ಬೆಂಗಳೂರು: ಬಗರ್ ಹುಕುಂ ಅರ್ಜಿಗಳ ವಿಲೇ ವಿಚಾರದಲ್ಲಿ ಸರ್ಕಾರ ಅಥವಾ ಅಧಿಕಾರಿಗಳು ಕಾನೂನು ಮೀರಿ ನಡೆದಿಲ್ಲ, ಒಂದು ವೇಳೆ ರೈತರಿಗೆ ಅನ್ಯಾಯವಾಗಿದ್ದರೆ ನಮ್ಮ ಗಮನಕ್ಕೆ ತನ್ನಿ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದು ಸಚಿವ ಕೃಷ್ಣ ಬೈರೇಗೌಡ ಸದನದಲ್ಲಿ ಭರವಸೆ ನೀಡಿದರು.
ವಿಧಾನಸೌಧದಲ್ಲಿ ಸೋಮವಾರ ಪ್ರಶ್ನಾವಳಿ ವೇಳೆ ಶಾಸಕರಾದ ಎಂ.ಟಿ. ಕೃಷ್ಣಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ ಅವರು, “ಬಗರ್ ಹುಕುಂ ಸಮಿತಿ ಮುಂದೆ ಅಧಿಕಾರಿಗಳು ಅರ್ಹ ಅರ್ಜಿಗಳನ್ನು ಮಾತ್ರ ಸಲ್ಲಿಸಬೇಕು ಎಂಬ ಕಾನೂನು ಇದೆ. ಹೀಗಾಗಿ ಅಧಿಕಾರಿಗಳು ಅನರ್ಹ ಅರ್ಜಿಗಳನ್ನು ಆರಂಭಿಕ ಹಂತದಲ್ಲೇ ತ್ಯಜಿಸಿಬಿಡುತ್ತಾರೆ. ಈ ಎಲ್ಲಾ ಪ್ರಕ್ರಿಯೆಗಳೂ ಕಾನೂನಿನಲ್ಲೇ ಇದ್ದು, ಕಾನೂನು ಮೀರಿ ಏನೂ ಮಾಡಿಲ್ಲ. ಒಂದು ವೇಳೆ ಕಣ್ತಪ್ಪಿನಿಂದ ಒಂದೆರಡು ರೈತರಿಗೆ ಅನ್ಯಾಯ ಆಗಿದ್ದರೆ ಶಾಸಕರು ನನ್ನ ಗಮನಕ್ಕೆ ತನ್ನಿ, ಸಮಸ್ಯೆಯನ್ನು ನಾನು ಸರಿಪಡಿಸುತ್ತೇನೆ” ಎಂದು ಆಶ್ವಾಸನೆ ನೀಡಿದರು.
ಇದೇ ವೇಳೆ ಬಗರ್ ಹುಕುಂ ಹೆಸರಿನಲ್ಲಿ ಭೂ ಮಂಜೂರಾತಿಗೆ ಯಾವ್ಯಾವ ರೀತಿಯ ಅನರ್ಹ ಅರ್ಜಿಗಳು ಸಲ್ಲಿಕೆಯಾಗುತ್ತವೆ ಎಂದೂ ಸದನದ ಗಮನ ಸೆಳೆದ ಸಚಿವರು, “5 ಎಕರೆಗಿಂತ ಹೆಚ್ಚು ಜಮೀನು ಹೊಂದಿರುವ 7,564 ಜನ ಅರ್ಜಿ ಸಲ್ಲಿಸಿದ್ದಾರೆ. ರಸ್ತೆ ಗುಂಡು ತೋಪು ಒತ್ತುವರಿ ಮಾಡಿರುವವರು 33,632, ಅರಣ್ಯ ಭೂಮಿಯ ಮಂಜೂರಾತಿಗೆ 1,00,565, ನಗರ-ನಗರಸಭೆ ವ್ಯಾಪ್ತಿಯಲ್ಲಿ ಭೂ ಮಂಜೂರಾತಿಗೆ 69,850, ಆ ತಾಲೂಕಿನಲ್ಲೇ ವಾಸಿಸದ ಪಕ್ಕದ ತಾಲೂಕಿನಲ್ಲೂ ವಾಸ ಇಲ್ಲದ 1,620, ಕೃಷಿಕರೇ ಅಲ್ಲದ 13,488, ಜಮೀನಿನ ಸ್ವಾಧೀನದಲ್ಲೇ ಇಲ್ಲದ 44,517, ಅಮೃತ್ ಮಹಲ್ ಕಾವಲ್ ಭೂ ಮಂಜೂರಾತಿಗೆ 13,488 ಹಾಗೂ ಕೆರೆ ಮಂಜೂರಿಗೂ 3040 ಅರ್ಜಿಗಳು ಬಂದಿವೆ” ಎಂದು ಮಾಹಿತಿ ನೀಡಿದರು.
ಪಡಾ ಭೂ ಮಂಜೂರಿಗೆ ಅಧ್ಯಯನ
“ಪಡಾ-ಬೀಳು ಜಮೀನಿನ ಸ್ವಾದೀನವನ್ನು ಹಲವು ಈ ಹಿಂದೆಯೇ ಬಿಟ್ಟಿದ್ದಾರೆ. ಹೀಗಾಗಿ ಈ ಪೈಕಿ ಕೆಲ ಜಮೀನು ಅರಣ್ಯ ಪ್ರದೇಶಗಳಿಗೆ ಮಂಜೂರಾಗಿದೆ. ಕೆಲವು ಸರ್ಕಾರಿ ಕಚೇರಿಗಳಿಗೆ, ಸ್ಮಶಾನ ಸೇರಿದಂತೆ ಸಾರ್ವಜನಿಕ ಉದ್ದೇಶಕ್ಕೆ ಗ್ರ್ಯಾಂಟ್ ಆಗಿದೆ. ಈ ಬಗ್ಗೆ ಮೊದಲು ಅಧ್ಯಯನ ನಡೆಸಿ ಆ ನಂತರ ಯಾರು ಕೃಷಿಯಲ್ಲಿ ತೊಡಗಿದ್ದಾರೆ ಅಂತವರಿಗೆ ಜಮೀನು ಮಂಜೂರು ಮಾಡುವ ಕೆಲಸ ಆಗಬೇಕು. ಅದನ್ನು ಬಿಟ್ಟು ಎಲ್ಲರ ಅರ್ಜಿಯನ್ನೂ ಸ್ವೀಕರಿಸಿದರೆ ಭವಿಷ್ಯದಲ್ಲಿ ಈ ಸಮಸ್ಯೆ ಇನ್ನೂ ನೂರುಪಟ್ಟು ದೊಡ್ಡದಾಗುವ ಸಾಧ್ಯತೆ ಇದೆ. ಪ್ರಸ್ತುತ ಈಗ ಈ ಬಗ್ಗೆ ಅಧ್ಯಯನ ನಡೆಸುತ್ತಿದ್ದು, ಬಗರ್ಹುಕುಂ ಕೆಲಸಗಳು ಮುಗಿದ ನಂತರ ಆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು” ಎಂದು ಭರವಸೆ ನೀಡಿದರು.
ಗೋಮಾಳ ಜಮೀನನ್ನು ಬಗರ್ ಹುಕುಂ ಅಡಿಯಲ್ಲಿ ಮಂಜೂರಾತಿ ಸಂಬಂಧಿಸಿದ ಪ್ರಶ್ನೆಗೂ ಉತ್ತರಿಸಿದ ಅವರು, “ಕೆಲವು ಶಾಸಕರು ಗೋಮಾಳ ಭೂಮಿಗೆ ಸಂಬಂಧಿಸಿ ತೀರ್ಮಾನವನ್ನು ಜಿಲ್ಲಾಧಿಕಾರಿಗಳಿಗೆ ಬಿಟ್ಟಿದ್ದೇವೆ ಎಂಬ ಆರೋಪ ಮಾಡುತ್ತಿದ್ದಾರೆ. ಆದರೆ, ನಾವು ನಮ್ಮ ಸರ್ಕಾರ ಬಂದ ಮೇಲೆ ಕಾನೂನನ್ನು ಮೀರಿ ಏನೂ ಮಾಡುತ್ತಿಲ್ಲ. ನಾವು ಯಾವುದನ್ನೂ ಜಿಲ್ಲಾಧಿಕಾರಿಗಳಿಗೆ ಕೊಟ್ಟಿಲ್ಲ. ಕಾನೂನನ್ನು ಯತಾವತ್ ಅನುಸರಿಸುತ್ತಿದ್ದೇವೆ. ಕಾನೂನಿನಲ್ಲಿ ಒಂದು ಅಕ್ಷರ ಕೂಡ ಬದಲಿಸಿಲ್ಲ. ನಾವೇನಾದ್ರೂ ಕಾನೂನು ಬದಲಿಸಿದ್ದರೆ ಸದಸ್ಯರು ತಿಳಿಸಲಿ ತಿದ್ದಿಕೊಳ್ಳುತ್ತೇವೆ” ಎಂದರು.
ಜಂಗಲ್ ಅಥವಾ ಬಿ-ಖರಾಬು ಜಮೀನು ಮಂಜೂರಾತಿ ವಿಚಾರದಲ್ಲಿ ಯಾವುದೋ ಕಾಲದಲ್ಲಿ ತಪ್ಪಾಗಿದೆ. ಆಗಿನ ಸರ್ಕಾರ ಸರಿಯಾದ ಹೆಚ್ಚೆ ಇಟ್ಟಿಲ್ಲ.ಆದರೆ, ಅದನ್ನು ನಾವು ಸರಿ ಮಾಡುವ ಕೆಲಸಕ್ಕೆ ಮುಂದಾಗಿದ್ದೇವೆ. ಈಗಾಗಲೇ ಬೆಂಗಳೂರು ವಿಭಾಗ ಪ್ರದೇಶಿಕ ಆಯುಕ್ತರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ ಇದರ ನೈಜತೆ ಪರಿಶೀಲನೆಯ ಜವಾಬ್ದಾರಿ ಕೊಟ್ಟಿದ್ದೇವೆ. ತನಿಖೆ ಆರಂಭವಾಗಿದೆ. ಆದರೆ, ಪ್ರಗತಿ ಆಗಿಲ್ಲ. ತನಿಖೆಯನ್ನು ಶೀಘ್ರದಲ್ಲಿ ಮುಗಿಸಲು ಸೂಚಿಸಿದ್ದೇನೆ” ಎಂದು ತಿಳಿಸಿದರು.
ಏತನ್ಮಧ್ಯೆ ಇಂತಹ ಜಮೀನುಗಳು ಪೋಡ್ ಆಗುವುದು ಅಥವಾ ಭೂ ವ್ಯವಹಾರ ನಿಲ್ಲಿಸಬೇಕು ಎಂಬ ಕೂಗೂ ಕೇಳಿಬರುತ್ತಿದೆ. ಆದರೆ, ಈ ಬಗ್ಗೆ ಆಯುಕ್ತರು ಲಿಖಿತ ಸೂಚನೆ ನೀಡಿದ್ದಾರೆ. ಈಗಾಗಲೇ ಮಂಜೂರಿದಾರರಿಗೆ ಆ ಜಮೀನು ಗ್ರ್ಯಾಂಟ್ ಆಗಿರುವುದರಿಂದ ಅವರ ಹಕ್ಕನ್ನು ಸರ್ಕಾರ ಮೊಟಕುಗೊಳಿಸಲು ಸಾಧ್ಯವಿಲ್ಲ ಎಂದು ಕಾನೂನಾತ್ಮಕ ಸೂಚನೆ ನೀಡಿದ್ದಾರೆ. ಅವರ ಪತ್ರ ಕಾನೂನಿಗೆ ಬದ್ದವಾಗಿದೆ.
ಈ ನಡುವೆ ಒಂದೇ ಕುಟುಂಬಕ್ಕೆ 119 ಏಕರೆ ಕೊಟ್ಟಿದ್ದಾರೆ. ಎರಡನೇಯದು ಹೀಗೆ ಮಂಜೂರಾದ ಜಮೀನು ಜಂಗಲ್ ಖರಾಬು. ಈ ಎರಡೂ ಪ್ರಶ್ನೆ ಬಗ್ಗೆಯೂ ವಿಚಾರಣೆ ನಡೆಯುತ್ತಿದೆ. ಶೀಘ್ರ ವಿಚಾರಣೆ ಮುಗಿದರೆ ಇದರ ರದ್ದತಿ ಬಗ್ಗೆ ತೀರ್ಮಾನ ಮಾಡಬಹುದು. ಹೀಗಾಗಿ ಶೀಘ್ರ ವಿಚಾರಣೆಗೆ ಸೂಚಿಸಲಾಗಿದೆ. ಅಲ್ಲದೆ, ವಿಚಾರಣೆ ಮುಗಿಯುವವರೆಗೆ ಏನು ಮಾಡಬಹುದು ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಬಳಿಯೂ ಸಲಹೆ ಕೇಳಲಾಗಿದೆ” ಎಂದು ಮಾಹಿತಿ ನೀಡಿದರು.