ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ 2026-27ನೇ ಸಾಲಿನ ‘ವಿದ್ಯಾವಿಕಾಸ ಯೋಜನೆ’ಯಡಿ ಎರಡು ಜೊತೆ ಉಚಿತ ಸಮವಸ್ತ್ರಗಳನ್ನು ವಿತರಿಸಲು ಶಾಲಾ ಶಿಕ್ಷಣ ಇಲಾಖೆ ಸಿದ್ಧತೆ ಪೂರ್ಣಗೊಳಿಸಿದೆ. ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯಿಂದ ಅಧಿಕೃತ ಸುತ್ತೋಲೆ ಹೊರಡಿಸಲಾಗಿದೆ.
ಎರಡು ಜೊತೆ ಸಮವಸ್ತ್ರ: ರಾಜ್ಯದ ಎಲ್ಲಾ ಜಿಲ್ಲೆಗಳ ಸರ್ಕಾರಿ ಶಾಲಾ ಮಕ್ಕಳಿಗೆ ತಲಾ ಎರಡು ಜೊತೆ ಉಚಿತ ಸಮವಸ್ತ್ರ ಹಾಗೂ ಬಟ್ಟೆಗಳನ್ನು ಪೂರೈಸಲಾಗುವುದು.
ಪೂರೈಕೆದಾರ ಸಂಸ್ಥೆಗಳ ಆಯ್ಕೆ: ವಿವಿಧ ಜಿಲ್ಲೆಗಳಿಗೆ ಸಮವಸ್ತ್ರ ಪೂರೈಸಲು ಕರ್ನಾಟಕ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮ ಸೇರಿದಂತೆ ಒಟ್ಟು 7 ಪ್ರಮುಖ ಸಂಸ್ಥೆಗಳಿಗೆ ಕಾರ್ಯಾದೇಶ ನೀಡಲಾಗಿದೆ.
ಸಾರಿಗೆ ವೆಚ್ಚದ ಅನುದಾನ: ಸಮವಸ್ತ್ರಗಳನ್ನು ತಾಲೂಕು ಕೇಂದ್ರಗಳಿಂದ ಶಾಲೆಗಳಿಗೆ ತಲುಪಿಸಲು ಪ್ರತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ (BEO) ಕಚೇರಿಗೆ 20,000 ರೂ. ಗಳ ಸಾರಿಗೆ ವೆಚ್ಚವನ್ನು ಬಿಡುಗಡೆ ಮಾಡಲಾಗಿದೆ.
ಹೊಲಿಗೆ ವೆಚ್ಚ ಪೋಷಕರ ಜವಾಬ್ದಾರಿ: ಸರ್ಕಾರವು ಕೇವಲ ಸಮವಸ್ತ್ರದ ಬಟ್ಟೆಯನ್ನು ಮಾತ್ರ ಉಚಿತವಾಗಿ ನೀಡುತ್ತಿದ್ದು, ಅದರ ಹೊಲಿಗೆ ವೆಚ್ಚವನ್ನು ಫಲಾನುಭವಿ ಮಕ್ಕಳ ಪೋಷಕರೇ ಭರಿಸಬೇಕೆಂದು ಸೂಚಿಸಲಾಗಿದೆ.
ಗುಣಮಟ್ಟಕ್ಕೆ ಆದ್ಯತೆ:
ಸಮವಸ್ತ್ರದ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಪೂರೈಕೆಯಾದ ಎರಡು ವಾರಗಳೊಳಗೆ ಪ್ರತಿ ತಾಲೂಕಿನಿಂದ ರ್ಯಾಂಡಮ್ ಆಗಿ 6 ಮಾದರಿಗಳನ್ನು (Samples) ಪಡೆದು ಪರೀಕ್ಷೆಗೆ ಒಳಪಡಿಸಬೇಕು. ಗುಣಮಟ್ಟದಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಸಂಬಂಧಪಟ್ಟ ಪೂರೈಕೆದಾರ ಸಂಸ್ಥೆಯನ್ನೇ ಹೊಣೆ ಮಾಡಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.
ದಾಖಲಾತಿ ಮತ್ತು ವಿತರಣೆ:
2025-26ನೇ ಸಾಲಿನ SATS (Student Achievement Tracking System) ದಾಖಲಾತಿಯ ಆಧಾರದ ಮೇಲೆ ಸಮವಸ್ತ್ರಗಳ ಪ್ರಮಾಣವನ್ನು ನಿಗದಿಪಡಿಸಲಾಗಿದೆ. ಶಾಲೆಗಳಿಗೆ ಸಮವಸ್ತ್ರ ತಲುಪಿದ ತಕ್ಷಣ ಮುಖ್ಯೋಪಾಧ್ಯಾಯರು ಮಕ್ಕಳಿಗೆ ವಿತರಿಸಿ, ಪೋಷಕರಿಂದ ಸ್ವೀಕೃತಿ ಪತ್ರ ಪಡೆದು ಮೂರು ದಿನದೊಳಗೆ ಇಲಾಖೆಗೆ ವರದಿ ಸಲ್ಲಿಸಬೇಕಿದೆ.
ಯಾವುದೇ ಕಾರಣಕ್ಕೂ ಸಮವಸ್ತ್ರದ ಬಟ್ಟೆಗಳು ಗೋದಾಮುಗಳಲ್ಲಿ ಉಳಿಯಬಾರದು ಮತ್ತು ವಿತರಣೆಯಲ್ಲಿ ವಿಳಂಬವಾಗಬಾರದು ಎಂದು ಶಿಕ್ಷಣ ಇಲಾಖೆಯ ನಿರ್ದೇಶಕರು (ಪ್ರಾಥಮಿಕ ಶಿಕ್ಷಣ) ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.









