ಬೆಂಗಳೂರು : ತೋಟಗಾರಿಕೆ ಇಲಾಖೆ ವತಿಯಿಂದ 2025-26ನೇ ಸಾಲಿನ ಜಿಲ್ಲೆಯಲ್ಲಿ ಅನುಷ್ಟಾನಗೊಳಿಸಲಾಗುತ್ತಿರುವ ವಿವಿಧ ಯೋಜನೆಗಳಡಿ ಸಹಾಯಧನಕ್ಕಾಗಿ ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ತೋಟಗಾರಿಕೆ ಇಲಾಖೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ, ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ತಾಳೆಬೆಳೆ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ, ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ, ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಗಳಡಿ ತೋಟಗಾರಿಕೆ ಬೆಳೆಗಳ ಹೊಸ ಪ್ರದೇಶ ವಿಸ್ತರಣೆ, (ಗೇರು, ಪೇರಲ, ಮಾವು, ಬಾಳೆ, ದಾಳಿಂಬೆ, ಪಪ್ಪಾಯ, ಇತರೆ) ರೋಗ ಮತ್ತು ಕೀಟ ನಿಯಂತ್ರಣ, ನೀರು ಸಂಗ್ರಹಣಾ ಘಟಕ, ಕೊಯ್ಲೋತ್ತರ ನಿರ್ವಹಣೆ ಘಟಕಗಳಿಗೆ, ಸಂರಕ್ಷಿತ ಬೇಸಾಯ ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಯಾಂತ್ರೀಕರಣ ಹಾಗೂ ವಿವಿಧ ಘಟಕಗಳಿಗೆ ಸಹಾಯಧನ ನೀಡಲಾಗುತ್ತಿದೆ.
ಕೇಂದ್ರ ವಲಯ, ರಾಜ್ಯವಲಯ ಮತ್ತು ಜಿಲ್ಲಾ ವಲಯ ಯೋಜನೆಗಳ ಸಹಾಯಧನ ಪಡೆಯಲು ಆಸಕ್ತ ರೈತರು ಜೂನ್ 20 ರೊಳಗಾಗಿ ಅರ್ಜಿ ಸಮೇತ ಅಗತ್ಯವಾದ ದಾಖಲಾತಿಗಳನ್ನು ಸಂಬಂಧಪಟ್ಟ ಆಯಾ ತಾಲ್ಲೂಕಾ ತೋಟಗಾರಿಕಾ ಕಛೇರಿಯಲ್ಲಿ ಸಲ್ಲಿಸಬೇಕು. ಸರ್ಕಾರ ನಿಗದಿಪಡಿಸಿದ ಮಾರ್ಗಸೂಚಿ ಹಾಗೂ ಲಭ್ಯವಿರುವ ಅನುದಾನದ ಮೇರೆಗೆ ಜೇಷ್ಟತಾವಾರು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಕೊಪ್ಪಳ ಮೊ.ಸಂ: 9448511649, ಗಂಗಾವತಿ ಮೊ: 8861697989, ಕುಷ್ಟಗಿ ಮೊ.ಸಂ: 9611888607, ಯಲಬುರ್ಗಾ ಮೊ.ಸಂ: 9945644338 ಹಾಗೂ ತೋಟಗಾರಿಕೆ ಉಪನಿರ್ದೇಶಕರ ಕಛೇರಿಯ ಕೇಂದ್ರ ಸ್ಥಾನಿಕ ಸಹಾಯಕರ ಮೊ.ಸಂ: 9741057047 ಗೆ ಸಂಪರ್ಕಿಸಬಹುದು ಎಂದು ತೋಟಗಾರಿಕಾ ಇಲಾಖಾ ಪ್ರಕಟಣೆ ತಿಳಿಸಿದೆ.