ಶಿವಮೊಗ್ಗ : ಮಳೆಗಾಲದ ವೇಳೆಯಲ್ಲಿ ಡೆಂಗ್ಯೂ, ಕೋವಿಡ್ ಹೆಚ್ಚಾಗುವುದು ಮಾಮೂಲಿಯಾಗಿದೆ. ಈ ಕೋವಿಡ್ ಹಾಗೂ ಡೇಂಗ್ಯೂ ಬಗ್ಗೆ ಆತಂಕ ಬೇಡ. ಮುಂಜಾಗೃತೆಯಿರಲಿ ಎಂಬುದಾಗಿ ಸಾಗರ ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಉಪವಿಭಾಗೀಯ ಆಸ್ಪತ್ರೆಯಲ್ಲಿ ತಾಲ್ಲೂಕಿನ ಕೊರೋನಾ, ಡೆಂಗ್ಯೂ ನಿಯಂತ್ರಣ ಕ್ರಮಗಳ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮಾಹಿತಿ ಪಡೆದರು. ಈ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ತಾಲ್ಲೂಕಿನಲ್ಲಿ ಕೋವಿಡ್, ಡೆಂಗ್ಯೂ ಹೆಚ್ಚಳವಾಗದಂತೆ ನಿಯಂತ್ರಣ ಕ್ರಮವಹಿಸಬೇಕು. ಕೆಎಫ್ ಡಿ ಬಗ್ಗೆಯೂ ಗಮನಹರಿಸಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಸಾಗರ ತಾಲ್ಲೂಕಿನಲ್ಲಿ ಈವರೆಗೆ ಯಾವುದೇ ಕೋವಿಡ್ ಕೇಸ್ ವರದಿಯಾಗಿಲ್ಲ. ರಾಜ್ಯದ ಬೆಂಗಳೂರು ಸೇರಿದಂತೆ ಇತರೆಡೆ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಈಗಾಗಲೇ ಈ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನಿಯಂತ್ರಣ ಕ್ರಮಕ್ಕೆ ಖಡಕ್ ಸೂಚನೆ ನೀಡಿದ್ದಾರೆ ಎಂದರು.
ಸಾಗರ ತಾಲ್ಲೂಕಿನಲ್ಲಿ ಜ್ವರ, ಶೀತ ಕಾಣಿಸಿಕೊಂಡವರು ಕಡ್ಡಾಯವಾಗಿ ಕೊರೋನಾ ತಪಾಸಣೆಗೆ ಒಳಗಾಗಬೇಕು. ತಪ್ಪದೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ. ಈ ಮೂಲಕ ಕೊರೋನಾ ಪತ್ತೆ, ನಿಯಂತ್ರಣ ಕ್ರಮಕ್ಕೆ ಸಹಕರಿಸುವಂತೆ ಸಾರ್ವಜನಿಕರಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಮನವಿ ಮಾಡಿದರು.
ಕೊರೋನಾ, ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸಂಪೂರ್ಣ ಸನ್ನದ್ಧವಾಗಿದೆ. ಮೂವರು ಸರ್ಕಾರಿ ಆಂಬುಲೆನ್ಸ್ ಚಾಲಕರಿದ್ದಾರೆ. ಇನ್ನೂ ಒಬ್ಬರನ್ನು ಗುತ್ತಿಗೆ ಆಧಾರದಲ್ಲಿ ತೆಗೆದುಕೊಳ್ಳೋದಕ್ಕೆ ಸೂಚಿಸಿದ್ದೇನೆ. ಅರಲಗೋಡು ಆಸ್ಪತ್ರೆಗೆ ಕೆಎಫ್ ಡಿ ಪ್ರಕರಣಗಳ ಹಿನ್ನಲೆಯಲ್ಲಿ ಆಂಬುಲೆನ್ಸ್ ನೀಡಲು ಚಿಂತನೆ ನಡೆಸಲಾಗಿದೆ ಎಂಬುದಾಗಿ ಹೇಳಿದರು.
ಕೋವಿಡ್ ಬಗ್ಗೆ ವೃದ್ಧರು, ಗರ್ಭಿಣಿಯರು, ಮಕ್ಕಳು ಹೆಚ್ಚು ಎಚ್ಚರಿಕೆ ವಹಿಸಬೇಕು. ಸಾಗರದಲ್ಲಿ 20ಕ್ಕಿಂತ ಹೆಚ್ಚು ಕೋವಿಡ್ ಕೇಸ್ ಪತ್ತೆಯಾದರೇ ಸಮುದಾಯ ಭವನ ಅಥವಾ ಇತರೆ ಕಡೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ್ ನಿರ್ಮಿಸಿ ಚಿಕಿತ್ಸೆ ನೀಡಲಾಗುತ್ತದೆ. ಸಾಗರ ನಗರ ವ್ಯಾಪ್ತಿಯಲ್ಲಿ ಡೆಂಗ್ಯೂ ಹರಡದಂತೆ ಸ್ವಚ್ಛತಾ ಕಾರ್ಯ ಕೈಗೊಳ್ಳೋದಕ್ಕೆ ನಗರಸಭೆಗೆ ಸೂಚಿಸಿದ್ದೇನೆ. ಚರಂಡಿ ಸೇರಿದಂತೆ ಇತರೆ ಕಡೆಯಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳುವಂತ ಕೆಲಸವನ್ನು ಸಾರ್ವಜನಿಕರು ನಗರಸಭೆಯೊಂದಿಗೆ ಮಾಡುವ ಮೂಲಕ ಡೆಂಗ್ಯೂ ನಿಯಂತ್ರಣಕ್ಕೆ ಕೈಜೋಡಿಸುವಂತೆ ಕರೆ ನೀಡಿದರು.
ಸಾಗರ ಉಪ ವಿಭಾಗೀಯ ಆಸ್ಪತ್ರೆಗೆ 1.70 ಕೋಟಿ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ 1.65 ಕೋಟಿ ರೂಪಾಯಿ ವೆಚ್ಚದಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲು ಮಂಜೂರು ಮಾಡಲಾಗಿದೆ. ಉಪವಿಭಾಗೀಯ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲು 70 ಕೋಟಿ ಮಂಜೂರಾಗಿದ್ದು, ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತ ತಕ್ಷಣವೇ ಹಣ ಮಂಜೂರಾಗಲಿದೆ. ಆ ಬಳಿಕ ಮೇಲ್ದರ್ಜೆಗೇರಿಸುವಂತ ಕಾರ್ಯ ಆರಂಭಗೊಳ್ಳಲಿದೆ ಎಂದರು.
ಈ ವೇಳೆ ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಉಪಾಧ್ಯಕ್ಷೆ ಸವಿತಾ ವಾಸು, ನಗರಸಭೆ ಸದಸ್ಯ ಗಣಪತಿ ಮಂಡಗಳಲೆ, ಸಾಗರ ಉಪವಿಭಾಧಿಕಾರಿ ಜಗದೀಶ್, ತಹಶೀಲ್ದಾರ್ ಚಂದ್ರಶೇಖರ ನಾಯ್ಕ್, ಪೌರಾಯುಕ್ತ ಹೆಚ್.ಕೆ ನಾಗಪ್ಪ, ಇಓ ಶಿವಪ್ರಸಾದ್, ಸಾಗರ ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಕೆ.ಪರಪ್ಪ, ಡಾ.ನಾಗರಾಜ ನಾಯ್ಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವಸಂತ ಬಿ ಈಶ್ವರಗೆರೆ, ಸಂಪಾದಕರು
ಕನ್ನಡ ತಮಿಳಿಂದ ಹುಟ್ಟಿದೆಂದ ಕಮಲ್ ಹಾಸನ್ ಮಾತು ಒಪ್ಪೋಲ್ಲ: ನಟ ಜಗ್ಗೇಶ್
ನಾಳೆ ಗುಜರಾತ್, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮು-ಕಾಶ್ಮೀರದಲ್ಲಿ ಅಣಕು ಕವಾಯತು | Mega security drill