ದಾವಣಗೆರೆ : ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯದವರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಎಸ್ ಸಿ, ಎಸ್ ಟಿ ಖಾಲಿಯಿರುವ ಎಲ್ಲ ಬ್ಲಾಕ್ಲಾಗ್ ಹುದ್ದೆಗಳನ್ನು ಶೀಘ್ರ ತುಂಬಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
ಹರಿಹರ ತಾಲೂಕಿನ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ನಡೆಯುತ್ತಿರುವ ವಾಲ್ಮೀಕಿ ಮಹೋತ್ಸವದಲ್ಲಿ ಮಾತನಾಡಿದ ಅವರು. ‘ಸಿಎಂ ಸಿದ್ದರಾಮಯ್ಯ ಎಸ್ಸಿ, ಎಸ್ಟಿ ಬ್ಯಾಕ್ಲಾಗ್ ಹುದ್ದೆ ತುಂಬಬೇಕು. ಎಂದು ಸಂಪುಟ ಉಪ ಸಮಿತಿ ರಚಿಸಿದ್ದು, ನಾನು ಅದರ ಅಧ್ಯಕ್ಷ ಈಗಾಗಲೇ ಮೂರು ಸಭೆ ನಡೆಸಿದ್ದೇವೆ. ಇನ್ನೊಂದು ಸಭೆ ನಡೆಸಿ ಬ್ಯಾಕ್ಲಾಗ್ ಹುದ್ದೆ ತುಂಬಲು ತೀರ್ಮಾನ ಕೈಗೊಳ್ಳುತ್ತೇವೆ. ಎಸ್ಸಿ, ಎಸ್ಟಿ ಜನಸಂಖ್ಯೆಗೆ ತಕ್ಕಂತೆ ಅನುದಾನಮೀಸಲಿಡುವ ಕಾಯಿದೆಯಿಂದ ಎಸ್ಸಿಎಸ್ಪಿ/ಟಿಎಸ್ಪಿಗೆ ಶೇ.24ರಷ್ಟು ಅನುದಾನ ಸಿಗುತ್ತಿದೆ. ಇದರಿಂದ ಈ ಸಮು ದಾಯಗಳು ಆರ್ಥಿಕವಾಗಿ ಬಲಗೊಳ್ಳುತ್ತಿವೆ ಎಂದರು.
ರಾಜನಹಳ್ಳಿ ವಾಲ್ಮೀಕಿ ಜಾತ್ರೆಯು ಈ ಭಾಗದ ವಿಶಿಷ್ಟ ಜಾತ್ರೆಗಳಲ್ಲಿ ಒಂದಾಗಿದ್ದು ದಾವಣಗೆರೆ ಸೀಮೆಯ ಸಾಂಸ್ಕೃತಿಕ ಹಿರಿಮೆಯ ಸಂಕೇತವಾಗಿದೆ ಮತ್ತು ವಾಲ್ಮೀಕಿಯಂತಹ ಮೇರು ವ್ಯಕ್ತಿತ್ವದ ಕವಿಯ ಹೆಸರಲ್ಲಿ ನಾವು ಮಾಡುತ್ತಿರುವ ಈ ಜಾತ್ರೆ ಅವರಿಗೆ ನಾವು ಸಲ್ಲಿಸುವ ಗೌರವವಾಗಿದೆ. ನಮಗೆಲ್ಲಾ ವಾಲ್ಮೀಕಿಯವರ ಬಗ್ಗೆ ಗೊತ್ತೇ ಇದೆ. ಜಗತ್ತಿನ ಶ್ರೇಷ್ಠ ಕಾವ್ಯಗಳಲ್ಲಿ ಒಂದಾದ ರಾಮಾಯಣವನ್ನು ರಚಿಸಿದವರು ವಾಲ್ಮೀಕಿಯವರು. ರಾಮಾಯಣವನ್ನು ಓದುತ್ತಿದ್ದರೆ, ಅದರ ಒಂದೊಂದು ಮಾತಿನಲ್ಲೂ ವಾಲ್ಮೀಕಿಗಳ ವ್ಯಕ್ತಿತ್ವವೇ ಎದ್ದುಕಾಣುತ್ತದೆ. ವಾಲ್ಮೀಕಿಗಳ ವ್ಯಕ್ತಿತ್ವದಲ್ಲಿ ಮಹತ್ತರ ಬದಲಾವಣೆ ಆದದ್ದು ಅವರು ರಾಮನ ಬಗ್ಗೆ ನಾರದರು ಹೇಳಿದ ಮಾತುಗಳನ್ನು ಕೇಳಿದ ಮೇಲೆಯೇ. ಮೊದಲಿಗೆ ಅವರು ತಮ್ಮ ಮೋಕ್ಷವನ್ನು ಬಯಸಿ ಸಾಧನೆಯಲ್ಲಿ ನಿರತ ತಪಸ್ವಿಗಳಷ್ಟೇ ಆಗಿದ್ದರು; ಆದರೆ ರಾಮನ ಕಥೆಯನ್ನು ಕೇಳಿ ಅವರು ಜಗತ್ತಿನ ಸಂಕಟಕ್ಕೆ ಸ್ಪಂದಿಸಬಲ್ಲ ಕವಿಗಳೇ ಆದರು
ನಾವಿಂದು ಧಾರ್ಮಿಕತೆಯನ್ನು ಅನುಕೂಲಸಿಂಧುವನ್ನಾಗಿಸಿಕೊಳ್ಳುತ್ತಿದ್ದೇವೆ. ಆದರೆ ದಿಟವಾದ ಧರ್ಮಶ್ರದ್ಧೆಯ ಆಕಾರವನ್ನು ನಮಗೆ ಒದಗಿಸಿದವರು ವಾಲ್ಮೀಕಿಯವರು. ಧರ್ಮ ಎನ್ನುವುದು ಸನಾತನವಾದುದು; ಅದು ನಮ್ಮ ಸ್ವಾರ್ಥ, ಬುದ್ಧಿ, ಅನುಕೂಲ, ದೇಶ, ಕಾಲಗಳನ್ನು ಮೀರಿದ ಶಾಶ್ವತ ತತ್ತ್ವ ಎಂಬುದರ ಮೀಮಾಂಸೆಯನ್ನು ರಾಮಾಯಣದ ಆರಂಭದಿಂದ ಕೊನೆಯ ತನಕ ಅವರು ನಿರೂಪಿಸಿದ್ದಾರೆ. ದಿಟವಾದ ಧಾರ್ಮಿಕ ಹೇಗಿರುತ್ತಾನೆ ಎಂಬುದಕ್ಕೆ ಒಂದು ಉದಾಹರಣೆಯನ್ನು ನೋಡಬಹುದು.
ರಾಮನು ಪಟ್ಟಾಭಿಷೇಕಕ್ಕೆ ಸಿದ್ಧನಾಗುತ್ತಿದ್ದಾನೆ. ಆದರೆ ಮುಂದೆ ಸ್ವಲ್ಪವೇ ಸಮಯದ ಅಂತರದಲ್ಲಿ ಕಾಡಿಗೆ ಹೋಗಲು ಅವನು ಸಿದ್ಧನಾಗಬೇಕಾಗುತ್ತದೆ. ಆಗ ರಾಮನ ಮುಖ ಹೇಗಿತ್ತು ಎಂಬುದನ್ನು ವಾಲ್ಮೀಕಿಗಳು ವರ್ಣಿಸುತ್ತಾರೆ: ‘ಅವನು ಪಟ್ಟಾಭಿಷೇಕಕ್ಕೆ ಸಿದ್ಧವಾಗುತ್ತಿದ್ದಾಗ ಅವನ ಮುಖ ಹೇಗಿದ್ದಿತೋ, ಈಗ ಕಾಡಿಗೆ ಹೋಗಲು ಸಿದ್ಧವಾಗಬೇಕಾದರೂ ಹಾಗೆಯೇ ಇದ್ದಿತು; ಸ್ವಲ್ಪವೂ ವ್ಯತ್ಯಾಸ ಇರಲಿಲ್ಲ.’
ಧರ್ಮದಲ್ಲಿ ನಿರತನಾದವನಿಗೆ ನಾಡಾದರೂ ಒಂದೇ, ಕಾಡಾದರೂ ಒಂದೇ; ಅವನಿಗೆ ಧರ್ಮಮಾರ್ಗ ಮುಖ್ಯವೇ ಹೊರತು ಸಿಂಹಾಸನ–ವನವಾಸಗಳು ಅಲ್ಲ – ಎಂಬುದನ್ನು ತುಂಬ ಅದ್ಭುತವಾಗಿ ವಾಲ್ಮೀಕಿಗಳು ಸೂಚಿಸಿದ್ದಾರೆ. ‘ಯಾವುದೇ ಕಾರಣಕ್ಕೂ ಅಧರ್ಮಮಾರ್ಗದಿಂದ ನಾನು ರಾಜ್ಯವನ್ನು ದಕ್ಕಿಸಿಕೊಳ್ಳಲಾರೆ’ ಎಂದು ರಾಮ ನೇರವಾಗಿಯೇ ಘೋಷಿಸುತ್ತಾನೆ ಕೂಡ. ನಮಗಿಂದು ರಾಮಾಯಣ ಮತ್ತು ವಾಲ್ಮೀಕಿ ಮಹರ್ಷಿ ಪ್ರಸ್ತುತ ಆಗಬೇಕಾದ್ದು ಈ ಕಾರಣಕ್ಕಾಗಿ ಎಂಬುದನ್ನು ನಾವು ಅರಿಯಬೇಕು.
ಈ ದಿನ ರಾಮ ರಾಜಕೀಯ ಸರಕು ಆಗಿದ್ದಾನೆ. ಆದರೆ ವಾಲ್ಮೀಕಿ ಹೇಳಿದಂತೆ ನಾವು ರಾಮನನ್ನು ಅರಿತರೆ ಧರ್ಮದ ನಿಜವಾದ ಉದ್ದೇಶವೂ ನಮಗೆ ಅರ್ಥವಾಗುತ್ತದೆ ಮತ್ತು ಆ ಕಾರಣಕ್ಕಾಗಿ ನಡೆಯುತ್ತಿರುವ ಕಲಹಗಳೂ ನಿಲ್ಲುತ್ತದೆ ಎಂದು ತಿಳಿಸಿದ್ದಾರೆ.
ಈ ಮಹತ್ವದ ಜಾತ್ರಾ ಸಭೆಯಲ್ಲಿ ಸಚಿವರಾದ ಡಾ ಜಿ ಪರಮೇಶ್ವರ್, ಸತೀಶ್ ಜಾರಕೀಹೊಳಿ, ವಿಧಾನ ಪರಿಷತ್ ಸದಸ್ಯರಾದ ಡಾ ಯತೀಂದ್ರ ಸಿದ್ದರಾಮಯ್ಯ, ಶಾಸಕರಾದ ಅನಿಲ್ ಚಿಕ್ಕಮಾದು, ಬಸಂತಪ್ಪ, ದರ್ಶನ್ ಧೃವ ನಾರಾಯಣ್, ಸಂಸದರಾದ ತುಕಾರಾಂ, ರಾಜನಹಳ್ಳಿ ವಾಲ್ಮೀಕಿ ಮಠದ ಶ್ರೀಗಳು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.