ಬೆಂಗಳೂರು : ಸರ್ಕಾರಿ ವಕೀಲರನ್ನು ನೇಮಿಸುವಾಗ ಕನಿಷ್ಟ 24% ರಷ್ಟು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ವಕೀಲರನ್ನು ನೇಮಕಾತಿ ಮಾಡುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರದ ಆದೇಶದಲ್ಲಿ ಏನಿದೆ?
ಮೇಲೆ ಓದಲಾದ ಕ್ರಮ ಸಂಖ್ಯೆ (1)ರ ಪತ್ರದಲ್ಲಿ ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ ಇವರು ಮಾನ್ಯ ಸಮಾಜ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮತ್ತು ನಿಗಮಗಳ ಅಧಿಕಾರಿಗಳೊಂದಿಗೆ ದಿನಾಂಕ:01-06-2023 ರಂದು ಜರುಗಿದ ಸಭೆಯಲ್ಲಿ, ‘ಸರ್ಕಾರಿ ವಕೀಲರನ್ನು ನೇಮಿಸುವಾಗ ಕನಿಷ್ಠ 24% ರಷ್ಟು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ವಕೀಲರನ್ನು ನೇಮಿಸಿಕೊಳ್ಳಲು ಕಾನೂನು ಇಲಾಖೆಗೆ ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸೂಚಿಸಿದ್ದು, ಸಭಾ ನಡವಳಿಯಲ್ಲಿ ಕ್ರಮವಹಿಸಲು ನಿರ್ದೇಶನವಿರುತ್ತದೆ. ಅದರಂತೆ, ಸರ್ಕಾರಿ ವಕೀಲರನ್ನು ನೇಮಿಸುವ ಸಂದರ್ಭದಲ್ಲಿ ಕನಿಷ್ಠ 24% ರಷ್ಟು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ವಕೀಲರನ್ನು ನೇಮಿಸುವಂತೆ ಶೇ.24 ರಷ್ಟು ಪರಿಶಿಷ್ಟ ಜಾತಿ/ ಪಂಗಡದವರಿಗೆ ಪ್ರಾತಿನಿಧ್ಯತೆ ನೀಡಬಹುದೆಂಬ ಅಭಿಪ್ರಾಯದೊಂದಿಗೆ ಪ್ರಸ್ತಾವನೆಯನ್ನು ಕಾನೂನು ಇಲಾಖೆಗೆ ಕಳುಹಿಸಲು ಸೂಕ್ತ ಆದೇಶವನ್ನು ಹೊರಡಿಸುವಂತೆ ಕೋರಿರುತ್ತಾರೆ.
ಮೇಲೆ ಓದಲಾದ ಕ್ರಮ ಸಂಖ್ಯೆ (2)ರ ಕಾನೂನು ಇಲಾಖೆಯ ಟಿಪ್ಪಣಿಯಲ್ಲಿ “ಕರ್ನಾಟಕ ರಾಜ್ಯಪತ್ರ ಸಂಖ್ಯೆ: ಸಂವ್ಯಶಾಇ 29 ಶಾಸನ 2022, ದಿನಾಂಕ:23.10.2022ರಲ್ಲಿ ಅಧ್ಯಾದೇಶಿಸಿದಂತೆ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ ಮೀಸಲಾತಿಯನ್ನು ಅನುಸೂಚಿತ ಜಾತಿಗಳಿಗೆ ಶೇಕಡ 17ರಷ್ಟು ಮತ್ತು ಅನುಸೂಚಿತ ಪಂಗಡಗಳಿಗೆ ಶೇಕಡ 7ರಷ್ಟು ಮೀಸಲಾತಿಯನ್ನು ಕಲ್ಪಿಸಲಾಗಿರುತ್ತದೆ. ಆ ಕಾರಣದಿಂದ ಸರ್ಕಾರಿ ವಕೀಲರನ್ನು ನೇಮಿಸುವ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಅಧ್ಯಾದೇಶದಲ್ಲಿ ಹೇಳಿರುವಂತೆ ಒಟ್ಟು ಶೇಕಡ 24ರಷ್ಟು ಮೀಸಲಾತಿಯನ್ನು ಕಲ್ಪಿಸಬಹುದಾಗಿದೆ” ಎಂದು ಅಭಿಪ್ರಾಯ ನೀಡಿರುತ್ತದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಸರ್ಕಾರಿ ವಕೀಲರನ್ನು ನೇಮಿಸುವ ಸಂದರ್ಭದಲ್ಲಿ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ ಮೀಸಲಾತಿಯನ್ನು ಪರಿಶಿಷ್ಟ ಜಾತಿ ವಕೀಲರಿಗೆ ಶೇ.17% ಮತ್ತು ಪರಿಶಿಷ್ಟ ಪಂಗಡಗಳ ವಕೀಲರಿಗೆ ಶೇ.7% ಸೇರಿ ಒಟ್ಟು ಶೇ.24% ರಷ್ಟು ಮೀಸಲಾತಿಯನ್ನು ಕಲ್ಪಿಸಿ ಆದೇಶಿಸಿದ.
ಈ ಆದೇಶವನ್ನು ಕಾನೂನು ಇಲಾಖೆಯ ಟಿಪ್ಪಣಿ ಸಂಖ್ಯೆ: LAW/521/OPN/2024, ದಿನಾಂಕ:22.10.2024 ರಲ್ಲಿ ನೀಡಿರುವ ಅಭಿಪ್ರಾಯದನ್ವಯ ಹೊರಡಿಸಲಾಗಿದೆ.