ಬೆಂಗಳೂರು: ರಾಜ್ಯದ ವಿದ್ಯಾರ್ಥಿಗಳು ಪ್ರಯಾಣಿಕರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಬಸ್ ಗಳಲ್ಲಿ ರಶ್ ತಪ್ಪಿಸಲು 500 ಹೊಸ ಬಸ್ ಗಳ ನಿಯೋಜನೆಗೆ ರಾಅಜ್ಯ ಸರ್ಕಾರ ನಿರ್ಧರಿಸಿದೆ.
ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ನಂತರ ಅನೇಕ ಮಾರ್ಗಗಳಲ್ಲಿ ಬಸ್ ಗಳ ಸಂಖ್ಯೆ ಕಡಿಮೆಯಾಗಿ ವಿದ್ಯಾರ್ಥಿಗಳು ಸೇರಿ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಸಮಸ್ಯೆ ಪರಿಹಾರಕ್ಕೆ ಕೆಎಸ್ ಆರ್ ಟಿಸಿ 300ಕ್ಕೂ ಹೆಚ್ಚಿನ ಹೊಸ ಮಾರ್ಗಗಳಲ್ಲಿ ಮತ್ತು ಹಳೆ ಮಾರ್ಗಗಳಲ್ಲಿ ಹೆಚ್ಚುವರಿ ಬಸ್ ಸೇವೆ ಆರಂಭಿಸಲು ತೀರ್ಮಾನಿಸಿದೆ.
ಬಸ್ ಗಳು ಅವಶ್ಯಕತೆ ಇರುವ ಹಾಗೂ ಶಾಲಾ-ಕಾಲೇಜುಗಳು ಹೆಚ್ಚಿರುವ ಮಾರ್ಗಗಳನ್ನು ಗುರುತಿಸಿರುವ ಕೆಎಸ್ ಆರ್ ಟಿಸಿ ಅಲ್ಲಿಗೆ ಹೆಚ್ಚುವರಿ ಅಥವಾ ಹೊಸದಾಗಿ ಬಸ್ ಸೇವೆ ಆರಂಭಿಸಲು ನಿರ್ಧರಿಸಲಾಗಿದೆ. ಅದರಂತೆ ಈಗಾಗಲೇ ಹೊಸ ಮಾರ್ಗ ಮತ್ತು ಹೆಚ್ಚುವರಿ ಬಸ್ ಗಳ ಅವಶ್ಯಕತೆ ಇರುವ 300 ಕ್ಕೂ ಹೆಚ್ಚಿನ ಮಾರ್ಗಗಳನ್ನು ಗುರುತಿಸಲಾಗಿದು, ಸದ್ಯ ಕೆಎಸ್ ಆರ್ ಟಿಸಿಗೆ ಸೇರ್ಪಡೆಯಾಗಿರುವ 814 ಬಸ್ ಗಳ ಪೈಕಿ 500 ಬಸ್ ಗಳ ನಿಯೋಜಿಸಲಾಗುತ್ತಿದ್ದು, ಅದರ ಜೊತೆಗೆ ಹೊಸದಾಗಿ ನೇಮಕವಾಗುತ್ತಿರುವ 2,500 ಚಾಲಕ ಕಂ. ನಿರ್ವಾಹಕರಲ್ಲಿ 2 ಸಾವಿರಕ್ಕೂ ಹೆಚ್ಚಿನ ಸಿಬ್ಬಂದಿಯನ್ನು ಹೊಸ ಮಾರ್ಗದಲ್ಲಿ ಸೇವೆಗಾಗಿ ನೇಮಿಸಲು ನಿರ್ಧರಿಸಲಾಗಿದೆ.