ಬೆಂಗಳೂರು: ಮೃತ ವ್ಯಕ್ತಿಗಳ ಹೆಸರಿನಲ್ಲಿರುವ ಆಸ್ತಿಯನ್ನು (ಜಮೀನು) ಅವರ ವಾರಸುದಾರರ ಹೆಸರಿಗೆ ವರ್ಗಾಯಿಸುವ ‘ಪೌತಿ ಖಾತೆ’ ಪ್ರಕ್ರಿಯೆಯನ್ನು ಕಂದಾಯ ಇಲಾಖೆ ಮತ್ತಷ್ಟು ಸರಳೀಕರಣಗೊಳಿಸಿದೆ. ಇ-ಪೌತಿ ತಂತ್ರಾಂಶದಲ್ಲಿ ಉಂಟಾಗುತ್ತಿದ್ದ ಗೊಂದಲಗಳನ್ನು ನಿವಾರಿಸಲು ಮತ್ತು ರೈತರಿಗೆ ತ್ವರಿತವಾಗಿ ಸೇವೆ ಒದಗಿಸಲು ಇಲಾಖೆಯು 13 ಅಂಶಗಳ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಜಮೀನಿನ ಮೂಲ ಮಾಲೀಕರು ಮರಣ ಹೊಂದಿದ ನಂತರ ವಾರಸುದಾರರ ಹೆಸರಿಗೆ ಖಾತೆ ಬದಲಾವಣೆಯಾಗದಿದ್ದರೆ ಬ್ಯಾಂಕ್ ಸಾಲ, ಪ್ರಕೃತಿ ವಿಕೋಪದ ಪರಿಹಾರ, ಬೆಳೆ ವಿಮೆ ಹಾಗೂ ‘ಪಿಎಂ ಕಿಸಾನ್’ ಯೋಜನೆಯ ಸೌಲಭ್ಯಗಳು ಸಿಗುವುದಿಲ್ಲ. ಈ ಸಮಸ್ಯೆಯನ್ನು ತಪ್ಪಿಸಲು ಮ್ಯುಟೇಶನ್ ಪ್ರಕ್ರಿಯೆಯನ್ನು ಇದೀಗ ಸುಲಭಗೊಳಿಸಲಾಗಿದೆ.
ಹೊಸ ಮಾರ್ಗಸೂಚಿಯ ಪ್ರಮುಖ ಅಂಶಗಳು:
ದಾಖಲೆಗಳ ಸಲ್ಲಿಕೆ: ಅಟಲ್ ಜೀ ಜನಸ್ನೇಹಿ ಕೇಂದ್ರದಿಂದ ಮರಣ ಪ್ರಮಾಣಪತ್ರ ಹಾಗೂ ವಂಶವೃಕ್ಷವನ್ನು ಪಡೆದು ತಂತ್ರಾಂಶದಲ್ಲಿ ನಮೂದಿಸಬೇಕು. ಒಂದು ವೇಳೆ ದಾಖಲೆಗಳಿಲ್ಲದಿದ್ದರೆ, ನೋಟರಿ ಸಮಕ್ಷಮ ಅಫಿಡವಿಟ್ ಸಲ್ಲಿಸಿ ವಂಶವೃಕ್ಷ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ವಿಡಿಯೋ ಮಹಜರು ಕಡ್ಡಾಯ: ಡೆತ್ ಸರ್ಟಿಫಿಕೇಟ್ ಇಲ್ಲದ ಸಂದರ್ಭದಲ್ಲಿ, ಆಧಾರ್ ಮತ್ತು ರೇಷನ್ ಕಾರ್ಡ್ ಪರಿಶೀಲಿಸಿ, ವಾರಸುದಾರರಿಂದ ಅಫಿಡವಿಟ್ ಪಡೆದು ಗ್ರಾಮ ಆಡಳಿತಾಧಿಕಾರಿಗಳು (VAO) ‘ವಿಡಿಯೋ ಮಹಜರು’ ಮಾಡಿ ಇ-ಪೌತಿ ತಂತ್ರಾಂಶದಲ್ಲಿ ಕಡ್ಡಾಯವಾಗಿ ಅಪ್ಲೋಡ್ ಮಾಡಬೇಕು.
ಗ್ರಾಮಸಭೆ ಮೂಲಕ ಪರಿಹಾರ: ಮರಣ ಪ್ರಮಾಣಪತ್ರ, ಆಧಾರ್, ಪಡಿತರ ಚೀಟಿ ಯಾವುದೂ ಇಲ್ಲದಿದ್ದರೆ, ಗ್ರಾಮಸ್ಥರ ಮಹಜರಿನೊಂದಿಗೆ ಕುಟುಂಬ ಸದಸ್ಯರ ನೋಟರಿ ಪ್ರಮಾಣಪತ್ರ ಮತ್ತು ಆಧಾರ್ ಪಡೆದು ಖಾತೆ ಮಾಡಿಕೊಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ರೈತರಿಗೆ ಸಿಗುವ ಪ್ರಮುಖ ವಿನಾಯಿತಿಗಳು:
ಶುಲ್ಕ ಮನ್ನಾ: ಇ-ಪೌತಿ ಖಾತೆ ಮಾಡಲು ವಿಧಿಸಲಾಗುತ್ತಿದ್ದ 35 ರೂ. ಮ್ಯುಟೇಶನ್ ಶುಲ್ಕವನ್ನು ಸಂಪೂರ್ಣವಾಗಿ ವಿನಾಯಿತಿ ಮಾಡಲಾಗಿದೆ.
15 ದಿನಗಳಲ್ಲಿ ಖಾತೆ: ಎಲ್ಲಾ ವಾರಸುದಾರರು ಆಧಾರ್ ಇ-ಕೆವೈಸಿ (e-KYC) ನೀಡಿದರೆ, ಕೇವಲ 15 ದಿನಗಳ ಒಳಗೆ ಖಾತೆ ವರ್ಗಾವಣೆಯಾಗಲಿದೆ.
ಪೂರ್ವ ನಕ್ಷೆ ಅಗತ್ಯವಿಲ್ಲ: ಇ-ಪೌತಿ ಖಾತೆಗೆ ಮ್ಯುಟೇಶನ್ ಪೂರ್ವ ನಕ್ಷೆ (11E Sketch) ಮಾಡಿಸುವ ಅಗತ್ಯವಿರುವುದಿಲ್ಲ.
ಪಾಲುಪಟ್ಟಿ: ಜಂಟಿ ಇದಿರು ವಿಭಾಗ ಅಥವಾ ಪಾಲುಪಟ್ಟಿ ಆಧಾರದ ಮೇಲೂ ಮ್ಯುಟೇಶನ್ಗೆ ಅವಕಾಶ ನೀಡಲಾಗಿದೆ.
ತಕರಾರು ಬಂದರೆ ಇತ್ಯರ್ಥ ಹೇಗೆ?
ಇ-ಪೌತಿಯಲ್ಲಿ ಹಕ್ಕು ಬದಲಾವಣೆಗೆ ನಮೂನೆ-12 ಮತ್ತು 21ನ್ನು ಹೊರಡಿಸಲಾಗುತ್ತಿದ್ದು, ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ ಇರುತ್ತದೆ.
ತಕರಾರುಗಳು ಬಂದರೆ ಅವುಗಳನ್ನು ತಹಶೀಲ್ದಾರ್ (ಗ್ರೇಡ್-1 ಮತ್ತು ಗ್ರೇಡ್-2) ಅವರು RRCMS ತಂತ್ರಾಂಶದ ಮೂಲಕ ನಿಯಮಾನುಸಾರ ಕೇವಲ ಒಂದು ತಿಂಗಳೊಳಗೆ ಇತ್ಯರ್ಥಪಡಿಸಬೇಕು.
ಒಬ್ಬರು ಒಪ್ಪದಿದ್ದರೂ ತಕರಾರು: ವಾರಸುದಾರರ ಪೈಕಿ ಯಾರಾದರೂ ಒಬ್ಬರು ಆಧಾರ್ ಇ-ಕೆವೈಸಿ ನೀಡಲು ನಿರಾಕರಿಸಿದರೆ, ಅದನ್ನು ತಂತ್ರಾಂಶದಲ್ಲಿ ‘ತಕರಾರು’ ಎಂದೇ ಪರಿಗಣಿಸಲಾಗುತ್ತದೆ. 15 ದಿನಗಳ ನೋಟಿಸ್ ಅವಧಿ ಮುಗಿದ ಬಳಿಕ ಪ್ರಕರಣವು ತಹಶೀಲ್ದಾರ್ ನ್ಯಾಯಾಲಯಕ್ಕೆ (RRCMS) ವರ್ಗಾವಣೆಯಾಗುತ್ತದೆ.
ವಿಚಾರಣೆ ಬಳಿಕವೂ ಜಂಟಿ ಪಹಣಿಗೆ ಒಮ್ಮತ ಮೂಡದಿದ್ದರೆ, ಪಹಣಿಯ ಕಾಲಂ 11ರಲ್ಲಿ ‘ಉತ್ತರಾಧಿಕಾರಿಗಳ ತಕರಾರು ಇದ್ದು, ಪೌತಿ ಖಾತೆಗೆ ಒಪ್ಪಿಲ್ಲ’ ಎಂದು ನಮೂದಿಸಲಾಗುತ್ತದೆ.
ಗ್ರಾಮ ಆಡಳಿತಾಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಆಧಾರ್ ಸೀಡಿಂಗ್ ಮಾಡುವಾಗಲೇ ಮೃತಪಟ್ಟವರನ್ನು ಗುರುತಿಸಿ ಇ-ಪೌತಿ ತಂತ್ರಾಂಶದಲ್ಲಿ ದಾಖಲಿಸುತ್ತಿದ್ದು, ಈ ಹೊಸ ಮಾರ್ಗಸೂಚಿಯಿಂದ ಲಕ್ಷಾಂತರ ರೈತ ಕುಟುಂಬಗಳಿಗೆ ಅನುಕೂಲವಾಗುವ ನಿರೀಕ್ಷೆಯಿದೆ.








