ಬೆಂಗಳೂರು: ವಿದ್ಯುತ್ ಸ್ಪರ್ಶದಿಂದ ರಾಜ್ಯದಲ್ಲಿ ಆನೆಗಳು ಸಾವನ್ನಪ್ಪಿರುವ ಬಗ್ಗೆ ಹೈಕೋರ್ಟ್ ಶುಕ್ರವಾರ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ದಾಖಲಿಸಿದೆ.
ಅಶ್ವತ್ಥಾಮ ಎಂಬ ಆನೆ ವಿದ್ಯುತ್ ಸ್ಪರ್ಶದಿಂದ ಅಸಹಜ ಸಾವು ಸಂಭವಿಸಿದೆ ಎಂಬ ಪತ್ರಿಕೆ ವರದಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
“ಕರ್ನಾಟಕ ರಾಜ್ಯದಲ್ಲಿ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಆಘಾತ ಅಥವಾ ಇತರ ಅಸ್ವಾಭಾವಿಕ ಕಾರಣಗಳಿಂದ ಆನೆಗಳು ಸತತವಾಗಿ ಮತ್ತು ಪದೇ ಪದೇ ಸಾವನ್ನಪ್ಪುತ್ತಿರುವುದು ಗಂಭೀರ ವಿಷಯವಾಗಿದೆ. ವಿಶೇಷವಾಗಿ ಆನೆಗಳಿಗೆ ಮತ್ತು ಸಾಮಾನ್ಯವಾಗಿ ವನ್ಯಜೀವಿಗಳಿಗೆ ಸುರಕ್ಷತಾ ಕ್ರಮಗಳನ್ನು ಖಚಿತಪಡಿಸಿಕೊಳ್ಳುವ ಉಸ್ತುವಾರಿ ಅಧಿಕಾರಿಗಳ ಶ್ರದ್ಧೆಯ ಕೊರತೆಯಿಂದಾಗಿ ಈ ಘಟನೆಗಳು ನಡೆದಿವೆ ಎಂದು ಪತ್ರಿಕೆ ವರದಿ ಪ್ರತಿಬಿಂಬಿಸುತ್ತದೆ” ಎಂದು ನ್ಯಾಯಪೀಠ ಹೇಳಿದೆ. “ಆನೆಗಳು ಮತ್ತು ವನ್ಯಜೀವಿಗಳು ಸುರಕ್ಷಿತ ವಾತಾವರಣದಲ್ಲಿ ಬದುಕುವ ಹಕ್ಕನ್ನು ಹೊಂದಿವೆ, ಅಸ್ವಾಭಾವಿಕ ಸಾವು ಅಲ್ಲ, ಏಕೆಂದರೆ ಅವು ಶಾಸನಬದ್ಧ ರಕ್ಷಣೆಯಲ್ಲಿವೆ” ಎಂದು ನ್ಯಾಯಪೀಠ ಹೇಳಿದೆ.
ಮೈಸೂರಿನಲ್ಲಿ ಅಶ್ವತ್ಥಾಮ ಆನೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದು ಆನೆ ಹಾಗೂ ಮಡಿಕೇರಿಯಲ್ಲಿ ಎರಡು ಆನೆಗಳು ಮೃತಪಟ್ಟಿವೆ.ಈ ಎಲ್ಲಾ ಸಾವುಗಳು ವಿದ್ಯುದಾಘಾತದಿಂದ ಸಂಭವಿಸಿವೆ.