ಬೆಂಗಳೂರು: ರಾಜ್ಯದ ರಾಷ್ಟ್ರೀಯ ಆರೋಗ್ಯ ಯೋಜನೆಯ ಸಿಬ್ಬಂದಿಗಳಿಗೆ ಸರ್ಕಾರ ಸಿಹಿಸುದ್ದಿ ನೀಡಿದೆ. ಗುತ್ತಿಗೆ ವೈದ್ಯರು, ಸ್ಟಾಫ್ ನರ್ಸ್ ವೇತನವನ್ನು ಹೆಚ್ಚಳ ಮಾಡಿ ಆದೇಶಿಸಿದೆ.
ಇಂದು ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದ್ದು, ಆರೋಗ್ಯ ಸೇವೆ ಒದಗಿಸುವಲ್ಲಿ ತಜ್ಞ ವೈದ್ಯರ ಸೇವೆ ಮುಖ್ಯವಾದದ್ದು, ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಿಂದ ಮಹತ್ವದ ತೀರ್ಮಾನ ಎನ್ನುವಂತೆ ವೇತನ ಹೆಚ್ಚಳ ಮಾಡಲಾಗಿದೆ ಎಂದಿದೆ.
ಎನ್ ಹೆಚ್ ಎಂ ಅಡಿ ನೇಮಕವಾದಂತ ಗುತ್ತಿಗೆ ವೈದ್ಯರು, ಶುಶ್ರೂಷಕರ ವೇತನವನ್ನು ಕೇಂದ್ರದ ಅನುಮತಿ ಪಡೆದು ಶೇ.25ರಿಂದ 50ರಷಅಟು ಹೆಚ್ಚಳ ಮಾಡಲಾಗಿದೆ ಎಂದು ಹೇಳಿದೆ.
ಎಂಬಿಬಿಎಸ್ ವೈದ್ಯರ ವೇತನವನ್ನು ರೂ.45,000ದಿಂದ ರೂ.75,000ಕ್ಕೆ ಹೆಚ್ಚಳ ಮಾಡಲಾಗಿದೆ. 1,10,000 ಇದ್ದಂತ ತಜ್ಞ ವೈದ್ಯರ ವೇತನವನ್ನು ರೂ.1,40,000 ಮಾಡಲಾಗಿದೆ. ನರ್ಸ್ ವೇತನವನ್ನು ರೂ.18,000ದಿಂದ ರೂ.22,000ಕ್ಕೆ ಹೆಚ್ಚಳ ಮಾಡಲಾಗಿದೆ.
ಪ್ರಸ್ತಾಪಿತ ಪರಿಷ್ಕರಿಸಲ್ಪಟ್ಟ ವೇತನವು ಹೊಸದಾಗಿ ನೇಮಕಗೊಂಡ ಸಿಬ್ಬಂದಿಗಳಿಗೆ ಮಾತ್ರ ಅನ್ವಯಿಸುತ್ತದೆ. ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಹಾಲಿ ಪಡೆಯುತ್ತಿರುವ ವೇತನ ಶ್ರೇಣಿಯಲ್ಲಿಯೇ ಮಂದುವರಿಯುತ್ತಾರೆ. ಈ ನೌಕರರು ರಾಜೀನಾಮೆ ಸಲ್ಲಿಸಿ, ಹೊಸ ನೇಮಕಾತಿಯಲ್ಲಿ ಪಾಲ್ಗೊಳ್ಳಬಹುದಾಗಿರುತ್ತದೆ. ಹೊಸ ನೇಮಕಾತಿ ಮಾಡುವ ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಅವರ ಅನುಭವದ ಆಧಾರದ ಮೇಲೆ ಆದ್ಯತೆ ನೀಡುವುದು ಎಂದಿದೆ.