ಶಿವಮೊಗ್ಗ: ಗ್ರಾಮ ಅರಣ್ಯಗಳ ಸಂರಕ್ಷಣೆಗೆ ರೈತರ ಸಹಕಾರ ಅತ್ಯಗತ್ಯ. ಇಲ್ಲವಾದಲ್ಲಿ ಕಾಡುಗಳನ್ನು ಉಳಿಸುವುದು ಕಷ್ಟವಾಗುತ್ತದೆ ಎಂಬುದಾಗಿ ಸಾಗರ ತಾಲ್ಲೂಕು ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್ ತಿಳಿಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹೆಗ್ಗೋಡು ಸಂಪೆಕೈ ಬೆಟ್ಟದಲ್ಲಿ ನಡೆದಂತ ಬೆಟ್ಟ, ಕಾನು ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿ ಕುರಿತ ಜಾಗೃತಿ ಅಭಿಯಾನ, ವೃಕ್ಷರೋಪಣ ಪ್ರಕೃತಿ ವಂದನ ಸಮಾಲೋಚನಾ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, 2010ರಲ್ಲಿ ಅರಣ್ಯ ಇಲಾಖೆ ಜಾರಿಗೆ ತಂದಂತ ಪಶ್ಚಿಮಘಟ್ಟ ಕಾರ್ಯಪಡೆಯ ಅರಣ್ಯ ಕಾನು ಅರಣ್ಯ ಯೋಜನೆಯಿಂದಾಗಿ ಸುಮಾರು 20,000 ಎಕರೆಯಷ್ಟು ಅರಣ್ಯ ಸಂರಕ್ಷಣೆ ಸಾಧ್ಯವಾಯಿತು ಎಂದರು.
ಪರಿಸರ ಉಳಿದಾಗ ಮಾತ್ರವೇ ಮನುಷ್ಯನ ಬದುಕು ಹಸನಾಗುತ್ತದೆ ಎಂಬುದನ್ನು ಯಾರು ಮರೆಯಬಾರದು. ಕಾನು ಅರಣ್ಯ ಉಳಿಸುವಂತ ಅರಣ್ಯ ಇಲಾಖೆಯ ಸಂಕಲ್ಪಕ್ಕೆ ಸಾರ್ವಜನಿಕರು ಕೈಜೋಡಿಸಬೇಕು. ಆ ಮೂಲಕ ಪರಿಸರ ಉಳಿಸೋದಕ್ಕೆ ಮುಂದಾಗಬೇಕು. ಇದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಕೂಡ ಎಂದು ಹೇಳಿದರು.
ಇನ್ನೂ ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ಮಾತನಾಡಿ, ಮೇ.22ರಿಂದ ಜೂನ್ ಕೊನೆಯ ವರೆಗೂ ಬೆಟ್ಟ, ಕಾನು ಸಂರಕ್ಷಣೆ ಅಭಿಯಾನವು ನಡೆಯುತ್ತದೆ. ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳ ಹಳ್ಳಿಗಳಲ್ಲಿ ಗ್ರಾಮ ಅರಣ್ಯ ಸಮಿತಿಯ ಸಹಕಾರದೊಂದಿಗೆ ಈ ಅಭಿಯಾನ ನಡೆಯಲಿದೆ. ಇದಕ್ಕೆ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.
ಮಲೆನಾಡಿನ ಪ್ರಜ್ಞಾವಂತ ನಾಗರೀಕರು ಪರಿಸರ ಸಂರಕ್ಷಣೆಗೆ ಸಹಕಾರ ನೀಡಬೇಕು. ಆ ಮೂಲಕ ಗ್ರಾಮ ನೈರ್ಮಲ್ಯ ಭೂಮಿ ಸುಸ್ಥಿರ ಅಭಿವೃದ್ಧಿಗೆ ಎಲ್ಲರೂ ಜಾಗೃತರಾಗಿ ಕೆಲಸ ಮಾಡುವಂತ ಪ್ರಯತ್ನವಾಗಬೇಕು ಎಂದರು.
ಪರಿಸರ ತಜ್ಞ ಆನೆಗುಳಿ ಸುಬ್ರಾವ್ ಅವರು ಮಾತನಾಡಿ ಮಲೆನಾಡಿನ ನಿಸರ್ಗ ಜೀವ ವೈವಿಧ್ಯ ಉಳಿವಿಗಾಗಿ ಇದೊಂದು ಮಹತ್ವದ ಅಭಿಯಾನವಾಗಿದೆ. ಪರಿಸರ ಜಾಗೃತಿಯ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಿ. ಎಲ್ಲರೂ ಪರಿಸರದ ಜೊತೆಗೆ ನಿಕಟ ಸಂಬಂಧ ಇಟ್ಟುಕೊಳ್ಳಿ. ಯಾವುದೇ ಕಾರಣಕ್ಕೂ ಪರಿಸರವನ್ನು ನಾಶ ಮಾಡುವಂತ ಕೆಲಸಕ್ಕೆ ಬೆಂಬಲ ನೀಡಬೇಡಿ ಎಂದು ಹೇಳಿದರು.
ಈ ವೇಳೆ ಸೊರಬ ಪರಿಸರ ವೇದಿಕೆ ಸಂಚಾಲಕ ಶ್ರೀಪಾದ ಬಿಚ್ಚುಗತ್ತಿ, ಕೇಶವ ಸಂಪೆಕೈ, ಬಿ.ಎಚ್.ರಾಘವೇಂದ್ರ, ಕವಲಕೋಡು ವೆಂಕಟೇಶ್, ಸಾಗರ ತಾಲ್ಲೂಕು ವಲಯ ಅರಣ್ಯಾಧಿಕಾರಿ ಅಣ್ಣಪ್ಪ, ರಂಗನಾಥ್, ಶ್ರೀಕಂಠೆಗೌಡ, ಗಣಪತಿ ಬೀಸಲಕೊಪ್ಪ, ಎಂ.ಜಿ.ರಾಮಚoದ್ರ ಇನ್ನಿತರರು ಹಾಜರಿದ್ದರು.
ಕರ್ನಾಟಕ ಹೈಕೋರ್ಟ್ ನಲ್ಲಿ ಕನ್ನಡದಲ್ಲೇ ವಿಚಾರಣೆ ನಡೆಸಲು ಪುರುಷೋತ್ತಮ ಬಿಳಿಮಲೆ ಆಗ್ರಹ