ಬೆಂಗಳೂರು : ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಕರ್ನಾಟಕ ನೋಂದಣಿ ತಿದ್ದುಪಡಿ ವಿಧೇಯಕದ ಅನುಮೋದನೆಗೆ ಬಹುಮತದಿಂದ ಸಮ್ಮತಿ ಸಿಕ್ಕಿದೆ.
ಈ ಕುರಿತು ಸದನದಲ್ಲಿ ಮಾಹಿತಿ ನೀಡಿರುವ ಸಚಿವ ಕೃಷ್ಣ ಬೈರೇಗೌಡ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲಿಂದ ಆಸ್ತಿ ನೋಂದಣಿ ಕ್ಷೇತ್ರದಲ್ಲಿ ಹಲವು ಮಾರ್ಪಾಡುಗಳನ್ನು ಜಾರಿಗೊಳಿಸಿವೆ. ಅಧಿಕಾರಿಗಳ ಹಸ್ತಕ್ಷೇಪವನ್ನು ಕಡಿಮೆಗೊಳಿಸಿ ಕೆಲಸವು ಸ್ವಯಂಚಾಲಿತವಾಗಿ ನಡೆಯುವುದು ಮಾಡುವುದು ನಮ್ಮ ಉದ್ದೇಶವಾಗಿದೆ. ಇದಕ್ಕೆ ಸೂಕ್ತ ಸಾಧನಗಳನ್ನು ಅಳವಡಿಸಲಾಗಿದೆ ಎಂದು ಹೇಳಿದ್ದಾರೆ.
ಆಸ್ತಿ ನೋಂದಣಿ ಪ್ರಕ್ರಿಯೆ ಇನ್ನಷ್ಟು ಸರಳೀಕಣಗೊಳಿಸುವ,ಡಿಜಿಟಲೀಕರಣಗೊಳಿಸುವ, ಅಧಿಕಾರಿಗಳ ಕಂಪ್ಯೂಟರ್ ಡಿಜಿಟಲ್ ಸಹಿ ಕಡ್ಡಾಯ ಮಾಡುವ ಹಾಗೂ ತಾಂತ್ರಿಕತೆ ಬಳಸಿಕೊಂಡು ಅಧಿಕಾರಿಗಳ ಮಧ್ಯಪ್ರವೇಶ ಕಡಿಮೆ ಮಾಡಲು ತರಲಾಗಿರುವ ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕ 2025ಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆಯಿತು.
ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಧೇಯಕಕ್ಕೆ ಅನುಮೋದನೆ ನೀಡುವಂತೆ ಕೋರಿದರು. ಚರ್ಚೆ ಬಳಿಕ ಸ್ಪೀಕರ್ ಯು.ಟಿ.ಖಾದರ್ ಧ್ವನಿಮತದ ಮೂಲಕ ವಿಧೇಯಕಕ್ಕೆ ಅಂಗೀಕಾರ ಪಡೆದರು. ಇದಕ್ಕೂ ಮುನ್ನ ಸಚಿವರು, ಈ ತಿದ್ದುಪಡಿ ವಿಧೇಯಕದ ಮೂಲಕ ತಾಂತ್ರಿಕತೆ ಬಳಸಿಕೊಂಡು ಅಧಿಕಾರಿಗಳ ಮಧ್ಯಪ್ರವೇಶವನ್ನು ಸಕ್ರಿ ಯವಾಗಿ ಕಡಿಮೆ ಮಾಡಲಾಗಿದೆ. ಕಂಪ್ಯೂಟರ್ಡಿಜಿಟಲ್ ಸಹಿ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ. ಆಸ್ತಿ ನೋಂದಣೀಗೆ ಎಲ್ಲ ದಾಖಲೆಗಳೂ ಡಿಜಿಟಲ್ ಆಗಿಯೇ ಬರಬೇಕು. ಸೆಕ್ಷನ್ 32ನಲ್ಲಿ ಈ ತಿದ್ದುಪಡಿ ತರಲಾಗಿದೆ.
ನೊಂದಣಿ ಪ್ರಕ್ರಿಯೆಯಲ್ಲಿ ನಕಲಿ, ವಂಚನೆ ತಪ್ಪಿಸಲು ಪೇಪರ್ ಲೆಸ್ ಆಗಿ ಎಲ್ಲಾ ದಾಖಲೆಗಳು ಡಿಜಿಟಲ್ ಆಗಿಯೇ ಬರುವಂತೆ ವ್ಯವಸ್ಥೆ ಮಾಡಲಾಗಿದೆ. ಆರ್.ಟಿ.ಸಿ.ಯನ್ನು ಇಂಟಿಗ್ರೇಟ್ ಮಾಡಿ ಆಧಾರ್ ಸಂಖ್ಯೆ ಕಡ್ಡಾಯ ಮಾಡಲಾಗಿದ್ದು, ಇದಕ್ಕಾಗಿ ಕಾಯ್ದೆಯ ಸೆಕ್ಷನ್ 32 ರಲ್ಲಿ ತಿದ್ದುಪಡಿ ಮಾಡಲಾಗಿದೆ. ದಾಖಲೆಗಳು ಡಿಜಿಟಲ್ ಆಗಿ ಪರಿಶೀಲನೆಯಾಗುವಾಗ ರೈತರು ಖುದ್ದು ಸರ್ಕಾರಿ ಕಚೇರಿಗಳಿಗೆ ಬರುವ ಅಗತ್ಯವಿಲ್ಲ. ಆಟೋಮ್ಯಾಟಿಕ್ ಆಗಿ ರಿಜಿಸ್ಟರ್ ಆಗಲಿದೆ. 11 ಇ ಸ್ಕೆಚ್ ಗೆ ಕಾನೂನಿನಲ್ಲಿ ಅವಕಾಶ ಇಲ್ಲ ಎನ್ನುವ ದೂರಿನ ಹಿನ್ನೆಲೆಯಲ್ಲಿ ಇದನ್ನು ಕೂಡ ತಿದ್ದುಪಡಿಯ ಮೂಲಕ ಕಾಯ್ದೆಯ ವ್ಯಾಪ್ತಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ.