳಲ್ಲಿ (ನಿರ್ವಾಹಕರು, ತಾಂತ್ರಿಕ ಮತ್ತು ಆಡಳಿತ) ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
-
ಶ್ರೇಷ್ಠ ಪ್ರಶಸ್ತಿ: ಉತ್ತಮ ಕಾರ್ಯಕ್ಷಮತೆ ತೋರಿದ ನಿಗಮದ 17 ವಿಭಾಗಗಳ ಒಟ್ಟು 46 ಮಹಿಳಾ ಸಿಬ್ಬಂದಿಗಳಿಗೆ (ತಾಂತ್ರಿಕ-19, ನಿರ್ವಾಹಕರು-15, ಪೇದೆಗಳು-12) ಈ ಸಂದರ್ಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
-
ಶಕ್ತಿ ಯೋಜನೆ: ಮಹಿಳಾ ಸಬಲೀಕರಣದ ಮೈಲಿಗಲ್ಲಾದ ‘ಶಕ್ತಿ’ ಯೋಜನೆಯಡಿ ಇದುವರೆಗೆ (ಮಾರ್ಚ್ 12, 2026 ರವರೆಗೆ) ದಾಖಲೆ ಪ್ರಮಾಣದ 688.83 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.
ಹೊಸ ಬಸ್ಸುಗಳ ಸಂಚಾರ ಮತ್ತು ಮಾರ್ಗಗಳು:
ಇಂದು ಲೋಕಾರ್ಪಣೆಗೊಂಡ 70 ಹವಾನಿಯಂತ್ರಣ ರಹಿತ ಸ್ಲೀಪರ್ ಪಲ್ಲಕ್ಕಿ ಬಸ್ಸುಗಳು ಮಂಗಳೂರು, ಉಡುಪಿ, ಧರ್ಮಸ್ಥಳ, ಮೈಸೂರು, ಹಂಪಿ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಿಗೆ ಹಾಗೂ ಹೈದರಾಬಾದ್, ಚೆನ್ನೈ, ಪಣಜಿ, ಪಾಂಡಿಚೇರಿ, ಮಧುರೈ ಮುಂತಾದ ಹೊರರಾಜ್ಯದ ಪ್ರಮುಖ ಕೇಂದ್ರಗಳಿಗೆ ಕಾರ್ಯಾಚರಣೆ ನಡೆಸಲಿವೆ.

ಮುಂದಿನ ಯೋಜನೆಗಳು:
ಸಾರ್ವಜನಿಕ ಸಾರಿಗೆಯನ್ನು ಮತ್ತಷ್ಟು ಬಲಪಡಿಸಲು ಮುಂದಿನ ಏಪ್ರಿಲ್, ಮೇ ಮತ್ತು ಜೂನ್ ತಿಂಗಳುಗಳಲ್ಲಿ ನಿಗಮಕ್ಕೆ ಒಟ್ಟು 805 ಹೊಸ ಕರ್ನಾಟಕ ಸಾರಿಗೆ ಹಾಗೂ ನಗರ/ಗ್ರಾಮಾಂತರ ವಾಹನಗಳು ಸೇರ್ಪಡೆಗೊಳ್ಳಲಿವೆ ಎಂದು ಸಚಿವರು ತಿಳಿಸಿದರು.
ಮಹಿಳಾ ದಿನಾಚರಣೆಯ ಈ ಸಂಭ್ರಮವು ಸಾರಿಗೆ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಮತ್ತು ಪ್ರಯಾಣಿಕರ ಸೌಲಭ್ಯಗಳ ಹೆಚ್ಚಳಕ್ಕೆ ಸಾಕ್ಷಿಯಾಯಿತು.

ಮಹಿಳಾ ಸ್ನೇಹಿ ಉಪಕ್ರಮಗಳು:
ಮಹಿಳೆಯರಿಗೆ ಎಲ್ಲಾ ರೀತಿಯಿಂದಲೂ ಅನುಕೂಲ ಕಲ್ಪಿಸಲಾಗುತ್ತಿದೆ, ಮಾರ್ಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಿರ್ವಾಹಕಿಯರಿಗೂ ಕೂಡ ಮಾರ್ಗ ನಿಯೋಜನೆಯಲ್ಲಿ ಪ್ರಾಶಸ್ತ್ಯ ನೀಡಲಾಗುತ್ತಿದೆ.
ಕಳೆದ ಎರಡುವರೆ ವರ್ಷಗಳಲ್ಲಿ ಕರಾರಸಾ ನಿಗಮದಲ್ಲಿ 77 ವಿವಿಧ ಹುದ್ದೆಗಳಿಗೆ ಮಹಿಳೆಯರನ್ನು ಅನುಕಂಪದ ಆಧಾರದ ಮೇಲೆ (ಕಿರಿಯ ಸಹಾಯಕಿ – 44, ಕರಾಸಾ ಪೇದೆ-30 ಮತ್ತು ತಾಂತ್ರಿಕ ಸಹಾಯಕರು -02, ನಿರ್ವಾಹಕರು-1) ನೇಮಕಾತಿ ಮಾಡಿಕೊಳ್ಳಲಾಗಿದೆ.
ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳಾ ನೌಕರರಿಗೆ ಆಗುವ ಲೈಂಗಿಕ ಕಿರುಕುಳವನ್ನು ತಡೆಯಲು Sexual Harassment of Women at Workplace (Prevention, Prohibition & Redressal) Act-2013 ರನ್ವಯ ಮಹಿಳಾ ನೌಕರರ ಆಂತರಿಕ ದೂರು ಸಮಿತಿಯನ್ನು ರಚಿಸಲಾಗಿದೆ, ಲಿಂಗ ಸಂವೇದಿ ಅರಿವು ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ.
ನಿಗಮದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಗಳಿಗೆ ಪ್ರತಿ ಮಾಹೆಯಲ್ಲಿ ಒಂದು ದಿನದ ಋತುಚಕ್ರ ರಜೆ ಮಂಜೂರು ಮಾಡಲಾಗುತ್ತಿದೆ.
ಮಹಿಳಾ ನೌಕರರಿಗೆ ರಾಜ್ಯ ಸರ್ಕಾರದ ಮಾದರಿಯಲ್ಲಿ 180 ದಿನಗಳ ಹೆರಿಗೆ ರಜೆಯನ್ನು ನೀಡಲಾಗುತ್ತಿದೆ.
ಸರ್ಕಾರದ ಮಾದರಿಯಲ್ಲಿ ಕಿರಿಯ ಮಗುವಿಗೆ 18 ವರ್ಷ ತಲುಪುವವರೆಗೆ ಒಟ್ಟು ಸೇವಾವಧಿಯಲ್ಲಿ ಗರಿಷ್ಠ ಆರು ತಿಂಗಳವರೆಗೆ “ಶಿಶುಪಾಲನಾ ರಜೆ” ಯನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಮಹಿಳಾ ನೌಕರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮಗುವಿಗೆ ಮೂರು ವರ್ಷ ತುಂಬುವವರೆಗೆ ರೂ.1250/- ಗಳನ್ನು ಮಾಸಿಕ ಶಿಶು ಪಾಲನಾ ಭತ್ಯೆ ನೀಡಲಾಗುತ್ತಿದೆ. ಈ ಸೌಲಭ್ಯವನ್ನು ಒಟ್ಟಾರೆ 160 ಮಹಿಳಾ ಸಿಬ್ಬಂದಿಗಳು ಪಡೆಯುತ್ತಿದ್ದಾರೆ.

ಬುದ್ದಿಮಾಂದ್ಯ/ಅಂಗವಿಕಲ ಮಕ್ಕಳನ್ನು ನೋಡಿಕೊಳ್ಳಲು ಮಹಿಳಾ ನೌಕರರಿಗೆ ಒಟ್ಟು 730 ದಿವಸಗಳ “ಶಿಶು ಪಾಲನಾ ರಜೆ”ಯನ್ನು ವೇತನಸಹಿತವಾಗಿ ನೀಡಲಾಗುತ್ತಿದೆ.
ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಗಳಿಗೆ ಪ್ರತ್ಯೇಕ ವಿಶ್ರಾಂತಿ ಗೃಹ ವ್ಯವಸ್ಥೆ ಕಲ್ಪಿಸಲಾಗಿದೆ.
ವಿದ್ಯಾಚೇತನ ಯೋಜನೆ ಯಡಿ, 1747 ಹೆಣ್ಣು ಮಕ್ಕಳಿಗೆ (ಸಿಬ್ಬಂದಿಗಳ ಮಕ್ಕಳು) (2022-23 ರಿಂದ 2025-26) ರೂ.88,54,500/- ವಿದ್ಯಾರ್ಥಿ ವೇತನ ನೀಡಲಾಗಿದೆ. (ಪಿ.ಹೆಚ್.ಡಿ. ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ-2, ವೈದ್ಯಕೀಯ-55, ಮಾಸ್ಟರ್ ಡಿಗ್ರಿ-139, ಡಿಗ್ರಿ-920, ಡಿಪ್ಲೋಮೋ-43)
”ಕೆ.ಎಸ್ಆರ್.ಟಿ.ಸಿ ಆರೋಗ್ಯ” ಯೋಜನೆ ಅಡಿಯಲ್ಲಿ 92,945 ಮಹಿಳಾ ಸಿಬ್ಬಂದಿಗಳು ಹಾಗೂ ಅವರ ಅವಲಂಬಿತರು ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯವನ್ನು ಪಡೆದಿದ್ದು, ಚಿಕಿತ್ಸಾ ವೆಚ್ಚವು ಅಂದಾಜು ರೂ. 29.87 ಕೋಟಿಗಳಾಗಿರುತ್ತದೆ. (6167- ಮಹಿಳಾ ಸಿಬ್ಬಂದಿಗಳು, ಪತ್ನಿ- 44,009, ತಾಯಿ – 26,498 ಹಾಗೂ ಮಗಳು -16,271)

ಕೆ ಎಸ್ ಆರ್ ಟಿ ಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಮಾತನಾಡಿ, ಪ್ರಸ್ತುತ ಎಲ್ಲಾ ರಂಗಗಳಲ್ಲಿಯೂ ಮಹಿಳೆಯರು ಅಭಿವೃದ್ದಿ ಹೊಂದುತ್ತಿರುವುದು ಸ್ವಾಗತಾರ್ಹ. ತಮ್ಮ ತಮ್ಮ ಮಕ್ಕಳಿಗೆ ಉತ್ತಮವಾದ ವಿದ್ಯಾಬ್ಯಾಸವನ್ನು ದೊರಕಿಸಿಕೊಟ್ಟು, ಸಬಲರನ್ನಾಗಿ ಮಾಡಬೇಕು ಎಂದು ತಿಳಿಸಿದರು. ಶಿಕ್ಷಣ ಒಂದೇ ಮಹಿಳೆಯರನ್ನು ಮತ್ತಷ್ಟು ಎತ್ತರಕ್ಕೆ ಕೊಂಡ್ಯೊಯಲು ಸಾಧನವಾಗಿದೆ ಎಂದು ತಿಳಿಸಿದರು.
ಈ ಶುಭ ಸಮಾರಂಭದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ಡಾ. ಶುಭಾ ವಿ ರವರನ್ನು ಗೌರವಿಸಿ ಸನ್ಮಾನಿಸುತ್ತಿರುವುದು ಹೆಮ್ಮೆಯ ವಿಷಯ. ಪ್ರಸಕ್ತ ವರ್ಷದ ಘೋಷವಾಕ್ಯವಾದ ಹಕ್ಕುಗಳು ನ್ಯಾಯ ಮತ್ತು ಕ್ರಮ, Give to Gain ಅಭಿಯಾನದಡಿಯಲ್ಲಿ ಮಹಿಳೆಯರಿಗೆ ಸಮನಾದ ಹಕ್ಕನ್ನು ನೀಡಿ, ಪ್ರೋತ್ಸಾಹಿ ಗೌರವಿಸಬೇಕೆಂದು ನಿರ್ದೇಶಕರು (ಸಿಬ್ಬಂದಿ ಮತ್ತು ಜಾಗೃತ) ರಾದ ಗಾಯಿತ್ರಿ ಕೆ.ಎಂ ತಿಳಿಸಿದರು.
ಈ ಸಂದರ್ಭದಲ್ಲಿ ಕರಾರಸಾ ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
BIG UPDATE: KSRTC ಬಸ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು,
ಪಿಎಂ ಕಿಸಾನ್ 22ನೇ ಕಂತಿನ ಹಣ ಬಿಡುಗಡೆ: ನಿಮ್ಮ ಖಾತೆಗೆ ಬಂದಿದ್ಯಾ ಅಂತ ಹೀಗೆ ಚೆಕ್ ಮಾಡಿ








