ಬೆಂಗಳೂರು: ರಾಜ್ಯದ ರೈತರಿಗೆ ಮತ್ತು ಸಾರ್ವಜನಿಕರಿಗೆ ಪಹಣಿ (RTC) ತಿದ್ದುಪಡಿ ಪ್ರಕ್ರಿಯೆಯನ್ನು ಸುಲಭಗೊಳಿಸಲು ಕರ್ನಾಟಕ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. ‘ಕಂದಾಯ ಅದಾಲತ್’ ಕಾರ್ಯಕ್ರಮದ ಮೂಲಕ ಪಹಣಿ ತಿದ್ದುಪಡಿ ಮಾಡುವ ತಹಶೀಲ್ದಾರರ ಅಧಿಕಾರವನ್ನು ಡಿಸೆಂಬರ್ 31, 2026 ರವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಹಿಂದೆ ಇದ್ದ ಅಧಿಕಾರ ಅವಧಿಯು ಜೂನ್ 30, 2025ಕ್ಕೆ ಮುಕ್ತಾಯಗೊಳ್ಳಬೇಕಿತ್ತು. ಸಾರ್ವಜನಿಕರ ಹಿತದೃಷ್ಟಿಯಿಂದ ಇದನ್ನು ಈಗ 20-03-2026 ರಿಂದ 31-12-2026ರವರೆಗೆ ವಿಸ್ತರಿಸಲಾಗಿದೆ.
ವಿನಾಯಿತಿ ಇರುವ ಜಿಲ್ಲೆಗಳು: ಈ ಆದೇಶವು ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳನ್ನು ಹೊರತುಪಡಿಸಿ, ರಾಜ್ಯದ ಉಳಿದೆಲ್ಲಾ ಜಿಲ್ಲೆಗಳಿಗೆ ಅನ್ವಯವಾಗುತ್ತದೆ.
ಸರಿಪಡಿಸಬಹುದಾದ ತಪ್ಪುಗಳು:
ಪಹಣಿಯ ಕಾಲಂ ನಂ. 3 ಮತ್ತು 9ರಲ್ಲಿರುವ ವಿಸ್ತೀರ್ಣದ ವ್ಯತ್ಯಾಸಗಳು.
ಬೆಳೆ ವಿವರಗಳ ಇಂದೀಕರಣ ಮತ್ತು ಹೆಸರುಗಳಲ್ಲಿನ ಕಾಗುಣಿತ ತಪ್ಪುಗಳ ತಿದ್ದುಪಡಿ.
ಪಹಣಿಯಲ್ಲಿ ಇಂದೀಕರಣವಾಗದ ಪ್ರಕರಣಗಳ ವಿಲೇವಾರಿ.
ಕಟ್ಟುನಿಟ್ಟಿನ ಎಚ್ಚರಿಕೆ
ತಹಶೀಲ್ದಾರರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ಸರ್ಕಾರ ಎಚ್ಚರಿಸಿದೆ. ಒಂದು ವೇಳೆ ನಿಯಮಬಾಹಿರವಾಗಿ ನಡೆದುಕೊಂಡರೆ ಅಂತಹ ಅಧಿಕಾರಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (IPC) ಮತ್ತು ಕರ್ನಾಟಕ ಭೂ ಕಂದಾಯ ಕಾಯ್ದೆಯಡಿ ಶಿಸ್ತು ಕ್ರಮ ಜರುಗಿಸಲಾಗುವುದು.
ಅಧಿಕಾರಿಗಳಿಗೆ ಸೂಚನೆ:
ಪ್ರತಿ ವಾರ ಕಂದಾಯ ಅದಾಲತ್ ಪ್ರಗತಿಯನ್ನು ಪರಿಶೀಲಿಸುವಂತೆ ಮತ್ತು ಪ್ರತಿ 15 ದಿನಕ್ಕೊಮ್ಮೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಇದರಿಂದ ಬಾಕಿ ಇರುವ ಸುಮಾರು 67,213ಕ್ಕೂ ಹೆಚ್ಚು ಪಹಣಿ ತಿದ್ದುಪಡಿ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಸಾಧ್ಯವಾಗಲಿದೆ.









