ಮಂಡ್ಯ : ಮದ್ದೂರು ಪಟ್ಟಣದ ಅಭಿವೃದ್ಧಿಗೆ ಬಿಎಂಐಸಿ ಯೋಜನೆಯಿಂದ ಉಂಟಾಗಿರುವ ತೊಂದರೆ ಕುರಿತು ಸದನದಲ್ಲಿ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಶನಿವಾರ ಹೇಳಿದರು.
ಮದ್ದೂರು ತಾಲೂಕಿನ ಕೆ.ಕೋಡಿಹಳ್ಳಿ ಹಾಗೂ ಶಿವಪುರದ 23 ನೇ ವಾರ್ಡ್ ನಲ್ಲಿ ರಸ್ತೆ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಮದ್ದೂರು ಪುರಸಭೆಯನ್ನು ನಗರಸಭೆಯನ್ನಾಗಿ ಮಾರ್ಪಡಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಆದರೆ, ಪಟ್ಟಣದ ಅಭಿವೃದ್ಧಿಗೆ ಬಿಎಂಐಸಿ ಯೋಜನೆ ಅಡ್ಡಲಾಗಿದ್ದು, ಈ ಯೋಜನೆಯನ್ನು ತೆಗೆದು ಹಾಕುವಂತೆ ಈಗಾಗಲೇ ಸಂಬಂಧ ಪಟ್ಟ ಸಚಿವರು ಹಾಗೂ ಅಧಿಕಾರಿಗಳ ಜೊತೆ ಹಲವಾರು ಬಾರಿ ಚರ್ಚೆ ನಡೆಸಲಾಗಿದೆ ಎಂದರು.
ಬಿಎಂಐಸಿ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣ ದಾಖಲಾಗಿ ವಿಚಾರಣೆ ನಡೆಯುತ್ತಿದೆ. ಹೀಗಾಗಿ ಸೋಮವಾರ ನಡೆಯುವ ವಿಧಾನಸಭಾ ಕಲಾಪದಲ್ಲಿ ಬಿಎಂಐಸಿ ಯೋಜನೆಯ ವಿಚಾರವನ್ನು ಚರ್ಚೆಗೆ ಇಡಲಾಗಿದೆ ಎಂದು ಶಾಸಕ ಉದಯ್ ಸ್ಪಷ್ಟಪಡಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಖಂಡಿಸಿ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ನೇತೃತ್ವದಲ್ಲಿ ನಡೆಯುತ್ತಿರುವ ಧರ್ಮಸ್ಥಳ ಚಲೋ ಕೇವಲ ನಾಟಕೀಯವಾಗಿದೆ ಎಂದು ಲೇವಡಿ ಮಾಡಿದರು.
ಶಾಸಕ ವಿಶ್ವನಾಥ್ ಸೇರಿದಂತೆ ಎಲ್ಲಾ ಬಿಜೆಪಿ ನಾಯಕರು ಅನುಕೂಲಸ್ಥರಾಗಿದ್ದಾರೆ ಅವರ ಬಳಿ ಸಾಕಷ್ಟು ಕಾರುಗಳಿವೆ. ಹೀಗಾಗಿ ಧರ್ಮಸ್ಥಳ ಪ್ರಕರಣದಲ್ಲಿ ತಾವು ಪಕ್ಷದ ಪರ ನಿಂತಿದ್ದೇವೆ ಎಂದು ತೋರಿಸಿಕೊಳ್ಳುವ ಉದ್ದೇಶದಿಂದ 400 ಕಾರುಗಳೊಂದಿಗೆ ಧರ್ಮಸ್ಥಳ ಚಲೋ ನಡೆಸುವುದರೊಂದಿಗೆ ವಿಶ್ವನಾಥ್ ಕ್ರೇಡಿಟ್ ತೆಗೆದುಕೊಳ್ಳುವ ಹುನ್ನಾರವಾಗಿದೆ ಎಂದು ಕಿಡಿಕಾರಿದರು.
ಸಚಿವ ಸ್ಥಾನದಿಂದ ಕೆಳಗಿಳಿಸುವಲ್ಲಿ ನನ್ನ ವಿರುದ್ಧ ದೆಹಲಿಯಲ್ಲಿ ಪಿತೂರಿ ಮಾಡಿದ್ದಾರೆ ಎಂದು ಮಾಜಿ ಕೆ.ಎನ್.ರಾಜಣ್ಣ ಆರೋಪಕ್ಕೆ ಪ್ರತಿಕ್ರಿಯಿಸಿದ ಶಾಸಕ ಉದಯ್ ಪಿತೂರಿ ವಿಚಾರ ನನಗಂತು ಗೊತ್ತಿಲ್ಲ ರಾಜಣ್ಣ ಅವರನ್ನೆ ಕೇಳಿ ಉತ್ತರ ಪಡೆದುಕೊಳ್ಳಿ ಎಂದು ಮಾಧ್ಯಮದವರಿಗೆ ಹಾರಿಕೆ ಉತ್ತರ ನೀಡಿದರು.
ಇದೇ ವೇಳೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ್, ಮನ್ ಮುಲ್ ನಿರ್ದೇಶಕ ಹರೀಶ್ ಬಾಬು, ಯುವ ಘಟಕದ ಅಧ್ಯಕ್ಷ ಕೀರ್ತಿ ಪುರಸಭಾ ಸದಸ್ಯ ಮೋಹನ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಅಪ್ಪೇಗೌಡ ಮುಖಂಡರಾದ ಶಂಕರ್, ನೀಲಯ್ಯ, ರವಿಂದ್ರ ಕುಮಾರ್, ವೆಂಕಟೇಶ್, ಶಿವರಾಜ್, ಶ್ರೀನಿವಾಸ್, ಸತೀಶ್, ಪುಟ್ಟಪ್ಪ, ಸುರೇಶ್, ನಾಗರಾಜ್, ಮಹಾಲಿಂಗಯ್ಯ, ಧನಂಜಯ್, ರಾಜೇಂದ್ರ, ಸುರೇಶ್ ಸೇರಿದಂತೆ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
BREAKING: ಸಾಗರದ ಬಲೇಗಾರು ಬಳಿ ಒಮಿನಿ-ಪಿಕಪ್ ನಡುವೆ ಭೀಕರ ಅಪಘಾತ: ಓರ್ವ ಸಾವು, ಆರು ಮಂದಿಗೆ ಗಾಯ
ಶಾಸಕ ಶಿವಗಂಗಾಗೆ ನೋಟಿಸ್ ನೀಡಲಾಗುವುದು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್