ಬೆಂಗಳೂರು: ಮಾಜಿ ಪ್ರಧಾನಿಗಳು ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರು ಆಗಿರುವ ಹೆಚ್.ಡಿ. ದೇವೇಗೌಡ ಅವರ 93ನೇ ಜನ್ಮದಿನದ ಹಿನ್ನೆಲೆಯಲ್ಲಿ ನಗರ ಜೆಡಿಎಸ್ ಘಟಕದ ವತಿಯಿಂದ ಆರು ಕಿ.ಮೀ.ಗೂ ಹೆಚ್ಚು ದೂರ ಬೃಹತ್ ಕ್ಯಾನ್ಸರ್ ಜಾಗೃತಿ ಜಾಥಾ ವನ್ನು ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ರಾಜ್ಯದಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮಾಜಿ ಪ್ರಧಾನಮಂತ್ರಿಗಳ ಜನ್ಮದಿನದ ಸಂದರ್ಭವನ್ನು ಆಯ್ಕೆ ಮಾಡಿಕೊಂಡ ಪಕ್ಷದ ಮುಖಂಡರು, ಕಾರ್ಯಕರ್ತರು ಬುಧವಾರ ಬೆಳಗ್ಗೆ ಜಯನಗರ 9ನೇ ಬ್ಲಾಕ್ ಬನ್ನಿ ಬೇಕರಿ ಸರ್ಕಲ್ ನಿಂದ ಜಯನಗರ 4ನೇ ಬ್ಲಾಕ್ ಕಾಂಪ್ಲೆಕ್ಸ್ ಮಾರ್ಗವಾಗಿ ಸೌತ್ ಎಂಡ್ ಸರ್ಕಲ್ ನಲ್ಲಿರುವ ಗುಣಶೀಲ ಆಸ್ಪತ್ರೆಯವರೆಗೆ ಕ್ಯಾನ್ಸರ್ ಜಾಗೃತಿ ಜಾಥಾವನ್ನು ಹಮ್ಮಿಕೊಂಡಿದ್ದರು.
ಸುಮಾರು 6 ಕಿ.ಮೀ.ಗೂ ಹೆಚ್ಚು ದೂರವಿದ್ದ ಈ ಜಾಥಾದ ನೇತೃತ್ವವನ್ನು ಬೆಂಗಳೂರು ಮಹಾನಗರ ಜೆಡಿಎಸ್ ಘಟಕದ ಅಧ್ಯಕ್ಷ, ಮಾಜಿ ಶಾಸಕರಾದ ಹೆಚ್.ಎಂ. ರಮೇಶ್ ಗೌಡ ವಹಿಸಿದ್ದರು. ಅಲ್ಲದೆ, ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಜೆಡಿಎಸ್ ಘಟದ ಅಧ್ಯಕ್ಷ ಟಿ.ಆರ್. ತುಳಸಿರಾಮ್ ಅವರು ಜಾಥಾವನ್ನು ಆಯೋಜಿಸಿದ್ದರು.
ಕ್ಯಾನ್ಸರ್ ತಡೆಗಟ್ಟುವಿಕೆ ವಿಚಾರವಾಗಿ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಮತ್ತು ಹೋಟೆಲ್ ಗಳಲ್ಲಿ ಕಲರ್ ಮತ್ತು ಕೆಮಿಕಲ್ ಬಳಸಿ ಆಹಾರವನ್ನು ತಯಾರಿಸಿ ಮಾರಾಟ ಮಾಡದಂತೆ ಅವರಿಗೆ ಮನವರಿಕೆ ಮಾಡಿಕೊಡುವ ಕರಪತ್ರಗಳನ್ನು ಹೋಟೆಲ್ ಮಾಲೀಕರಿಗೆ, ಗ್ರಾಹಕರಿಗೆ ಹಾಗೂ ಜನತೆಗೆ ಈ ಸಂದರ್ಭದಲ್ಲಿ ಹಂಚಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ರಮೇಶ್ ಗೌಡ ಅವರು; ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಮಹಾಮಾರಿ ವ್ಯಾಪಕವಾಗಿ ಎಲ್ಲಾ ವಯಸ್ಸಿನ ಜನರಲ್ಲಿಯೂ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿದೆ. ಜೀವನ ಶೈಲಿ, ಕಲುಷಿತ ಇಲ್ಲವೇ ರಾಸಾಯನಿಕ ಮಿಶ್ರಿತ ಆಹಾರದಿಂದಲೇ ಇದು ಬರುತ್ತಿದೆ. ಹೀಗಾಗಿ ಜನತೆಯಲ್ಲಿ ಜಾಗೃತಿ ಮೂಡಿಸಬೇಕು ಎಂಬುದು ನಮ್ಮ ಪ್ರಯತ್ನ. ಮಾಜಿ ಪ್ರಧಾನಿಗಳಾದ ದೇವೇಗೌಡರ ಜನ್ಮದಿನದ ಪ್ರಯುಕ್ತ ಇಂಥ ಸಾರ್ಥಕ ಪ್ರಯತ್ನ ಮಾಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಕ್ಯಾನ್ಸರ್ ಸೇರಿದಂತೆ ಅನೇಕ ಮಾರಕ ಕಾಯಿಲೆಗಳಿಂದ ಜನರನ್ನು ಪಾರು ಮಾಡಲು ಅನೇಕ ಉತ್ತಮ ಕ್ರಗಳನ್ನು ಕೈಗೊಂಡಿದೆ. ಆದರೂ ಸಾರ್ವಜನಿಕರ ಪ್ರಯತ್ನ, ಜಾಗೃತಿ ಎನ್ನುವುದು ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಾವು ಜಾಗೃತಿ ಜಾಥಾ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಕಾರ್ಯಾಧ್ಯಕ್ಷ ಕೆ.ವಿ. ನಾರಾಯಣಸ್ವಾಮಿ, ಮಹಿಳಾ ವಿಭಾಗದ ಅಧ್ಯಕ್ಷರಾದ ಶೈಲಾ ಸಂತೋಷ ರಾವ್, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಧ್ಯಕ್ಷ ನಾಗೇಶ್ವರರಾವ್, ಮಹಿಳಾ ಮುಖಂಡರಾದ ಕನ್ಯಾಕುಮಾರಿ, ಬೆಂಗಳೂರು ನಗರದ ವಿಧಾನಸಭಾ ಕ್ಷೇತ್ರ ಅಧ್ಯಕ್ಷರುಗಳಾದ ಬಿ.ಎಸ್.ಗಣೇಶ್ ಬೊಮ್ಮನಹಳ್ಳಿ, ಓ ಪಿ ಓಬಳೇಶ್ ಮಹದೇವಪುರ, ಕೆ ಜೆ ರಮೇಶ್ ಬಿಟಿಎಂ ಲೇಔಟ್, ವಿಜಯಕುಮಾರ್ ಕೃಷ್ಣ ಜಯನಗರ, ಆನಂದ ಕಣ್ಣನ್ ಶಾಂತಿನಗರ, ಚಂದ್ರಶೇಖರ್ ಹೆಬ್ಬಾಳ, ಬಿ ಆರ್ ಪ್ರಕಾಶ್ ಗೌಡ ವಿಜಯನಗರ, ಮಾಜಿ ಅಧ್ಯಕ್ಷರಾದ ಮುನಿವೆಂಕಟಪ್ಪ ಮಹದೇವಪುರ, ಬೆಂಗಳೂರು ನಗರದ ವಿಭಾಗಗಳ ಅಧ್ಯಕ್ಷರುಗಳಾದ ಸ್ಯಾಮುಯಲ್ ಮುಖಂಡರಾದ ವಿ.ಜನಾರ್ಧನ್, ಮಹೇಶ್, ಅಪ್ರೋಜ್ ಬೇಗ್, ಗೋಪಾಲ್ ಹಾಗೂ ಇನ್ನೂ ಮುಂತಾದ ಮುಖಂಡರು ಹಾಗೂ ಪದಾಧಿಕಾರಿಗಳು, ಮಹಿಳಾ ಮುಖಂಡರು ಮತ್ತು ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಜಾಥಾದಲ್ಲಿ ಪಾಲ್ಗೊಂಡಿದ್ದರು.
HAL ನಮ್ಮ ರಾಜ್ಯದ ಹೆಮ್ಮೆ, ಯಾವುದೇ ಕಾರಣಕ್ಕೂ ನೆರೆರಾಜ್ಯಕ್ಕೆ ವರ್ಗಾಯಿಸಲು ಬಿಡಲ್ಲ: ಸಚಿವ ರಾಮಲಿಂಗಾರೆಡ್ಡಿ
ನಾಳೆ ಗುಜರಾತ್, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮು-ಕಾಶ್ಮೀರದಲ್ಲಿ ಅಣಕು ಕವಾಯತು | Mega security drill