ಬಳ್ಳಾರಿ: ಹೆಣ್ಣು ಮಗುವಿನ ಮಹತ್ವ ಎಲ್ಲರೂ ಅರಿಯಬೇಕು. ಹೆಣ್ಣು ಭ್ರೂಣಲಿಂಗ ಪತ್ತೆಯು ಕಾನೂನಿನ ಪ್ರಕಾರ ಅಪರಾಧವಾಗಿದ್ದು, ಉಲ್ಲಂಘಿಸಿದಲ್ಲಿ ಜೈಲು ಶಿಕ್ಷೆ ಮತ್ತು ದಂಡವಿದೆ. ಈ ಕುರಿತು ವ್ಯಾಪಕವಾಗಿ ಜಾಗೃತಿ ನೀಡಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್.ಎನ್.ಹೊಸಮನೆ ಅವರು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಮ್ಸ್ ಇವರ ಸಂಯುಕ್ತಾಶ್ರಯದಲ್ಲಿ ವೈದ್ಯಾಧಿಕಾರಿಗಳಿಗೆ, ಖಾಸಗಿ ಆಸ್ಪತ್ರೆಯ ಸ್ಕ್ಯಾನಿಂಗ್ ಕೇಂದ್ರಗಳ ತಜ್ಞರಿಗೆ ದತ್ತು ಕಾಯ್ದೆ-2022, ಮಮತೆಯ ತೊಟ್ಟಿಲು, ಪಿಸಿಪಿಎನ್‍ಡಿಟಿ-ಕಾಯ್ದೆ-1994 ಕಾಯ್ದೆಗಳ ಕುರಿತ ವಿಮ್ಸ್‍ನ ಬಿ.ಸಿ.ರಾಯ್ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹೆಣ್ಣು ತಾಯಿಯಾಗಿ, ಹೆಂಡತಿಯಾಗಿ ಕುಟುಂಬದ ಜವಾಬ್ದಾರಿಯನ್ನು ತ್ಯಾಗದಿಂದ ನಿರ್ವಹಿಸುತ್ತಾಳೆ. ತಲೆ-ತಲಾಂತರದಿಂದ ಹೆಣ್ಣನ್ನು ಸಮಾಜದ ಮಗಳಾಗಿ ಕಾಣುತ್ತಿದ್ದು, ಈಗಲೂ ಸಹ ಅದೇ ಗೌರವದೊಂದಿಗೆ ಮತ್ತು ಹೆಮ್ಮೆಯೊಂದಿಗೆ ಸ್ವೀಕರಿಸಬೇಕು ಎಂದು ತಿಳಿಸಿದರು.

ಲಿಂಗಾನುಪಾತ ಸಮವಾಗಿರದಿದ್ದರೆ ಸಮಾಜದ ಸ್ವಾಸ್ತ್ಯ ಹಾಳಾಗುವುದರ ಜೊತೆಗೆ, ಹೆಣ್ಣಿನ ಮೇಲೆ ದೌರ್ಜನ್ಯ ಉಂಟಾಗುವ ಸಾಧ್ಯತೆ ಇದೆ. ಭ್ರೂಣ ಹತ್ಯೆ ಮಾಡುವ ಸಾಧ್ಯತೆ ಇರುವುದರಿಂದ ಕಾಯ್ದೆಯ ಕಠಿಣತೆಯ ಜೊತೆಗೆ ಮಾನವೀಯತೆ ಕುರಿತು ಹೆಚ್ಚು ಜಾಗೃತಿ ನೀಡಬೇಕಿದೆ ಎಂದು ಅಭಿಪ್ರಾಯ ಪಟ್ಟರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಹೆಣ್ಣು ಭ್ರೂಣಹತ್ಯೆ ತಡೆಯಲು ಇರುವ ಕಾನೂನು ಬಗ್ಗೆ ಜಾಗೃತಿ ನೀಡಬೇಕು ಎಂದು ತಿಳಿಸಿದರು.

ಗರ್ಭಿಣಿಯ ಅಕಾಲಿಕ ಗರ್ಭಪಾತ, ಮೊದಲ ಮಗು ಹೆಣ್ಣು ಇದ್ದು, ಪುನಃ ಗರ್ಭಿಣಿಯಾದಾಗ ಆಗುವ ಗರ್ಭಪಾತ ಅಥವಾ ಶಿಶು ಮರಣ ಸಂಭವಿಸಿದ ಸನ್ನಿವೇಶಗಳನ್ನು ಗ್ರಾಮೀಣ ಮಟ್ಟದ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ತಾಯಿ ಮಗುವಿನ ಆರೋಗ್ಯಕ್ಕೆ ಸಂಬಂಧಿಸಿದ ಸಿಬ್ಬಂದಿಯವರು ಗಮನಿಸಬೇಕು. ತಡೆಗೆ ಅಗತ್ಯ ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಕಾರ್ಯಕ್ರಮದಲ್ಲಿ ಅರವಳಿಕೆ ತಜ್ಞರಾದ ಡಾ.ಶ್ವೇತಾ ಸಂಕನೂರು ಹಾಗೂ ವಕೀಲರಾದ ಸಿ.ಎಮ್.ಗುರುಬಸವರಾಜ್ ಅವರು ತರಬೇತಿ ಕಾರ್ಯಗಾರದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ವಿಮ್ಸ್‍ನ ನಿರ್ದೇಶಕ ಡಾಜಿ.ಟಿ.ಗಂಗಾಧರ ಗೌಡ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ವಿಜಯಕುಮಾರ್ ಕೆ.ಹೆಚ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ ರಮೇಶಬಾಬು, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎನ್ ಬಸಾರೆಡ್ಡಿ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ವಿಜಯಲಕ್ಷ್ಮಿ ಮೈದೂರು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಾಮಕೃಷ್ಣ ನಾಯಕ,ಎಂ., ಸಿಡಿಪಿಓ ನಾಗರಾಜ, ಡಾ.ಅಬ್ದುಲ್ಲಾ, ಡಾ.ಇಂದ್ರಾಣಿ, ಡಾ.ದುರ್ಗಪ್ಪ, ಚನ್ನಬಸವ ಮಕ್ಕಳ ರಕ್ಷಣಾಧಿಕಾರಿ(ಸಾಂಸ್ಥಿಕ), ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Share.
Exit mobile version