ಬೆಂಗಳೂರು: ರಾಜ್ಯದಾದ್ಯಂತ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಇ-ಸ್ವತ್ತು ಜಾರಿಗೆ ತರಲು ಪೂರ್ವಭಾವಿಯಾಗಿ ನಿಯಮಾವಳಿಗಳನ್ನು ರೂಪಿಸಲಾಗುತ್ತಿದ್ದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಇಂದು ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕರಡು ನಿಯಮಾವಳಿಗಳನ್ನು ಪರಿಶೀಲಿಸಿ ಕೆಲವು ಬದಲಾವಣೆಗಳನ್ನು ಸೂಚಿಸಿದರಲ್ಲದೆ, ಒಂದು ವಾರದ ಅವಧಿಯಲ್ಲಿ ಕರಡು ನಿಯಮಾವಳಿಗಳನ್ನು ಪ್ರಕಟಿಸಲು ಸೂಚಿಸಿದರು.
ತೆರಿಗೆ ದರ ಮತ್ತು ಫೀಜುಗಳನ್ನು ವಿಧಿಸುವ ಪ್ರಕ್ರಿಯೆ, ಕಟ್ಟಡಗಳು ಮತ್ತು ಭೂಮಿಯ ಮೇಲೆ ತೆರಿಗೆ ವಿಧಿಸುವುದು, ನಮೂನೆ 11 ಎ ನಿರ್ವಹಣೆ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಅಧಿನಿಯಮ, 2025ರ ನಂತರ ನಮೂನೆ 11-ಎ ರಿಜಿಸ್ಟರ್ಗೆ ಹೊಸ ಆಸ್ತಿಗಳ ಸೇರ್ಪಡೆ, ಮೇಲ್ಮನವಿ, ದಂಡನೆಗಳು, ನೀರು ಸರಬರಾಜು ದರ ಮತ್ತು ಇತರ ದರಗಳ ನಿರ್ಧರಣೆ, ದಂಡ ನಿರ್ಧಾರ, ಸ್ಥಿರಸ್ವತ್ತಿನ ಪರಿಶೀಲನೆ, ಸ್ಥಿರ ಸ್ವತ್ತಿನ ಪರಿಶೀಲನೆ, ಮೇಲ್ಮನವಿ, ತಗಾದೆ ನೋಟೀಸ್, ಜಫ್ತಿ ಮತ್ತು ಮಾರಾಟ ಮುಂತಾದ ವಿಷಯಗಳನ್ನು ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮುನೀಶ್ ಮುದ್ಗಲ್ ಅವರು ಸಭೆಯಲ್ಲಿ ಭಾಗವಹಿಸಿ ಇ-ಸ್ವತ್ತು ರೂಪಿಸುವ ಹಿನ್ನೆಲೆಯಲ್ಲಿ ಹಲವಾರು ಸಲಹೆಗಳನ್ನು ನೀಡಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿ ರಣದೀಪ್, ಪಂಚಾಯತ್ ರಾಜ್ ಆಯುಕ್ತಾಲಯದ ಆಯುಕ್ತೆ ಡಾ.ಅರುಂಧತಿ ಚಂದ್ರಶೇಖರ್ ಹಾಗೂ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.