ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು 2026ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ-1ರ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಗೆ ದಿನಾಂಕ ನಿಗದಿಪಡಿಸಿದೆ. ಏಪ್ರಿಲ್ 8ರಿಂದ ರಾಜ್ಯಾದ್ಯಂತ ಮೌಲ್ಯಮಾಪನ ಕಾರ್ಯ ಆರಂಭವಾಗಲಿದ್ದು, ಈ ಬಾರಿ ಮೌಲ್ಯಮಾಪಕರಿಗೆ ಸಿಗುವ ಗೌರವ ಸಂಭಾವನೆಯನ್ನು ಶೇ. 5ರಷ್ಟು ಹೆಚ್ಚಿಸಲಾಗಿದೆ.
ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳ ಒಟ್ಟು 262 ಕೇಂದ್ರಗಳಲ್ಲಿ ಏಕಕಾಲಕ್ಕೆ ಮೌಲ್ಯಮಾಪನ ಕಾರ್ಯ ನಡೆಯಲಿದೆ.ಉಪ ಮುಖ್ಯ ಮೌಲ್ಯಮಾಪಕರು ಏಪ್ರಿಲ್ 7ರಂದು ಹಾಜರಾಗಬೇಕು. ಸಹಾಯಕ ಮೌಲ್ಯಮಾಪಕರು ಏಪ್ರಿಲ್ 8ರಂದು ಕೇಂದ್ರಗಳಿಗೆ ವರದಿ ಮಾಡಿಕೊಳ್ಳಬೇಕು. ತೃತೀಯ ಭಾಷೆಗಳಾದ ಹಿಂದಿ ಮತ್ತು ಸಂಸ್ಕೃತ ವಿಷಯಗಳ ಮೌಲ್ಯಮಾಪನವು ಏಪ್ರಿಲ್ 9ರಿಂದ ಆರಂಭವಾಗಲಿದೆ.
ಮೌಲ್ಯಮಾಪನ ಕಾರ್ಯ ಮುಗಿಸಲು ಮೌಲ್ಯಮಾಪಕರಿಗೆ ಏಪ್ರಿಲ್ 18ರವರೆಗೆ ಗಡುವು ನೀಡಲಾಗಿದೆ. ಮೌಲ್ಯಮಾಪನ ಪ್ರಕ್ರಿಯೆ ಸಂಪೂರ್ಣಗೊಂಡ ನಂತರವಷ್ಟೇ ಫಲಿತಾಂಶ ಪ್ರಕಟಿಸಲಾಗುವುದು ಎಂದು ಮಂಡಳಿಯ ನಿರ್ದೇಶಕ ಗೋಪಾಲಕೃಷ್ಣ ಹೆಚ್.ಎನ್. ತಿಳಿಸಿದ್ದಾರೆ.
ಗೌರವ ಸಂಭಾವನೆ ಹೆಚ್ಚಳದ ವಿವರ (ರೂಪಾಯಿಗಳಲ್ಲಿ):
ಈ ಬಾರಿ ಮೌಲ್ಯಮಾಪನ ಕಾರ್ಯದಲ್ಲಿ ತೊಡಗುವ ವಿವಿಧ ಹಂತದ ಅಧಿಕಾರಿಗಳ ಸಂಭಾವನೆಯನ್ನು ಹೆಚ್ಚಿಸಲಾಗಿದ್ದು, ಅದರ ವಿವರ ಇಂತಿದೆ:
| ಹುದ್ದೆ | ಕಳೆದ ವರ್ಷ | ಈ ಬಾರಿ (2026) |
|---|---|---|
| ಮುಖ್ಯ ಅಧೀಕ್ಷಕರು | 240 | 250 |
| ಉಪ ಅಧೀಕ್ಷಕರು | 229 | 239 |
| ಕಸ್ಟೋಡಿಯನ್ | 216 | 225 |
| ಕೊಠಡಿ ಮೇಲ್ವಿಚಾರಕ | 281 | 289 |
| ಸ್ಥಾನಿಕ ಜಾಗೃತ ದಳ | 1032 | 1114 |







