ಶಿವಮೊಗ್ಗ: ಜಿಲ್ಲೆಯ ಉಳ್ಳೂರು ಬಳಿಯಲ್ಲಿ ಕ್ಯಾಂಟರ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಸಾಗರದ ಅಕ್ಷಯ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಹಾಗೂ ಮತ್ತೊಬ್ಬ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಉಳ್ಳೂರಲ್ಲಿ ಭೀಕರ ಅಪಘಾತವೊಂದು ಕಳೆದ ರಾತ್ರಿ ಸಂಭವಿಸಿದೆ. ಕ್ಯಾಂಟರ್ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಕಾರಿಗೆ ಡಿಕ್ಕಿಯಾದ ಪರಿಣಾಮ ಸಾಗರದ ಅಕ್ಷಯ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದಂತ ಯುವತಿ ಪವಿತ್ರಾ.ಸಿ(25) ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಅಲ್ಲದೇ ಈಕೆಯ ಸ್ನೇಹಿತ ವೀರೇಶ್ ಟಿ.ಎಸ್(25) ಎಂಬಾತ ಕೂಡ ಸಾವನ್ನಪ್ಪಿದ್ದಾರೆ.
ಮೃತ ಪವಿತ್ರಾ ಸೊರಬ ತಾಲ್ಲೂಕಿನ ಮಳಲಗದ್ದೆ ಗ್ರಾಮದ ಚನ್ನಬಸವಯ್ಯ ಪುತ್ರಿಯಾಗಿದ್ದರೇ, ಮೃತ ವೀರೇಶ್ ಸಾಗರ ತಾಲ್ಲೂಕಿನ ತಡಗಳಲೆ ಗ್ರಾಮದವರಾಗಿದ್ದಾರೆ.
ಪವಿತ್ರಾ ಸಾಗರದ ಅಕ್ಷಯ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಾ, ಸಾಗರದಲ್ಲೇ ಪಿಜಿಯಲ್ಲಿ ಇದ್ದರು. ಕಳೆದ ರಾತ್ರಿ ಆನಂದಪುರಕ್ಕೆ ಸ್ನೇಹಿತರೊಬ್ಬರ ಕಾರ್ಯಕ್ರಮಕ್ಕೆ ಮಾರುತಿ ಆಲ್ಟೋ ಕಾರಿನಲ್ಲಿ ಸ್ನೇಹಿತ ವೀರೇಶ್ ಜೊತೆಗೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿ ವಾಪಾಸ್ ಸಾಗರಕ್ಕೆ ಕಾರಿನಲ್ಲಿ ಬರುತ್ತಿದ್ದಾಗ ಉಳ್ಳೂರಿನ ಮುಂಡಿಗೆಮಟ್ಟೆ ಎಂಬಲ್ಲಿ ರಾತ್ರಿ 10.30ರ ಸುಮಾರಿಗೆ ಕ್ಯಾಂಟರ್ ಒಂದು ಡಿಕ್ಕಿಯಾಗಿದೆ.
ಕ್ಯಾಂಟರ್ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಹೀಗಾಗಿ ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆಯೂ ಮೃತ ಪವಿತ್ರಾ ತಂದೆ ಚನ್ನಬಸವಯ್ಯ ಎಂಬುವರು ಆನಂದಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಆನಂದಪುರ ಠಾಣೆಯ ಪೊಲೀಸರು ಕ್ಯಾಂಟರ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಈ ಅಪಘಾತದಲ್ಲಿ ಪವಿತ್ರಾ, ವೀರೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಸರ್ಕಲ್ ಇನ್ಸ್ ಪೆಕ್ಟರ್ ಸಂತೋಷ್ ಶೆಟ್ಟಿ, ಆನಂದಪುರ ಠಾಣೆಯ ಪಿಎಸ್ಐ ಪ್ರವೀಣ್, ಪಿಸಿ ನಿರಂಜನ್ ತೆರಳಿ ಪರಿಶೀಲನೆ ನಡೆಸಿದರು. ಅಲ್ಲದೇ ಅಪಘಾತದಲ್ಲಿ ನಜ್ಜುಗುಜ್ಜಾಗಿ ಅದರೊಳಗೆ ಸಿಲುಕಿದ್ದಂತ ಪವಿತ್ರಾ, ವಿರೇಶ್ ಮೃತದೇಹವನ್ನು ಹೊರತೆಗೆದು ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ರವಾನಿಸಲು ನೆರವಾಗಿದ್ದಾರೆ.
ಇದೀಗ ಮೃತದೇಹದ ಮರಣೋತ್ತರ ಪರೀಕ್ಷೆಯ ಬಳಿಕ ಪಾರ್ಥೀವ ಶರೀರವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಮೃತ ಪವಿತ್ರ, ವೀರೇಶ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು








