ಬೆಂಗಳೂರು: ರಾಜ್ಯದ ಲಕ್ಷಾಂತರ ರೈತರ ದಶಕಗಳ ಕಾಲದ ಕನಸನ್ನು ನನಸು ಮಾಡಲು ಸರ್ಕಾರ ಮುಂದಾಗಿದೆ. ದರಖಾಸ್ತು ಮೂಲಕ ಮಂಜೂರಾದ ಜಮೀನುಗಳ ಪೋಡಿ ಪ್ರಕ್ರಿಯೆಯನ್ನು ಅತ್ಯಂತ ಸರಳಗೊಳಿಸಲಾಗಿದ್ದು, ಇನ್ಮುಂದೆ ಕೇವಲ ಎರಡು ಪ್ರಮುಖ ದಾಖಲೆಗಳಿದ್ದರೂ ರೈತರು ಪೋಡಿ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ನನೆಗುದಿಗೆ ಬಿದ್ದಿದ್ದ ಸಮಸ್ಯೆಗೆ ಮುಕ್ತಿ
ರಾಜ್ಯದಲ್ಲಿ ಸುಮಾರು 73,390 ಸರ್ವೇ ನಂಬರ್ ಗಳಲ್ಲಿ ಸರ್ಕಾರಿ ಜಮೀನು ಮಂಜೂರಾಗಿದ್ದು, ಒಟ್ಟು 2.51 ಲಕ್ಷ ಫಲಾನುಭವಿಗಳಿದ್ದಾರೆ. ಇವರಲ್ಲಿ ಹೆಚ್ಚಿನವರು ಪೋಡಿ ಪ್ರಕ್ರಿಯೆ ವಿಳಂಬದಿಂದಾಗಿ ತಮ್ಮ ಜಮೀನಿನ ಪೂರ್ಣ ಮಾಲೀಕತ್ವ ಪಡೆಯಲು ಕಚೇರಿಗಳಿಗೆ ಅಲೆಯುತ್ತಿದ್ದರು. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ‘ಅಭಿಯಾನ’ ಮಾದರಿಯಲ್ಲಿ ಈ ಕಾರ್ಯವನ್ನು ಪೂರ್ಣಗೊಳಿಸಲು ತೀರ್ಮಾನಿಸಿದೆ.
ದಾಖಲೆಗಳ ಸಡಿಲಿಕೆ: ರೈತರಿಗೆ ನಿರಾಳ
ಹಿಂದಿನ ನಿಯಮದಂತೆ ಪೋಡಿ ಮಾಡಲು 5ದಾಖಲೆಗಳ ಅಗತ್ಯವಿತ್ತು. ನಂತರ ಅದನ್ನು ಮೂರು ದಾಖಲೆಗಳಿಗೆ ಇಳಿಸಲಾಗಿತ್ತು. ಆದರೆ, ಅನೇಕ ರೈತರಲ್ಲಿ ಮೂರು ದಾಖಲೆಗಳು ಲಭ್ಯವಿಲ್ಲದ ಕಾರಣ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಇದೀಗ ಸರ್ಕಾರ ಕನಿಷ್ಠ 2 ದಾಖಲೆಗಳಿದ್ದರೂ ಪೋಡಿ ಮಾಡಲು ಅನುಮತಿ ನೀಡಿದೆ. ಈ ವರ್ಷಾಂತ್ಯದೊಳಗೆ ಅಂದಾಜು 2 ಲಕ್ಷ ರೈತರಿಗೆ ದರಖಾಸ್ತು ಪೋಡಿ ಹಂಚುವ ಗುರಿ ಹೊಂದಿದೆ.








