ಬೆಂಗಳೂರು: ಇನ್ಮುಂದೆ ಪ್ರಥಮ ವರ್ತಮಾನ ವರದಿಯಲ್ಲಿ ಹಾಗೂ ತನಿಖೆಯಲ್ಲಿ ಭಾರತೀಯ ನ್ಯಾಯ ಸಂಹಿತೆ-2023ರ ಅಪರಾಧಿಕ ಕಲಂಗಳಾದ 304, 103(2), 111 ಮತ್ತು 113(ಬಿ)ಗಳನ್ನು ಅಳವಡಿಸಿಕೊಳ್ಳುವ ಮುನ್ನ ಮೇಲಾಧಿಕಾರಿಗಳ ಅನುಮೋದನೆ ಪಡೆಯುವುದು ಕಡ್ಡಾಯಗೊಳಿಸಿ ಕರ್ನಾಟಕ ಡಿಜಿ-ಐಜಿಪಿ ಡಾ.ಎಂ.ಎ ಸಲೀಂ ಆದೇಶಿಸಿದ್ದಾರೆ.
ಈ ಕುರಿತಂತೆ ಎಲ್ಲಾ ಘಟಕಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿರುವಂತ ಅವರು, ರಾಜ್ಯದ ಎಲ್ಲಾ ಠಾಣಾಧಿಕಾರಿಗಳು ಹಾಗೂ ತನಿಖಾಧಿಕಾರಿಗಳು ಪ್ರಥಮ ವರ್ತಮಾನ ವರದಿಯಲ್ಲಿ ಹಾಗೂ ತನಿಖೆಯಲ್ಲಿ ಭಾರತ ನ್ಯಾಯ ಸಂಹಿತೆಯ 304, 103(2), 111 & 113(ಬಿ) ಗಳನ್ನು ಅಳವಡಿಸಿಕೊಳ್ಳುವ ಮೊದಲು, ಮೇಲಾಧಿಕಾರಿಗಳ ಅನುಮೋದನೆಯನ್ನು ಪಡೆದುಕೊಳ್ಳುವುದು. ಈ ಸುತ್ತೋಲೆಯಾನುಸಾರ ಕರ್ನಾಟಕ ರಾಜ್ಯದ ಠಾಣಾಧಿಕಾರಿಗಳಿಗೆ ಹಾಗೂ ತನಿಖಾಧಿಕಾರಿಗಳಿಗೆ ಈ ಕೆಳಕಂಡ ಸೂಚನೆಗಳನ್ನು ನೀಡಲಾಗಿದೆ ಎಂದಿದ್ದಾರೆ.
1. ದೂರುದಾರರು ಸಲ್ಲಿಸುವ ದೂರನ್ನು ಸ್ವೀಕರಿಸಿದಾಗ, ಅದರಲ್ಲಿ ಭಾರತ ನ್ಯಾಯ ಸಂಹಿತೆ-2023 ರ ಅಪರಾಧಿಕ ಕಲಂ ಗಳಾದ 304, 103(2), 111 & 113(ಬಿ) ಗಳ ಅಪರಾಧಿಕ ಅಂಶಗಳು ಮೇಲ್ನೋಟಕ್ಕೆ ಕಂಡುಬರುತ್ತವೆಯೇ ಎಂಬುದನ್ನು ಪರಿಶೀಲಿಸುವುದು.
2. ಸದರಿ ದೂರಿನಲ್ಲಿ ಮೇಲ್ಕಾಣಿಸಿದ ಅಪರಾಧಿಕ ಅಂಶಗಳು ಮೇಲ್ನೋಟಕ್ಕೆ ಕಂಡುಬರುತ್ತಿವೆ ಎಂದು ಠಾಣಾಧಿಕಾರಿಗೆ ಅಥವಾ ತನಿಖಾಧಿಕಾರಿಗಳಿಗೆ ಕಂಡುಬಂದಾಗ ತನ್ನ ಅಭಿಪ್ರಾಯ ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಿ, ಸದರಿ ಅನ್ವಯವಾಗುವ ಕಲಂಗಳನ್ನು ಪ್ರಥಮ ವರ್ತಮಾನ ವರದಿಯಲ್ಲಿ ಅಥವಾ ತನಿಖೆಯಲ್ಲಿ ಅಳವಡಿಸಿಕೊಳ್ಳಲು ಅನುಮೋದಿಸುವಂತೆ ಕೋರಿಕೆ
3. ಸದರಿ ಅಭಿಪ್ರಾಯ ವರದಿ ಹಾಗೂ ಕೋರಿಕೆಯನ್ನು ಸ್ವೀಕರಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಅವುಗಳನ್ನು ಪರಿಶೀಲಿಸಿ, ಮೇಲ್ನೋಟಕ್ಕೆ ದೂರಿನಲ್ಲಿ ಹಾಗೂ ತನಿಖೆಯಲ್ಲಿ ಸದರಿ ಅಪರಾಧಗಳ ಅಂಶಗಳು ಮೇಲ್ನೋಟಕ್ಕೆ ಕಂಡುಬಂದರೆ ಅಂತಹ ಕಲಂಗಳನ್ನು ಅಳವಡಿಸಿಕೊಳ್ಳಲು ಅನುಮೋದನೆಯನ್ನು ನೀಡುವುದು. ಸದರಿ ಅನುಮೋದನೆಯ ನಂತರ ಠಾಣಾಧಿಕಾರಿ | ತನಿಖಾಧಿಕಾರಿಯು ಅನುಮೋದಿತ ಅಪರಾಧಿಕ ಕಲಂಗಳನ್ನು ಪ್ರಥಮ ವರ್ತಮಾನ ವರದಿ | ತನಿಖೆಯಲ್ಲಿ ಅಳವಡಿಸಿಕೊಂಡು, ತನಿಖೆಯನ್ನು ಕೈಗೊಳ್ಳುವುದು.
4. ಜಿಲ್ಲಾ ಮಟ್ಟದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಮೇಲ್ಪಟ್ಟು ಹಾಗೂ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಸಂಬಂಧಿಸಿದ ವಿಭಾಗದ ಉಪ ಪೊಲೀಸ್ ಆಯುಕ್ತರನ್ನೊಳಗೊಂಡಂತೆ ಮೇಲಾಧಿಕಾರಿಗಳು 304, 103(2) & 111 ಅನುಮೋದನೆಯನ್ನು ನೀಡುವಂತ ಅಧಿಕಾರಿಗಳಾಗಿರುತ್ತಾರೆ.
5. ಕಲಂ, 113(ಬಿ) ಗೆ ಸಂಬಂಧಿಸಿದಂತೆ ಅನುಮೋದನೆ ನೀಡುವ ಅಧಿಕಾರಿಯು, ಜಿಲ್ಲಾ ಮಟ್ಟದಲ್ಲಿ ಪೊಲೀಸ್ ಅಧೀಕ್ಷಕರು ಹಾಗೂ ಕಮೀಷನರೇಟ್ ವ್ಯಾಪ್ತಿಯಲ್ಲಿ ಉಪ ಪೊಲೀಸ್ ಆಯುಕ್ತರು ಒಳಗೊಂಡಂತೆ ಮೇಲಾಧಿಕಾರಿಗಳು ಆಗಿರುತ್ತಾರೆ.
6. ಒಂದು ವೇಳೆ ಕಾನೂನು ಮತ್ತು ಸುವ್ಯವಸ್ಥೆ ಅಥವಾ ಸಾರ್ವಜನಿಕ ಸುರಕ್ಷತೆಯ ತುರ್ತು ಸಂದರ್ಭಗಳಲ್ಲಿ ಲಿಖಿತವಾಗಿ ಕೋರಿಕೆಯನ್ನು ಸಲ್ಲಿಸಲು ಮತ್ತು ಅನುಮೋದನೆಯನ್ನು ಪಡೆದುಕೊಳ್ಳಲು ಸಾಧ್ಯವಾಗದಿದ್ದಲ್ಲಿ, ಆಗ ಸಂಬಂಧಿಸಿದ ಠಾಣಾಧಿಕಾರಿ | ತನಿಖಾಧಿಕಾರಿಗಳು ಮೌಖಿಕವಾಗಿ ತಮ್ಮ ಕೋರಿಕೆಯನ್ನು ಸಲ್ಲಿಸಿ, ಅನುಮೋದಿಸುವ ಹಿರಿಯ ಅಧಿಕಾರಿಯಿಂದ ಮೌಖಿಕವಾಗಿ ಅನುಮೋದನೆಯ ಆದೇಶವನ್ನು ಪಡೆದುಕೊಂಡು ಮುಂದಿನ ಕ್ರಮ ಕೈಗೊಳ್ಳುವುದು. ತದನಂತರ 24 ಘಂಟೆಯೊಳಗಾಗಿ ಲಿಖಿತ ರೂಪದಲ್ಲಿ ಘಟನೋತ್ತರ ಅನುಮೋದನೆಯನ್ನು ಘಟಕದ ಮುಖ್ಯಸ್ಥರು ಮೇಲ್ಕಂಡ ಎಲ್ಲಾ ಕ್ರಮಗಳು ಪಾಲನೆಯಾಗುವಂತೆ ನೋಡಿಕೊಳ್ಳುವುದು ಹಾಗೂ ಪ್ರತಿ ಅಪರಾಧ ವಿಶ್ಲೇಷಣಾ ಸಭೆಗಳಲ್ಲಿ ಈ ಈ ಕ್ರಮಗಳು ಪಾಲನೆಯಾಗುತ್ತಿರುವುದನ್ನು ಪರಿಶೀಲಿಸಿಕೊಳ್ಳುವುದು.
ಘಟಕಾಧಿಕಾರಿಗಳು ಮೇಲ್ಕಂಡ ಎಲ್ಲಾ ಸೂಚನೆಗಳನ್ನು ಕೂಡಲೇ ಅನುಷ್ಠಾನಗೊಳಿಸಿ, ಅನುಸರಿಸಲು ತಮ್ಮ ವ್ಯಾಪ್ತಿಯಲ್ಲಿರುವ ಎಲ್ಲಾ ಪೊಲೀಸ್ ಠಾಣೆಗಳು, ವಿಶೇಷ ಘಟಕಗಳು ಮತ್ತು ತನಿಖಾ ತಂಡಗಳಿಗೆ ಸೂಚಿಸುವಂತೆ ನೀರ್ದೇಶಿಸಲಾಗಿದೆ.
ವರದಿ; ವಸಂತ ಬಿ ಈಶ್ವರಗೆರೆ..,