ಧಾರವಾಡ : 500 ಮೀ. ವ್ಯಾಪ್ತಿಯ ಹೊರಗಿರುವ ಪಂಪ್ಸೆಟ್ ವಿದ್ಯುತ್ ಸಂಪರ್ಕಗಳಿಗೆ ಈಗಾಗಲೇ ಶೇ. 60 ರಷ್ಟು ಇರುವ ರಿಯಾಯಿತಿಯನ್ನು ಶೇ. 80 ರಷ್ಟು ಹೆಚ್ಚಳ ಮಾಡಿ ಯಾವುದೇ ಅಕ್ರಮ, ಹೆಚ್ಚುವರಿ ಆರ್ಥಿಕ ವೆಚ್ಚವಾಗದಂತೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮವಹಿಸಲಾಗಿದೆ ಎಂದು ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಅವರು ಧಾರವಾಡ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಇಂಧನ ಇಲಾಖೆಯ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಜರುಗಿಸಿ, ಮಾತನಾಡಿದರು. 2004 ರಿಂದಲೂ ಅಭ್ಯಾಸವಾಗಿರುವ ಅನಧಿಕೃತ ವಿದ್ಯುತ್ ಸಂಪರ್ಕಗಳನ್ನು ಸಕ್ರಮಗೊಳಿಸಲು ನಿರ್ಧಿಷ್ಠ ಮಾನದಂಡಗಳನ್ನು ಮಾಡಲಾಗಿದೆ. ಇದಕ್ಕಾಗಿ ಕುಸುಮ ಬಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ. 500 ಮೀ. ವ್ಯಾಪ್ತಿಯ ಹೊರಗಿರುವ ಪಂಪ್ಸೆಟ್ ವಿದ್ಯುತ್ ಸಂಪರ್ಕಗಳಿಗೆ ಈಗಾಗಲೇ ಶೇ. 60 ರಷ್ಟು ಇರುವ ರಿಯಾಯಿತಿಯನ್ನು ಶೇ. 80 ರಷ್ಟು ಹೆಚ್ಚಳ ಮಾಡಿ ಯಾವುದೇ ಅಕ್ರಮ, ಹೆಚ್ಚುವರಿ ಆರ್ಥಿಕ ವೆಚ್ಚವಾಗದಂತೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮವಹಿಸಲಾಗಿದೆ ಎಂದು ಸಚಿವ ಕೆ.ಜೆ.ಜಾರ್ಜ್ ಅವರು ತಿಳಿಸಿದರು.
ಇಂಧನ ಇಲಾಖೆಯು ಅಗತ್ಯವಿರುವ 1,500 ಜೆ.ಇ, ಎಇ ಮತ್ತು 3 ಸಾವಿರ ಲೈನ್ಮನ್ಗಳ ನೇಮಕಾತಿ ಮಾಡಿದೆ. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮವಹಿಸಲಾಗುತ್ತಿದೆ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಆಗಾಗ ವಿದ್ಯುತ್ ಕಡಿತ, ಕಡಿಮೆ ಓಲ್ಟೇಜ್ನಂತಹ ಸಮಸ್ಯೆಗಳು ವರದಿಯಾಗುತ್ತಿದ್ದು, ಇವುಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಇಲಾಖೆಯ ಆಂತರಿಕ ಕಾರ್ಯವಿಧಾನಗಳಲ್ಲಿನ ಸಣ್ಣಪುಟ್ಟ ತೊಡಕುಗಳು ಯೋಜನೆಗಳ ಅನುμÁ್ಠನಕ್ಕೆ ಅಡ್ಡಿಯಾಗಬಾರದು ಎಂದು ಅವರು ಹೇಳಿದರು.
ಅಧಿಕಾರಿಗಳು ಮತ್ತು ಸಿಬ್ಬಂದಿ ನಡುವೆ ಉತ್ತಮ ಸಮನ್ವಯ ಇರಬೇಕು. ಯಾವುದೇ ಕಡತಗಳು ವಿಳಂಬವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿದರು.
ಜನರಿಗೆ ವಿದ್ಯುತ್ ಬಿಲ್ ಸಂಬಂಧಿತ ಸಮಸ್ಯೆಗಳು, ಹೊಸ ಸಂಪರ್ಕ ಪಡೆಯುವಲ್ಲಿನ ವಿಳಂಬ, ವಿದ್ಯುತ್ ಕಂಬಗಳು ಮತ್ತು ತಂತಿಗಳ ನಿರ್ವಹಣೆ, ಹಲವು ಸಣ್ಣ ಸಣ್ಣ ತೊಂದರೆಗಳು ಎದುರಾಗುತ್ತಿವೆ. ಅದಕ್ಕೆ ಸೂಕ್ತವಾದ ಕ್ರಮಗಳನ್ನು ವಹಿಸಬೇಕೆಂದು ಅವರು ಸೂಚಿಸಿದರು.
ಗ್ರಾಹಕ ಸೇವಾ ಕೇಂದ್ರಗಳನ್ನು ಇನ್ನಷ್ಟು ಬಲಪಡಿಸಬೇಕು ಮತ್ತು ಸಾರ್ವಜನಿಕರ ಕುಂದುಕೊರತೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ಮುಂದಿನ ದಿನಗಳಲ್ಲಿ ಇಂಧನ ವಿತರಣಾ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಲು ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ಕ್ರಮಕೈಗೊಳ್ಳುವುದಾಗಿ ಅವರು ಹೇಳಿದರು.
ಪ್ರಸಕ್ತ ಸಾಲಿನ ಮುಂಗಾರು ಮಳೆಗೆ ಧಾರವಾಡ ಜಿಲ್ಲೆಯ ವಿವಿಧ ಕಡೆ ವಿದ್ಯುತ್ ಕಂಬ, ಟಿಸಿ ಮತ್ತು ಇತರ ಪರಿಕರಗಳಿಗೆ ಹಾನಿಯಾಗಿದ್ದು, ಅಂದಾಜು 1.71 ಕೋಟಿ ಮೊತ್ತದ ಹಾನಿಯಾಗಿದೆ ಎಂದು ಸಚಿವರು ತಿಳಿಸಿದರು.
ಗೃಹ ಜ್ಯೋತಿ ಯೋಜನೆ
ಧಾರವಾಡ ಜಿಲ್ಲೆಯಲ್ಲಿ ಗೃಹ ಜ್ಯೋತಿ ಯೋಜನೆಯ ಗೃಹ ಬಳಕೆ ಸ್ಥಾವರಗಳು 5,59,183 ಪೈಕಿ 5,12,621 ಫಲಾನುಭವಿಗಳು ಇದ್ದು, ಶೇ. 92 ರಷ್ಟು ಫಲಾನುಭವಿಗಳಿಗೆ 2609.15 ಲಕ್ಷ ಅನುದಾನ ಹಂಚಿಕೆಯಾಗಿದೆ ಎಂದರು.
ಗಂಗಾ ಕಲ್ಯಾಣ ಯೋಜನೆ
ಧಾರವಾಡ ಜಿಲ್ಲೆಯಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಕಳೆದ ವರ್ಷದ ಅಂತ್ಯಕ್ಕೆ 91 ಅರ್ಜಿಗಳು ಬಾಕಿ ಇದ್ದು, 122 ಅರ್ಜಿಗಳು ಪ್ರಸ್ತುತ ಸಾಲಿನಲ್ಲಿ ನೋಂದಾಯಿತವಾಗಿವೆ. ಈ ಪೈಕಿ 48 ಅರ್ಜಿಗಳು ರದ್ದಾಗಿವೆ. ಒಟ್ಟು 165 ಅರ್ಜಿಗಳು ಸ್ವೀಕೃತವಾಗಿವೆ. ಪ್ರಸಕ್ತ ಸಾಲಿನಲ್ಲಿ ವಿದ್ಯುದೀಕರಣಗೊಂಡ ಯೋಜನೆಗಳು 117 ಇದ್ದು ಈ ಪೈಕಿ 48 ಅರ್ಜಿಗಳು ವಿದ್ಯುದೀಕರಣಗೊಳಿಸಲು ಬಾಕಿ ಇರುತ್ತವೆ ಎಂದು ಅವರು ಹೇಳಿದರು.
ಕೃಷಿ ಪಂಪ್ ಸೆಟ್ಗಳ ವಿದ್ಯುದೀಕರಣ
ಸ್ವಯಂ ಕಾರ್ಯಗತಗೊಳಿಸುವಿಕೆ ಮತ್ತು ಹೊಸ ಎಸ್ಎಸ್ವೈ ಯೋಜನೆಯಡಿ ಧಾರವಾಡ ಜಿಲ್ಲೆಯಲ್ಲಿ ಸೆಪ್ಟೆಂಬರ 22, 2023 ರವರೆಗೆ ಒಟ್ಟು 674 ಕೃಷಿ ಪಂಪ್ ಸೆಟ್ಗಳು ನೋಂದಣಿಗೊಂಡಿವೆ. ಇವುಗಳ ಪೈಕಿ 400 ಕೃಷಿ ಪಂಪ್ ಸೆಟ್ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು, 271 ಕೃಷಿ ಪಂಪ್ ಸೆಟ್ಗಳು ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಅವರು ತಿಳಿಸಿದರು.
ಸೌರ ಮೇಲ್ಛಾವಣಿ ಸ್ವಾವರಗಳ ಅಳವಡಿಕೆಯಲ್ಲಿ ಗ್ರಾಹಕರು 28.95 ಮೆ.ವ್ಯಾಟ್ ಸಾಮಥ್ರ್ಯದ 933 ಸ್ಥಾವರಗಳನ್ನು ಅಳವಡಿಸಲಾಗಿದೆ. ಪಿ.ಎಮ್. ಸೂರ್ಯ ಘರ್ ಯೋಜನೆಯಡಿ 490 ಸ್ಥಾವರಗಳು ಇದ್ದು, 1.92 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಮತ್ತು ಪೂರೈಕೆ ಆಗುತ್ತಿದೆ.
ಸಭೆಯಲ್ಲಿ ಶಾಸಕರಾದ ಎನ್.ಹೆಚ್.ಕೊನರಡ್ಡಿ, ಎಮ್.ಆರ್. ಪಾಟೀಲ, ಮಹೇಶ ಟೆಂಗಿನಕಾಯಿ ಅವರು ಮಾತನಾಡಿದರು.
ವೇದಿಕೆಯಲ್ಲಿ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತಾ, ಕೆ.ಪಿ.ಟಿ.ಸಿ.ಎಲ್. ವ್ಯವಸ್ಥಾಪಕ ನಿರ್ದೇಶಕ ಪಂಕಜಕುಮಾರ ಪಾಂಡೆ, ಹೆಸ್ಕಾಂ ಅಧ್ಯಕ್ಷ ಸೈಯದ್ ಅಜೀಮ್ ಫೀರ್ ಎಸ್. ಖಾದ್ರಿ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ್ ಸನದಿ ಉಪಸ್ಥಿತರಿದ್ದರು.
ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ವೈಶಾಲಿ ಎಂ.ಎಲ್. ಅವರು ಸ್ವಾಗತಿಸಿ, ಸಭೆ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪಾಟೀಲ, ಪ್ರೋಬೆಷನರಿ ಐಎಎಸ್ ಅಧಿಕಾರಿ ರಿತೀಕಾ ವರ್ಮಾ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಹೆಸ್ಕಾಂ ಮತ್ತು ಕೆ.ಪಿ.ಟಿ.ಸಿ.ಎಲ್. ಅಧಿಕಾರಿಗಳು ಭಾಗವಹಿಸಿದ್ದರು.